ವೀರಾಜಪೇಟೆ, ಆ. 14: ಹಣಕಾಸು ಸಂಸ್ಥೆಗೆ ಚೆಕ್ ನೀಡಿ ಚೆಕ್‍ಬೌನ್ಸ್ ಮಾಡಿದ ಆರೋಪದ ಮೇರೆ ಇಲ್ಲಿನ ಬಿ.ಎಸ್.ಎನ್.ಎಲ್ ಸಂಸ್ಥೆಯ ಉದ್ಯೋಗಿ ಕೆ.ಆರ್.ಬೇಬ ಎಂಬಾಕೆಗೆ ಇಲ್ಲಿನ ಸಮುಚ್ಚಯ ನ್ಯಾಯಾಲಯದಲ್ಲಿರುವ ಪ್ರಿನ್ಸಿಫಲ್ ಮುನ್ಸಿಫ್ ನ್ಯಾಯಾಲಯದ ನ್ಯಾಯಾಧೀಶ ಶಿವಾನಂದಲಕ್ಷ್ಮಣ್ ಅಂಚಿ ಅವರು ಆರು ತಿಂಗಳು ಸಜೆ, ಚೆಕ್ ಬೌನ್ಸ್‍ನ ಹಣ ಮೂರು ಲಕ್ಷ ಜೊತೆಗೆ ಅದರ ವೆಚ್ಚ ಸೇರಿಸಿ ಪಾವತಿಸುವಂತೆ ತೀರ್ಪು ನೀಡಿದ್ದಾರೆ. ಬೇಬ ಎಂಬವರು ತಾ. 1.4.2010 ರಂದು ವೀರಾಜಪೇಟೆಯ ಮೂಕಾಂಬಿಕ ಹಣಕಾಸು ಸಂಸ್ಥೆಯಿಂದ ರೂ. 3 ಲಕ್ಷ ಸಾಲ ಪಡೆದು ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದ ವೀರಾಜಪೇಟೆ ಶಾಖೆಯ ಚೆಕ್ ನೀಡಿದ್ದರು.

ನಿಗದಿತ ದಿನಾಂಕದಲ್ಲಿ ಚೆಕ್‍ನ್ನು ಹಾಜರು ಪಡಿಸಿದಾಗ ಖಾತೆಯಲ್ಲಿ ಹಣವಿಲ್ಲ ಎಂದು ಚೆಕ್‍ನ್ನು ಹಿಂದಿರು ಗಿಸಿದಾಗ ಹಣಕಾಸು ಸಂಸ್ಥೆಯ ಪಾಲುದಾರ ಪಿ. ಮೋಹನ್ ಉತ್ತಯ್ಯ ನ್ಯಾಯಾಲಯ ದಲ್ಲಿ ಕ್ರಿಮಿನಲ್ ಪ್ರಕರಣ ದಾಖಲಿಸಿದ್ದರು.

ಪ್ರಕರಣದ ವಿಚಾರಣೆ ನಡೆಸಿದ ನ್ಯಾಯಾಧೀಶರು ಆರೋಪ ಸಾಬೀತಾದ ಹಿನ್ನೆಲೆಯಲ್ಲಿ ಶಿಕ್ಷೆ ಹಾಗೂ ದಂಡ ವಿಧಿಸಿದ್ದಾರೆ. ಹಣಕಾಸು ಸಂಸ್ಥೆಯ ಪರವಾಗಿ ವಕೀಲರಾದ ಡಿ.ಸಿ. ಧ್ರುವ ವಾದಿಸಿದರು.