ಸೋಮವಾರಪೇಟೆ,ಜು.12: ಸೋಮವಾರಪೇಟೆ ತಾಲೂಕು ಪತ್ರಕರ್ತರ ಸಂಘದಿಂದ ಕೊಡಮಾಡುವ ವಾರ್ಷಿಕ ಪ್ರಶಸ್ತಿ ಪ್ರಕಟಗೊಂಡಿದ್ದು, ‘ಶಕ್ತಿ’ಗೆ ಎರಡು ಪ್ರಶಸ್ತಿ ಲಭಿಸಿದೆ. ಜಿಲ್ಲಾ ಮಟ್ಟದಲ್ಲೂ 2 ಪ್ರಶಸ್ತಿಯನ್ನು ಪಡೆದಿದ್ದ ಶಕ್ತಿ ಪತ್ರಿಕೆ, ತಾಲೂಕುಮಟ್ಟದಲ್ಲೂ ಪ್ರಶಸ್ತಿಗೆ ಭಾಜನವಾಗಿದೆ.

ಸೋಮವಾರಪೇಟೆ ವಿಭಾಗದ ವರದಿಗಾರ ವಿಜಯ್ ಹಾನಗಲ್ ಬರೆದ ‘ಮದ್ಯ ಮಾರಾಟ ಮುಕ್ತ ನೆಮ್ಮದಿಯ ತಾಣ ಶಾಂತಳ್ಳಿ’ ವರದಿಗೆ, ಶನಿವಾರಸಂತೆ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಹೆಚ್.ಆರ್.ಹರೀಶ್ ಕುಮಾರ್ ತಮ್ಮ ತಂದೆ ಹೆಚ್.ಎಸ್.ರಾಮೇಗೌಡ ಹೆಸರಿನಲ್ಲಿ ಸ್ಥಾಪಿಸಿದ ಅತ್ಯುತ್ತಮ ಗ್ರಾಮೀಣ ವರದಿ ಪ್ರಶಸ್ತಿ ಲಭಿಸಿದೆ. ಇದೇ ವರದಿ ಜಿಲ್ಲಾ ಮಟ್ಟದ ಪ್ರಶಸ್ತಿಗೂ ಆಯ್ಕೆಯಾಗಿದೆ.

ಕುಶಾಲನಗರದ ಶಕ್ತಿ ದಿನಪತ್ರಿಕೆ ವರದಿಗಾರ ಎಂ.ಎನ್. ಚಂದ್ರಮೋಹನ್ ತಮ್ಮ ತಂದೆ ತಾಯಿ ಎಂ. ನಾರಾಯಣ ಮತ್ತು ಎಂ. ಪದ್ಮಾವತಿ ಹೆಸರಿನಲ್ಲಿ ಸ್ಥಾಪಿಸಿರುವ ಅತ್ಯುತ್ತಮ ತನಿಖಾ ವರದಿ ಪ್ರಶಸ್ತಿಗೆ ಕೂಡಿಗೆಯ ‘ಶಕ್ತಿ’ ವರದಿಗಾರ ಕೆ.ಕೆ.ನಾಗರಾಜಶೆಟ್ಟಿಯವರ “ಸಿಬ್ಬಂದಿ ಕೊರತೆಯಿಂದ ನಲುಗುತ್ತಿರುವ ರೇಷ್ಮೆ ಇಲಾಖೆ” ವರದಿ ಆಯ್ಕೆಯಾಗಿದೆ.

ತಾಲೂಕು ಪತ್ರಕರ್ತರ ಸಂಘದ ಅಧ್ಯಕ್ಷ ತೇಲಪಂಡ ಕವನ್ ಕಾರ್ಯಪ್ಪ ತಮ್ಮ ತಂದೆ-ತಾಯಿ ತೇಲಪಂಡ ಶಾರದಾ ಮತ್ತು ಸೋಮಣ್ಣ ಹೆಸರಿನಲ್ಲಿ ಸ್ಥಾಪಿಸಿರುವ ಅತ್ಯುತ್ತಮ ಮಾನವೀಯ ಮೌಲ್ಯವುಳ್ಳ ವರದಿಗೆ ಚೆಟ್ಟಳ್ಳಿಯ ಪತ್ರಕರ್ತ ಪುತ್ತರೀರ ಕರುಣ್ ಕಾಳಯ್ಯ ಅವರ ಸುಧಾ ವಾರಪತ್ರಿಕೆಯಲ್ಲಿ ಪ್ರಕಟವಾದ “ ನಾಗರಹೊಳೆ ಗದ್ದೆ ಹಾಡಿ ಬುಡಕಟ್ಟು ಜನಾಂಗದ ಗೋಳಿನ ಕಥೆ” ಲೇಖನಕ್ಕೆ ಲಭಿಸಿದೆ.

ಕೊಡಗು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಬಿ.ಎಸ್.ಲೋಕೇಶ್ ಸಾಗರ್ ತಮ್ಮ ತಂದೆ-ತಾಯಿ ಬಿ.ಕೆ.ಸುಬ್ಬಯ್ಯ - ಜಯಮ್ಮ ಹೆಸರಿನಲ್ಲಿ ಸ್ಥಾಪಿಸಿರುವ ಅರಣ್ಯ-ಪರಿಸರ ಮತ್ತು ವನ್ಯ ಜೀವಿ ವಿಭಾಗದ ಪ್ರಶಸ್ತಿಗೆ ಸೋಮವಾರಪೇಟೆಯ ವರದಿಗಾರ ಡಿ.ಪಿ. ಲೋಕೇಶ್ ಪ್ರಜಾವಾಣಿಯಲ್ಲಿ ಬರೆದ “ಕಾಡಿನಿಂದ ನಾಡಿನತ್ತ ಕಾಡಾನೆಗಳ ಹೆಜ್ಜೆ” ವರದಿ ಆಯ್ಕೆಯಾಗಿದೆ.

ಪತ್ರಕರ್ತರ ಸಂಘದ ರಾಜ್ಯ ಸಮಿತಿ ನಿರ್ದೇಶಕ ಎಸ್.ಎ. ಮುರಳೀಧರ್ ತಮ್ಮ ಸಹೋದರ ದಿ.ಎಸ್.ಎ.ಗಣೇಶ್ ಹೆಸರಿನಲ್ಲಿ ಪ್ರಾರಂಭಿಸಿರುವ ಅತ್ಯುತ್ತಮ ಕ್ರೀಡಾ ಪ್ರಶಸ್ತಿಗೆ ಸೋಮವಾರಪೇಟೆಯ ವಿಜಯವಾಣಿ ವರದಿಗಾರ ಹಿರಿಕರ ರವಿಯವರು ಬರೆದ “ಕಬಡ್ಡಿಯಲ್ಲಿ ರತನ್ ಮಿಂಚು” ವರದಿಗೆ ಲಭಿಸಿದೆ.

ಪ್ರಶಸ್ತಿಯನ್ನು ತಾ. 15ರಂದು ಸೋಮವಾರಪೇಟೆಯ ಪತ್ರಿಕಾ ಭವನದಲ್ಲಿ ನಡೆಯಲಿರುವ ಸಂಘದ ವಾರ್ಷಿಕ ಮಹಾಸಭೆಯಲ್ಲಿ ವಿತರಿಸಲಾಗುವದು ಎಂದು ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ತೇಲಪಂಡ ಕವನ್ ಕಾರ್ಯಪ್ಪ ತಿಳಿಸಿದ್ದಾರೆ.