ಮಡಿಕೇರಿ, ಆ. 29: ರಾಜ್ಯ ಅಲ್ಪಸಂಖ್ಯಾತ ಅಭಿವೃದ್ಧಿ ನಿಗಮ ಸಾಲ ಸೌಲಭ್ಯಕ್ಕಾಗಿ ಅರ್ಜಿ ಸಲ್ಲಿಸಲು ನಿಗದಿಪಡಿಸಿದ್ದ ತಾ. 31 ರ ಕಡೇ ದಿನಾಂಕವನ್ನು ಕೊಡಗಿನ ಪ್ರಸ್ತುತ ಪ್ರತಿಕೂಲ ಪರಿಸ್ಥಿತಿಯ ಹಿನ್ನೆಲೆ ಮುಂದೂಡುವಂತೆ ಕರ್ನಾಟಕ ಜನತಾದಳದ ರಾಜ್ಯ ಸಂಘಟನಾ ಕಾರ್ಯದರ್ಶಿ ನಾಪೋಕ್ಲುವಿನ ಎಂ.ಎ. ಮನ್ಸೂರ್ ಅಲಿ ಸರಕಾರವನ್ನು ಕೋರಿದ್ದಾರೆ.

ಇತ್ತೀಚೆಗೆ ಕೊಡಗಿನಲ್ಲಿ ಉಂಟಾದ ಭೂಕುಸಿತ, ಸಾವು-ನೋವು, ಕಷ್ಟ-ನಷ್ಟಗಳಿಂದಾಗಿ ಜನಜೀವನವೇ ಅಸ್ತವ್ಯಸ್ಥಗೊಂಡಿದ್ದು, ಸಂಪರ್ಕ ಕೂಡ ಸಾಧ್ಯವಿಲ್ಲದೆ ಜನರು ಸಂಕಷ್ಟಕ್ಕೀಡಾಗಿದ್ದಾರೆ. ಇಂತಹ ಸಂದರ್ಭದಲ್ಲಿ ಸರಕಾರ ಗೊತ್ತುಪಡಿಸಿರುವ ದಿನಾಂಕದೊಳಗೆ ಅರ್ಹರು ಸಾಲ ಸೌಲಭ್ಯಕ್ಕಾಗಿ ಅರ್ಜಿ ಸಲ್ಲಿಸಲು ಅಸಾಧ್ಯವಾಗಿರುವದರಿಂದ ಅರ್ಜಿ ಸ್ವೀಕಾರದ ದಿನಾಂಕವನ್ನು ಹದಿನೈದು ದಿನಗಳ ಮಟ್ಟಿಗೆ ಮುಂದೂಡುವಂತೆ ಮನ್ಸೂರ್ ವಿನಂತಿಸಿಕೊಂಡಿದ್ದಾರೆ.