*ಗೋಣಿಕೊಪ್ಪಲು, ಜೂ. 20: ಮೋದಿ ಸರ್ಕಾರದ 4 ವರ್ಷದ ಸಾಧನೆಯ ಮಾಹಿತಿ ಒಳಗೊಂಡ ಕಿರುಹೊತ್ತಿಗೆಯನ್ನು ಸಂಸದ ಪ್ರತಾಪ್ ಸಿಂಹ ಮತ್ತು ಶಾಸಕ ಕೆ.ಜಿ. ಬೋಪಯ್ಯ ಕಾರ್ಯಕರ್ತರು ಹಾಗೂ ಸಾರ್ವಜನಿಕರಿಗೆ ಹಂಚುವ ಮೂಲಕ ಕೇಂದ್ರ ಸರ್ಕಾರದ ಸಾಧನೆಯನ್ನು ಪ್ರಚಾರ ಪಡಿಸಿದರು.

ಪರಿಮಳ ಮಂಗಳ ವಿಹಾರದಲ್ಲಿ ನಡೆದ ಶಾಸಕರಿಗೆ ಅಭಿನಂದನಾ ಸಮಾರಂಭದಲ್ಲಿ ಕಿರುಹೊತ್ತಿಗೆಯನ್ನು ಹಂಚಲಾಯಿತು. ನಂತರ ಮಾತನಾಡಿದ ಸಂಸದರು ಮೋದಿ ಸರ್ಕಾರದಿಂದ ಭಾರತ ದೇಶ ಪ್ರಪಂಚದಲ್ಲೇ ಗುರುತಿಸಿ ಕೊಳ್ಳುವಂತಾಗಿದೆ. ಪ್ರಸಿದ್ಧ ವ್ಯಕ್ತಿಗಳ ಸಾಲಿನಲ್ಲಿ ಮೂರನೇ ವ್ಯಕ್ತಿಯಾಗಿ ಮೋದಿ ನಿಂತಿರುವದು ಭಾರತೀಯರಾದ ನಮಗೆ ಹೆಮ್ಮೆಯ ವಿಚಾರ. ಇಂತಹ ಮಹಾನ್ ವ್ಯಕ್ತಿಯ ಆಡಳಿತದಿಂದ ದೇಶ ಅಭಿವೃದ್ಧಿ ಕಾಣುತ್ತಿದೆ ಎಂದು ಹೇಳಿದರು. ಈ ಸಂದರ್ಭ ರಾಜ್ಯ ಪ್ರವಾಸೋದ್ಯಮ ಸಮಿತಿ ಉಪಾಧ್ಯಕ್ಷ ಕಾಡ್ಯಮಾಡ ಗಿರೀಶ್ ಗಣಪತಿ, ಜಿಲ್ಲಾ ಯುವ ಮೋರ್ಚಾ ಅಧ್ಯಕ್ಷ ಗಪ್ಪು, ತಾಲೂಕು ಖಜಾಂಚಿ ಚೋಡುಮಾಡ ಶ್ಯಾಮ್ ಪೂಣಚ್ಚ ಸೇರಿದಂತೆ ಕಾರ್ಯಕರ್ತರು ಹಾಜರಿದ್ದರು.