ವೀರಾಜಪೇಟೆ, ಜು. 6: ಮರಂದೋಡ ಗ್ರಾಮದಲ್ಲಿ ಅನೇಕ ದಶಕಗಳಿಂದ ಯಾವದೇ ಜನಪರ ಅಭಿವೃದ್ಧಿ ಕಾರ್ಯಗಳು ನಡೆದಿಲ್ಲ. ಗ್ರಾಮಸ್ಥರಿಗೆ ಕನಿಷ್ಟ ಮೂಲಭೂತ ಸೌಲಭ್ಯಗಳು ದೊರೆತ್ತಿಲ್ಲ. ಗ್ರಾಮದ ಸಮಸ್ಯೆಗಳಿಗೆ ಸೂಕ್ತ ಪರಿಹಾರ ಹಾಗೂ ಗ್ರಾಮಸ್ಥರ ವಿವಿಧ ಬೇಡಿಕೆಗಳನ್ನು ಪರಿಶೀಲಿಸಿ ಹಂತ ಹಂತವಾಗಿ ಈಡೇರಿಸಲು ಯತ್ನಿಸಲಾಗುವದು. ಗ್ರಾಮಸ್ಥರ ಒಮ್ಮತ ಅಭಿವೃದ್ಧಿಯ ಸಂಕೇತ ಎಂದು ಜನತಾ ದಳದ ಜಿಲ್ಲಾಧ್ಯಕ್ಷ ಮೇರಿಯಂಡ ಸಂಕೇತ್ ಪೂವಯ್ಯ ಹೇಳಿದರು.

ಮರಂದೋಡ ಗ್ರಾಮಸ್ಥರಿಂದ ರಾಜಕೀಯ ರಹಿತವಾಗಿ ಗ್ರಾಮದ ಧವಸ ಭಂಡಾರದ ಸಭಾಂಗಣದಲ್ಲಿ ಆಯೋಜಿಸಿದ್ದ ಸಭೆಯನ್ನುದ್ದೇಶಿಸಿ ಮಾತನಾಡಿದ ಸಂಕೇತ್ ಪೂವಯ್ಯ, ಮೂಲ ಸೌಲಭ್ಯಗಳ ಕೊರತೆಯಿಂದ ದಶಕಗಳಿಂದಲೂ ಮರಂದೋಡ ಕುಗ್ರಾಮವೆಂದೂ ಬಣ್ಣಿಸುವಂತಾಗಿದೆ. ಮರಂದೋಡ ಗ್ರಾಮದಲ್ಲಿನ ಕಾಫಿ ತೋಟಕ್ಕೆ ಸುಮಾರು 25 ಕಾಡಾನೆಗಳು ನಿರಂತರವಾಗಿ ಉಪಟಳ ನೀಡುತ್ತಿದ್ದು, ಬೆಳೆಗಾರರ ಫಸಲನ್ನು ನಾಶಪಡಿಸುತ್ತಿದೆ. ಅರಣ್ಯ ಇಲಾಖೆಯ ಜಿಲ್ಲೆಯ ಮುಖ್ಯ ಸಂರಕ್ಷಣಾಧಿಕಾರಿ ಸಮ್ಮುಖದಲ್ಲಿ ಗ್ರಾಮಸ್ಥರ ಸಭೆ ನಡೆಸಿ ಪರಿಹಾರ ಕಂಡು ಹಿಡಿಯಲಾಗುವದು. ಗ್ರಾಮಕ್ಕೆ ವಿದ್ಯುತ್ ಸಂಪರ್ಕಕ್ಕೆ ಸಂಬಂಧಿಸಿದಂತೆ ನಿರಂತರ ವಿದ್ಯುತ್ ಸಂಪರ್ಕಕ್ಕಾಗಿ ಸುಮಾರು 25 ಗ್ರಾಮಗಳನ್ನು ಸೇರಿಸಿ ಒಂದು ವಿದ್ಯುತ್ ಸಬ್‍ಸ್ಟೇಶನ್ ಸ್ಥಾಪನೆ, ಗ್ರಾಮದಲ್ಲಿ ಪಶು ವೈದ್ಯಕೀಯ ಶಾಲೆಯ ಸ್ಥಾಪನೆ, ಆರೋಗ್ಯ ಕೇಂದ್ರಕ್ಕೆ ವೈದ್ಯರುಗಳ ನೇಮಕ, ರಸ್ತೆ ದುರಸ್ತಿ, ಅಗತ್ಯವಿರು ವೆಡೆಗಳಲ್ಲಿ ಹೊಸ ರಸ್ತೆ ನಿರ್ಮಾಣ, ಗ್ರಾಮಕ್ಕೆ ಕುಡಿಯುವ ನೀರಿನ ಪೊರೈಕೆಗಾಗಿ ಹೊಸ ಟ್ಯಾಂಕ್‍ಗಳ ನಿರ್ಮಾಣ, ಹೊಸ ಪೈಪುಗಳ ಜೋಡಣೆ, ಹರಿಜನ-ಗಿರಿಜನ ಕಾಲೋನಿಗೆ ಹಕ್ಕುಪತ್ರ ವಿತರಣೆ, ಸಾರಿಗೆ ಬಸ್ ಸೌಲಭ್ಯ ಮಾಡಲಾಗುವದು. ಮುಖ್ಯಮಂತ್ರಿ ಕುಮಾರಸ್ವಾಮಿ ರೈತಸ್ನೇಹಿಯಾಗಿರುವದರಿಂದ ಕೊಡಗಿನ ರೈತರ ಎಲ್ಲ ಬೇಡಿಕೆಗಳು ಈಡೇರಲಿವೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಸರಕಾರದ ಬಳಿ ಗ್ರಾಮಸ್ಥರ ನಿಯೋಗ

ಮುಂದಿನ 15 ದಿನಗಳೊಳಗೆ ಮರಂದೋಡ ಗ್ರಾಮದ ಪ್ರಮುಖ ಗ್ರಾಮಸ್ಥರ ನಿಯೋಗದೊಂದಿಗೆ ಬೆಂಗಳೂರಿಗೆ ತೆರಳಿ ಸಂಬಂಧಿಸಿದ ಸಚಿವರನ್ನು ಭೇಟಿ ಮಾಡಿ ಬೇಡಿಕೆಗಳನ್ನು ಸಲ್ಲಿಸಿ ವಿಳಂಬವಿಲ್ಲದೆ ಈಡೇರಿಸಲಾಗುವದು ಎಂದು ಸಂಕೇತ್ ಪೂವಯ್ಯ ಸಭೆಯಲ್ಲಿ ಭರವಸೆ ನೀಡಿದರು. ಸಭೆಯಲ್ಲಿ ಊರಿನ ಪ್ರಮುಖರಾದ ಅನ್ನಡಿಯಂಡ ದಿಲೀಪ್, ಮಾರ್ಚಂಡ ಗಣೇಶ್, ಚೋಯಮಂಡ ಗಣಪತಿ, ಮಾರ್ಚಮಡ ಪ್ರವೀಣ್, ಬಿ.ಇ. ಯಮುನಾ, ಮಾರ್ಚಂಡ ಬಾಬಿ ತಿಮ್ಮಯ್ಯ, ಚೋಯಮಾಡಂಡ ಹರೀಶ್ ಮೊಣ್ಣಪ್ಪ ಮತ್ತಿತರರು ಮಾತನಾಡಿದರು.

ತಕ್ಕ ಮುಖ್ಯಸ್ಥರಾದ ಮಾರ್ಚಂಡ ಅಯ್ಯಪ್ಪ, ಅನ್ನಡಿಯಂಡ ಅಚ್ಚಪ್ಪ, ಅನ್ನಮಂಡ ನರೇಶ್, ಮೇರಿಯಂಡ ಹರೀಶ್, ಅನ್ನಡಿಯಂಡ ನೂತನ್, ನಿಡುಮಂಡ ಹರೀಶ್, ಮೇರಿಯಂಡ ಕರುಂಬಯ್ಯ, ಪ್ರತೀಶ್, ಕೆ.ಜಿ. ಗಿರೀಶ್, ಅನಿತಾ ಪೂವಮ್ಮ, ಚಿಣ್ಣಮ್ಮ, ಶೀಲಾ, ಚೋಂದು, ಎಂ.ಕೆ. ಪೊನ್ನಪ್ಪ, ರಾಜೇಶ್ ಮತ್ತಿತರ ಪ್ರಮುಖರು, ಗ್ರಾಮಸ್ಥರು ಹಾಜರಿದ್ದರು.