ಗೋಣಿಕೊಪ್ಪಲು, ಜು. 6: ವೀರಾಜಪೇಟೆ ತಾಲೂಕು ಕೇಂದ್ರದಲ್ಲಿರುವ ಸರಕಾರಿ ಪದವಿ ಪೂರ್ವ ಕಾಲೇಜು ಸುಮಾರು 130 ವರ್ಷಗಳ ಹಿಂದೆ ಸ್ಥಾಪನೆಗೊಂಡಿದೆ. ಸಾವಿರಾರು ವಿದ್ಯಾರ್ಥಿಗಳು ಈ ಕಾಲೇಜಿನಲ್ಲಿ ವಿದ್ಯಾರ್ಜನೆ ಮಾಡಿದ್ದರು. ಆರಂಭದಲ್ಲಿ ಇದ್ದ ಸ್ಥಿತಿಯಲ್ಲಿಯೇ ಕಾಲೇಜು ಈಗಲೂ ಮುಂದುವರೆಯುತ್ತಿದೆ. ಕಟ್ಟಡ ದುರಸ್ತಿ ಕಾಣದೆ, ಶಿಥಿಲಾವಸ್ಥೆಗೆ ತಲಪಿದೆ. ಕಟ್ಟಡದ ಗೋಡೆಗಳಲ್ಲಿ ಅಲ್ಲಲ್ಲಿ ಬಿರುಕು, ಪ್ಲಾಸ್ಟ್ರಿಂಗ್ ಕಿತ್ತು ಬಂದಿದೆ. ಕೆಲವು ಗೋಡೆ ಬಿದ್ದು ದೊಡ್ಡ ಕಿಂಡಿಯಾಗಿದೆ. ಹೆಂಚುಗಳು ಹಳತಾಗಿ, ಕೆಲವು ಹೆಂಚುಗಳು ತೂತಾಗಿ, ಎಲ್ಲಾ ತರಗತಿ ಕೊಠಡಿಗಳು ಮಳೆಯಿಂದ ಸೋರುತ್ತಿವೆ. ಬೆಂಚ್‍ಗಳು, ಡೆಸ್ಕ್‍ಗಳು 130 ವರ್ಷದ ಪಳೆಯುಳಿಕೆಗಳಂತಾಗಿವೆ.

ಕುಡಿಯುವ ನೀರಿನ ವ್ಯವಸ್ಥೆ, ಶೌಚಾಲಯದ ಸ್ಥಿತಿ ಗಂಭೀರವಾಗಿದೆ. ಪ್ರಾಂಶುಪಾಲರಿಗೆ ಸರಿಯಾದ ಕೊಠಡಿ ಇಲ್ಲದಂತಾಗಿದೆ. ಸಭಾಂಗಣವಂತೂ ಇಲ್ಲವೇ ಇಲ್ಲ. ಇಷ್ಟೆಲ್ಲಾ ನ್ಯೂನತೆಗಳ ನಡುವೆ ಈ ಭಾಗದ ಮಕ್ಕಳ ವಿದ್ಯೆಯ ಹಸಿವು ನೀಗಿಸುತ್ತಿರುವ ವೀರಾಜಪೇಟೆಯ ಜೂನಿಯರ್ ಕಾಲೇಜು ಈಗ ಅಕ್ಷರಶಃ ಸರ್ಕಾರದ ಅನುದಾನಕ್ಕಾಗಿ ಕಾಯುತ್ತಿದೆ.

ಇಲ್ಲಿಯ ಸಮಸ್ಯೆಗಳ ಬಗ್ಗೆ ಮಾಹಿತಿ ತಿಳಿದ ಜೆಡಿಎಸ್ ಜಿಲ್ಲಾಧ್ಯಕ್ಷ ಸಂಕೇತ್ ಪೂವಯ್ಯ ಸ್ವಯಂ ಪ್ರೇರಣೆಯಿಂದ ಕಾಲೇಜಿಗೆ ಭೇಟಿ ನೀಡಿ, ಕಾಲೇಜಿನ ಅವ್ಯವಸ್ಥೆ, ಕಟ್ಟಡ ನಿರ್ವಹಣೆಯಿಲ್ಲದಿರುವ ಬಗ್ಗೆ ಕಾಲೇಜಿನ ಪ್ರಾಂಶುಪಾಲೆ ಜ್ಯೋತಿ ಅವರೊಡಗೂಡಿ ಖುದ್ದು ವೀಕ್ಷಣೆ ನಡೆಸಿದರು. ಕಾಲೇಜಿನ ಸಮಸ್ಯೆಗಳ ವಿವರ ಪಡೆದ ಅವರು ಸರ್ಕಾರದ ವತಿಯಿಂದ ಪರಿಹಾರ ಕಂಡುಕೊಳ್ಳುವ ನಿಟ್ಟಿನಲ್ಲಿ ಕಾಲೇಜಿನ ಪ್ರಾಂಶುಪಾಲರು ಹಾಗೂ ಉಪನ್ಯಾಸಕರೊಂದಿಗೆ ಚರ್ಚೆ ನಡೆಸಿ ನೀಡಿದ ಮನವಿಯನ್ನು ಸ್ವೀಕರಿಸಿದರು. ಈ ಬಗ್ಗೆ ಶಿಕ್ಷಣ ಸಚಿವ ಎನ್. ಮಹೇಶ್ ಅವರೊಂದಿಗೆ ಚರ್ಚಿಸಿ ಸಮಸ್ಯೆ ಪರಿಹಾರದ ಬಗ್ಗೆ ಭರವಸೆ ನೀಡಿದರು.

ಜಿಲ್ಲಾ ಪಂಚಾಯಿತಿ ವತಿಯಿಂದ ಕಾಲೇಜಿನ ಪರಿಹಾರಕ್ಕೆ ಪ್ರಯತ್ನಿಸುವ ಬಗ್ಗೆ ಆಶಾ ಭಾವನೆ ವ್ಯಕ್ತಪಡಿಸಿದರು. ಸಭಾಂಗಣ ನಿರ್ಮಾಣ ಬಗ್ಗೆಯೂ ಸಮಾನ ಮನಸ್ಕರೊಡನೆ ಚರ್ಚಿಸುವದಾಗಿ ಹೇಳಿದರು.

- ಹೆಚ್.ಕೆ. ಜಗದೀಶ್