ಸುಂಟಿಕೊಪ್ಪ, ಜು. 28: ಭಾರತದಲ್ಲಿ ಗುರುವಿಗೆ ಶ್ರೇಷ್ಠ ಸ್ಥಾನವಿದ್ದು ರಾಷ್ಟ್ರೀಯ ಸ್ವಯಂಸೇವಕ ಸಂಘ ತ್ಯಾಗ ಮನೋಭಾವನೆಯಿಂದ ಸಮಾಜ ಕಟ್ಟುವ ಕೆಲಸವನ್ನು ಯಾವದೇ ಪ್ರತಿಫಲ ನಿರೀಕ್ಷಿಸದೆ ಮಾಡುತ್ತಿದೆ ಎಂದು ಸಂಘದ ಜಿಲ್ಲಾ ಪ್ರಚಾರಕ್ ಅವಿನಾಶ್ ಹೇಳಿದರು. ಇಲ್ಲಿನ ಮಂಜುನಾಥಯ್ಯ ಮೀನಾಕ್ಷಮ್ಮ ಕಲ್ಯಾಣ ಮಂಟಪದಲ್ಲಿ ಆಯೋಜಿಸ ಲಾದ ಗುರು ಪೂಜೋತ್ಸವ ಸಮಾರಂಭದಲ್ಲಿ ಮಾತನಾಡಿದ ಅವರು, ಹಿಂದಿನ ಕಾಲದ ಗುರುಕುಲದಲ್ಲಿ ಗುರುಗಳು ತ್ಯಾಗ ಮನೋಭಾವದಿಂದ ಶಿಕ್ಷಣವನ್ನು ಶಿಷ್ಯರಿಗೆ ಧಾರೆಯೆರೆಯುತ್ತಿದ್ದರು. ಶಿಷ್ಯರು ಅಷ್ಟೇ ಗೌರವವನ್ನು ಗುರುಗಳಿಗೆ ಸಲ್ಲಿಸುತ್ತಿದ್ದರು. ಇಂದು ಸ್ವಯಂಸೇವಕರು ಸಮರ್ಪಣಾ ಭಾವದಿಂದ ಸಂಘಟನೆಯಲ್ಲಿ ತೊಡಗಿರುವದರಿಂದ ಭಾರತೀಯ ಪರಂಪರೆಯಲ್ಲಿ ತನ್ನದೇ ಪದ್ಧತಿಗಳನ್ನು ರೂಪಿಸಿಕೊಂಡು ಕಳೆದ 92 ವರ್ಷಗಳಿಂದ ಸಂಘ ಬಲಿಷ್ಠವಾಗಿ ಬೆಳೆದಿದೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು. ಸಮಾಜಕ್ಕಾಗಿ ಪ್ರತಿಯೊಬ್ಬರು ತನ್ನದೇ ಆದ ಕೊಡುಗೆಯನ್ನು ನೀಡಬೇಕು. ಆ ನಿಟ್ಟಿನಲ್ಲಿ ದೇಶದ ಅಭಿವೃದ್ಧಿಯಲ್ಲಿ ಎಲ್ಲರೂ ಕೈ ಜೋಡಿಸಬೇಕೆಂದರು. ಅಧ್ಯಕ್ಷತೆಯನ್ನು ಕಾಫಿ ಬೆಳೆಗಾರ ಗಣೇಶ್ ಮಹೇಂದ್ರ ವಹಿಸಿ ಮಾತನಾಡಿದರು. ಕಾರ್ಯಕ್ರಮದಲ್ಲಿ ಸ್ವಯಂ ಸೇವಕರಾದ ವೇಲುಮುರುಗೇಶ್, ಸೂರ್ಯಕಾಂತ್, ರಮೇಶ್, ಗುಣಶೀಲ, ಕುಶಾಲನಗರ ವಿಶ್ವನಾಥ ರೈ. ಸುಂಟಿಕೊಪ್ಪದ ಹಿಂದೂ ಭಾಂದವರು ಉಪಸ್ಥಿತರಿದ್ದರು. ರಾಖೇಶ್ ಸ್ವಾಗತಿಸಿ, ನಿರೂಪಿಸಿ, ವಂದಿಸಿದರು.