ಗೋಣಿಕೊಪ್ಪಲು, ಅ. 12: ವಿಪರೀತ ಗಾಳಿ, ಮಳೆಗೆ ತುತ್ತಾಗಿ ಮನೆ ಕಳೆದುಕೊಂಡಿದ್ದ ದ. ಕೊಡಗಿನ ಶ್ರೀಮಂಗಲ ಗ್ರಾ.ಪಂ. ವ್ಯಾಪ್ತಿಯ ಕುರ್ಚಿ ಗ್ರಾಮದ ಕಾಫಿ ಬೆಳೆಗಾರ ಮಚ್ಚಮಾಡ ಕರುಂಬಯ್ಯ ಅವರ ಮನೆಗೆ ಶಾಸಕ ಕೆ.ಜಿ. ಬೋಪಯ್ಯ ಭೇಟಿ ನೀಡಿ ಪರಿಶೀಲನೆ ನಡೆಸಿದರು.ಸ್ಥಳಕ್ಕೆ ಕಂದಾಯ ಇಲಾಖೆಯ ಅಧಿಕಾರಿಗಳಾದ ದೇವಯ್ಯ ಅವರನ್ನು ಕರೆಸಿಕೊಂಡ ಶಾಸಕರು ಸರ್ಕಾರದಿಂದ ಪರಿಹಾರವಾಗಿ 95 ಸಾವಿರವನ್ನು ನೀಡುವಂತೆ ಸೂಚಿಸಿದರು ಸ್ಥಳೀಯ ಗ್ರಾ.ಪಂ.ಯಿಂದ ಆಶ್ರಯ ಮನೆ ಮಂಜೂರು ಮಾಡುವ ಮೂಲಕ ಸಹಕರಿಸುವಂತೆ ನಿರ್ದೇಶನ ನೀಡಿದರು.ಕರ್ನಾಟಕ ರಾಜ್ಯ ರೈತ ಸಂಘದ ಮುಖಂಡರಾದ ಅಜ್ಜಮಾಡ ಚಂಗಪ್ಪ ಮಳೆಯಿಂದ ಹಾನಿಗೊಳಗಾದ ಸ್ಥಳಗಳಿಗೆ ಭೇಟಿ ನೀಡಲು ಶಾಸಕರಲ್ಲಿ ಮನವಿ ಮಾಡಿದ್ದರು.
ರೈತ ಸಂಘದ ಮುಖಂಡರಾದ ಅಯ್ಯಮಾಡ ಹ್ಯಾರಿ ಸೋಮೇಶ್, ಬಾಚಂಗಡ ಭವಿ ಕುಮಾರ್, ಬಿ.ಜೆ.ಪಿ ಪ್ರಮುಖರಾದ ಈಶ್ವರ್, ಮುತ್ತಣ್ಣ, ಸಂಜು, ಮಲ್ಲಂಡ ಮಧು ಮುಂತಾದವರು ಹಾಜರಿದ್ದರು.
ಕಳೆದ 2 ದಿನಗಳ ಹಿಂದೆ ಸುರಿಯುತ್ತಿದ್ದ ಭಾರೀ ಮಳೆಯಿಂದ ಮನೆ ಕುಸಿದಿದ್ದು ಮನೆಯ ನಿವಾಸಿಗಳು ಮನೆಯಿಂದ ಹೊರಗೆ ಇದ್ದ ಹಿನ್ನೆಲೆಯಲ್ಲಿ ಪ್ರಾಣಾಪಾಯದಿಂದ ಪಾರಾಗಿದ್ದರು. ಸುಮಾರು 15 ಲಕ್ಷದಷ್ಟು ನಷ್ಟ ಉಂಟಾಗಿದೆ ಎಂದು ಅಂದಾಜಿಸಲಾಗಿದೆ.