ಚೆಟ್ಟಳ್ಳಿ, ಆ. 2: ಚೆಟ್ಟಳ್ಳಿ ಪಂಚಾಯಿತಿ ವ್ಯಾಪ್ತಿಯ ಚೇರಳ ಗ್ರಾಮದ ಶ್ರೀ ಚೇರಳ ಭಗವತಿ ದೇವಾಲಯದ ತಕ್ಕರಾದ ಚೇರಳ ತಮ್ಮಂಡ ಆನಂದ ಮನೆ ಹಾಗೂ ಸುತ್ತಲಿನ ಮನೆಗಳಿಗೆ ಇಪ್ಪತ್ತೈದು ದಿನಗಳಿಂದ ವಿದ್ಯುತ್ ವ್ಯವಸ್ಥೆ ಇಲ್ಲದೆ ಪರದಾಡುತ್ತಿದ್ದು, ವಿದ್ಯುತ್ ಮಂಡಳಿ ತಲೆಕೆಡಿಸಿಕೊಳ್ಳದೆ ಇರುವ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಮಳೆಗೆ 4 ವಿದ್ಯುತ್ ಕಂಬಗಳು ಮುರಿದು ಹೋಗಿದ್ದು, ದೂರು ಸಲ್ಲಿಸಿದರೂ ಸರಿಪಡಿಸುತ್ತಿಲ್ಲ. ವಿದ್ಯುತ್ ಕಂಬದಿಂದ ವಿದ್ಯುತ್ ವೈರುಗಳು ತುಂಡಾಗಿ ಬೇರ್ಪಟ್ಟಿದ್ದು ಅಪಾಯ ಸ್ಥಿತಿಗೆ ತಲಪಿದೆ. ವಿದ್ಯುತ್ ಇಲಾಖೆಯ ಅಧಿಕಾರಿಗಳಿಗೆ ಫೋನಾಯಿಸಿದರೂ ಯಾವದೇ ಪ್ರಯೋಜನವಾಗಿಲ್ಲ. ಕುಡಿಯುವ ನೀರನ್ನು ಹಲವರು ದೂರದಿಂದ ವಾಹನದಲ್ಲಿ ಮನೆಗೆ ಹೊತ್ತು ತರುವ ಪರಿಸ್ಥಿತಿಯಾಗಿದೆ ಎಂದು ಅಲ್ಲಿನ ನಿವಾಸಿಗಳು ಅವಲತ್ತುಕೊಂಡಿದ್ದಾರೆ.