ಆಲೂರುಸಿದ್ದಾಪುರ, ಆ. 22: ಕಾಡಾನೆ ಧಾಳಿಗೆ ತುತ್ತಾಗಿ ವ್ಯಕ್ತಿಯೊಬ್ಬರು ಗಂಭೀರವಾಗಿ ಗಾಯಗೊಂಡು ಆಸ್ಪತ್ರೆಗೆ ದಾಖಲಾದ ಘಟನೆ ಬುಧವಾರ ಬೆಳಗ್ಗೆ ಆಲೂರುಸಿದ್ದಾಪುರ ವ್ಯಾಪ್ತಿಯ ದೊಡ್ಡಳ್ಳಿ ಗ್ರಾಮದಲ್ಲಿ ನಡೆದಿದೆ. ಆಲೂರುಸಿದ್ದಾಪುರ ಸಮೀಪದ ಪಟ್ಟಡ ಕಾರ್ಯಪ್ಪ ಕಾಡಾನೆ ಧಾಳಿಗೆ ತುತ್ತಾದ ವ್ಯಕ್ತಿ. ಬುಧವಾರ ಬೆಳಗ್ಗೆ 6-30 ರ ಸುಮಾರಿಗೆ ಕಾರ್ಯಪ್ಪ ಅವರು ತಮ್ಮ ಮನೆಯಿಂದ ಎಂದಿನಂತೆ ಬೈಕಿನಲ್ಲಿ ಆಲೂರುಸಿದ್ದಾಪುರದ ಹಾಲಿನ ಡೈರಿಗೆ ಹಾಲು ನೀಡಲು ಹೋಗುತ್ತಿದ್ದ ಸಂದರ್ಭ ದೊಡ್ಡಳ್ಳಿ ಗ್ರಾಮದ ಬಸವೇಶ್ವರ ದೇವಾಸ್ಥಾನದ ಸಮೀಪ ಬೈಕಿಗೆ ಎದುರುಗೊಂಡ ಒಂಟಿ ಸಲಗವೊಂದು ಧಾಳಿ ನಡೆಸಿದೆ.

ಈ ಸಂದರ್ಭ ಕಾಡಾನೆ ಬೈಕ್‍ನಿಂದ ಕೆಳಗೆ ಬಿದ್ದ ಕಾರ್ಯಪ್ಪ ಅವರ ಎದೆಯ ಭಾಗವನ್ನು ಕೋರೆಯಿಂದ ತಿವಿದು ಗಾಯಗೊಳಿಸಿದೆ. ಕಾಡಾನೆ ಧಾಳಿಯಿಂದ ಕಾರ್ಯಪ್ಪ ಅವರು ಕಿರುಚಿಕೊಂಡಾಗ ಅಕ್ಕಪಕ್ಕದ ಮನೆಯವರು ಘಟನೆ ನಡೆದ ಸ್ಥಳಕ್ಕೆ ಧಾವಿಸಿದ್ದಾರೆ. ಕಾಡಾನೆ ಪಕ್ಕದ ಅರಣ್ಯಕ್ಕೆ ಓಡಿದ್ದು, ಕಾಡಾನೆ ಧಾಳಿಯಿಂದ ಗಂಭೀರವಾಗಿ ಗಾಯಗೊಂಡ ಕಾರ್ಯಪ್ಪ ಅವರನ್ನು ಅರಣ್ಯ ಇಲಾಖೆ ಸಿಬ್ಬಂದಿ ಹಾಸನದ ಆಸ್ಪತ್ರೆಗೆ ಸಾಗಿಸಿ ಚಿಕಿತ್ಸೆ ಕೊಡಿಸಿದ್ದಾರೆ.