ಶನಿವಾರಸಂತೆ, ಆ. 27: ಪಟ್ಟಣದ ಜನತೆ ಶುಕ್ರವಾರ ವರಮಹಾಲಕ್ಷ್ಮೀ ವ್ರತಾಚರಣೆ ಹಾಗೂ ಪೂಜೆಯನ್ನು ಶ್ರದ್ಧಾಭಕ್ತಿಯಿಂದ ಆಚರಿಸಿದರು.

ಸಾಂಪ್ರದಾಯಿಕವಾಗಿ ಆಚರಿಸಿಕೊಂಡು ಬರುವ ಮನೆಗಳಲ್ಲಿ ಕಳಸಕ್ಕೆ ಲಕ್ಷ್ಮಿಯ ಬೆಳ್ಳಿಯ ಮುಖವಾಡವಿರಿಸಿ, ರೇಷ್ಮೆ ಸೀರೆ ಉಡಿಸಿ, ಬಾಳೆಗಿಡ, ಮಾವಿನ ತೋರಣ ಕಟ್ಟಿ, ಕಮಲ, ಕನಕಾಂಬರ, ಮಲ್ಲಿಗೆ, ಸೇವಂತಿಗೆ ಹೂಗಳೊಂದಿಗೆ ಚಿನ್ನಾಭರಣ ತೊಡಿಸಿ ವಿಶೇಷವಾಗಿ ಅಲಂಕರಿಸಿದ್ದರು. ಲಕ್ಷ್ಮಿಗೆ ಇಷ್ಟವಾದ ಹೋಳಿಗೆ, ಪಾಯಸ, ವಿಶೇಷ ಭಕ್ಷ್ಯಗಳನ್ನು ನೈವೇದ್ಯ ಮಾಡಿ ಬ್ರಾಹ್ಮೀ ಮುಹೂರ್ತದಲ್ಲಿ ಪೂಜಾ ಕಾರ್ಯ ನೆರವೇರಿಸಿದರು.

ಸಂಜೆ ವೇಳೆ ಮುತ್ತೈದೆಯರನ್ನು, ಹೆಣ್ಣುಮಕ್ಕಳನ್ನು ಕರೆದು ಹೂ, ಅರಸಿನ - ಕುಂಕುಮದೊಂದಿಗೆ ಉಡುಗೊರೆ ಕೊಟ್ಟು, ಸಿಹಿ ಹಂಚಿ ಪರಸ್ಪರ ಶುಭ ಕೋರಿದರು.

ಪಟ್ಟಣದ ಗಣಪತಿ ದೇವಾಲಯ, ವಿಜಯ ವಿನಾಯಕ ದೇವಾಲಯ ಹಾಗೂ ರಾಮಮಂದಿರದಲ್ಲಿ ವಿಶೇಷ ಪೂಜಾ ಕಾರ್ಯ ನೆರವೇರಿದವು.