ಗೋಣಿಕೊಪ್ಪ ವರದಿ, ಆ. 13 : ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದವರಿಗೆ ಮೂಲಭೂತ ಸೌಕರ್ಯ ಒದಗಿಸುವಲ್ಲಿ ಅಧಿಕಾರಿಗಳು ಮಲತಾಯಿ ಧೋರಣೆ ಅನುಸರಿಸುತ್ತಿದ್ದಾರೆ. ಹಗಲು ರಾತ್ರಿ ಹೋರಾಟ ನಡೆಸಿದರೂ ಕೂಡ ಸ್ಪಂದಿಸುತ್ತಿಲ್ಲ ಎಂದು ಆರೋಪಿಸಿ ಸ್ವಾತಂತ್ರ್ಯ ದಿನಾಚರಣೆಯಂದು ಅರೆಬೆತ್ತಲೆ ಪ್ರತಿಭಟನಾ ಮೆರವಣಿಗೆ ನಡೆಸಲಾಗುವದು ಎಂದು ದಲಿತ ಸಂಘರ್ಷ ಸಮಿತಿ ವಿಭಾಗೀಯ ಸಂಚಾಲಕ ಕೃಷ್ಣಪ್ಪ ತಿಳಿಸಿದ್ದಾರೆ.

ದೇವರಪುರ ಹಾಡಿಗೆ ಮೂಲಭೂತ ಸೌಕರ್ಯ ಕಲ್ಪಿಸಲು ಜಿಲ್ಲಾಧಿಕಾರಿ ಕಚೇರಿ ಎದುರು 8 ದಿನಗಳ ಕಾಲ ಹೋರಾಟ ನಡೆಸಿದ್ದರೂ ಸರ್ಕಾರ ಸ್ಪಂದಿಸಲಿಲ್ಲ. ಇದರಂತೆ ಎಸ್ಸಿ, ಎಸ್ಟಿ ಅವರಿಗೆ ಮೂಲಭೂತ ಸೌಕರ್ಯ ನೀಡಲು ಹಿಂದೇಟು ಹಾಕುತ್ತಿರುವದನ್ನು ಖಂಡಿಸಿ ಸ್ವಾತಂತ್ರ್ಯ ದಿನಾಚರಣೆ ಯನ್ನು ಪ್ರತಿಭಟನೆ ಮೂಲಕ ಆಚರಿಸಲಾಗುವದು ಎಂದು ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ಅಂದು ಬೆ. 11 ಗಂಟೆಯಿಂದ ಗೋಣಿಕೊಪ್ಪ ಪೊನ್ನಂಪೇಟೆ ರಸ್ತೆ ಜಂಕ್ಷನ್‍ನಿಂದ ಅರೆಬೆತ್ತಲೆ ಮೆರವಣಿಗೆ ಯನ್ನು ಉಮಾಮಹೇಶ್ವರಿ ದೇವಸ್ಥಾನ ಆವರಣದವರೆಗೆ ನಡೆಸಿ, ಬಸ್ ನಿಲ್ದಾಣದಲ್ಲಿ ಪ್ರತಿಭಟನೆ ನಡೆಸಲಾಗು ವದು. ನಂತರ ವೃತ್ತ ನಿರೀಕ್ಷಕರ ಕಚೇರಿಗೆ ತೆರಳಿ ಮನವಿ ಸಲ್ಲಿಸಲಾಗುವದು ಎಂದರು.

ಜಿಲ್ಲಾ ಸಂಚಾಲಕ ಪರಶುರಾಮ್ ಮಾತನಾಡಿ, ದೇವರಪುರ ಹಾಡಿಗೆ ಚುನಾವಣೆ ಸಂದರ್ಭ ಮಾತ್ರ ಟ್ಯಾಂಕರ್ ಮೂಲಕ ನೀರು ವಿತರಣೆ ಮಾಡುವ ಮೂಲಕ ಹೋರಾಟಕ್ಕೆ ಸ್ಪಂದಿಸಲಾಗಿತ್ತು. ಜನಪ್ರತಿನಿಧಿಗಳು, ಅಧಿಕಾರಿಗಳು, ಸಮಾಜ ಕಲ್ಯಾಣ ಇಲಾಖೆ ಭರವಸೆ ನೀಡಿ ನಂತರದ ದಿನಗಳಲ್ಲಿ ಯಾವ ಸವಲತ್ತು ಕೂಡ ನೀಡುತ್ತಿಲ್ಲ. ಆಹೋರಾತ್ರಿ ಧರಣಿ ನಡೆಸಿ 4 ತಿಂಗಳು ಕಳೆದರೂ ಅಭಿವೃದ್ಧಿ ಶೂನ್ಯ, ಇದರಿಂದ ದೇವರಪುರ ಹಾಡಿ ನಿವಾಸಿಗಳು ಸಂಕಷ್ಟದಲ್ಲಿಯೇ ಬದುಕು ಸಾಗಿಸುವಂತಾಗಿದೆ ಎಂದರು.

ಸಂಚಾಲಕ ಸಿಂಗಿ ಸತೀಶ್ ಮಾತನಾಡಿ, ಎಸ್ಸಿ, ಎಸ್ಟಿ ಜನಾಂಗದವರ ಅಭಿವೃದ್ಧಿಗೆ ಬರುವ ಅನುದಾನಗಳು ಕಾಣದ ಕೈಗಳ ಪಾಲಾಗುತ್ತಿದೆ. ಇದರಿಂದ ಅಭಿವೃಧ್ದಿ ನಡೆಯುತ್ತಿಲ್ಲ ಎಂದು ಆರೋಪಿಸಿ ದರು. ಗೋಷ್ಠಿಯಲ್ಲಿ ತಾಲೂಕು ಸಂಚಾಲಕ ಕುಮಾರ್, ಸದಸ್ಯ ಪಿ. ಜೆ. ಸುಬ್ರಮಣಿ ಉಪಸ್ಥಿತರಿದ್ದರು.