ಮಡಿಕೇರಿ, ಜೂ. 5: ಮಡಿಕೇರಿಯ ಸ್ಟಿವರ್ಟ್ ಹಿಲ್ನಲ್ಲಿರುವ ಆಕಾಶವಾಣಿ ಸಿಬ್ಬಂದಿಗಳ ವಸತಿಗೃಹದಲ್ಲಿ ನಿನ್ನೆ ರಾತ್ರಿ ಕಳ್ಳತನವಾಗಿದೆ. ಎದುರು - ಬದಿರು ಬಾಗಿಲುಗಳಿರುವ ಮನೆಗಳ ಬಾಗಿಲುಗಳನ್ನು ಒಂದಿಷ್ಟು ಸದ್ದು ಬಾರದಂತೆ ಮುರಿದು ಒಳನುಗ್ಗಿ ಸಾಮಗ್ರಿಗಳೆನ್ನೆಲ್ಲ ಚೆಲ್ಲಾಪಿಲ್ಲಿ ಮಾಡಿ ಕೈಗೆ ಸಿಕ್ಕಿದನ್ನು ದೋಚಿಕೊಂಡು ಹೋಗಿದ್ದಾರೆ. ಯಾರೂ ಇಲ್ಲದ, ಬೀಗ ಜಡಿದಿರುವ ಮೂರು ಮನೆಗಳಿಗೆ ನುಗ್ಗಿರುವ ಕಳ್ಳರು ಒಂದು ಮನೆಯಲ್ಲಿ ಕಳವು ಮಾಡಿದ್ದು, ಇನ್ನೆರಡು ಮನೆಗಳಲ್ಲಿ ಏನೂ ಸಿಗದ ಕಾರಣ ಹಾಗೆ ಹಿಂತೆರಳಿದ್ದಾರೆ.ಆಕಾಶವಾಣಿ ಕಾರ್ಯಕ್ರಮ ನಿರ್ವಾಹಕ, ಪ್ರಸ್ತುತ ಪ್ರಭಾರ ನಿಲಯ ನಿರ್ದೇಶಕರಾಗಿ ಪಿ. ಬಾಲನ್, ಚಾಲಕ ರಾಮನಾಯಕ್ ಹಾಗೂ ನಿಲಯ ನಿರ್ದೇಶಕಾರಿದ್ದ ರಾಘವೇಂದ್ರ ಬಳ್ಳಾರಿ ಅವರುಗಳ ಗೃಹಗಳಿಗೆ ಕಳ್ಳರು ನುಗ್ಗಿದ್ದಾರೆ. ಬಾಲನ್ ಅವರು ನಿನ್ನೆ ತಾನೇ ತಮ್ಮ ಊರು ಕೇರಳದಿಂದ ಹಿಂತಿರುಗಿ ಬಂದಿದ್ದು, ಅವರ ಸಂಬಂಧಿಕರು ಮಡಿಕೇರಿಯಲ್ಲಿ ತಂಗಿದ್ದ ಹೋಂಸ್ಟೇಯಲ್ಲಿ ಬಂಧುಗಳೊಂದಿಗೆ ತಂಗಿದ್ದರು. ರಾತ್ರಿ ವೇಳೆ ಕಳ್ಳರು ಬೀಗ ಮುರಿದು ಒಳನುಗ್ಗಿ ಮನೆಯೊಳಗಿದ್ದ ವಸ್ತುಗಳು, ಬಟ್ಟೆ, ಬರೆ ದಾಖಲೆಗಳನ್ನು ಚೆಲ್ಲಾಪಿಲ್ಲಿ ಮಾಡಿ ಸಂಪೂರ್ಣ ಹುಡುಕಾಡಿದ್ದಾರೆ. ಮನೆಯಲ್ಲಿದ್ದ ಲ್ಯಾಪ್ಟಾಪ್, ಟಿವಿ, ಹಾರ್ಡ್ ಡಿಸ್ಕ್ ಹಾಗೂ ರೂ. 40 ಸಾವಿರ ನಗದನ್ನು ದೋಚಿದ್ದಾರೆ.
ಇತ್ತ ರಾಘವೇಂದ್ರ ಬಳ್ಳಾರಿ ಅವರು ನಿವೃತ್ತಿ ಹೊಂದಿ ಇತ್ತೀಚೆಗಷ್ಟೇ ವಸತಿಗೃಜ ಖಾಲಿ ಮಾಡಿ ಹೋಗಿದ್ದರಿಂದ
(ಮೊದಲ ಪುಟದಿಂದ) ಆ ಮನೆಯಲ್ಲಿ ಕಳ್ಳರಿಗೆ ಏನೂ ಸಿಗಲಿಲ್ಲ. ಬೀಗವನ್ನು ಒಡೆದು ಎದುರಿನ ಹೂತೋಟದಲ್ಲಿ ಎಸೆದು ಹೋಗಿದ್ದಾರೆ. ರಾಮನಾಯಕ್ ಅವರು ಸಂಸಾರ ಸಹಿತ ಊರಿಗೆ ಹೋಗಿದ್ದರಿಂದ ಅವರ ಮನೆಗೂ ಕಳ್ಳರು ನುಗ್ಗಿದ್ದಾರೆ. ಬೀಗ ಮುರಿದಾಗ ‘ಡೋರ್ ಲಾಕ್’ ಹಾಕಿದ್ದರಿಂದ ಕಬ್ಬಿಣದ ಸಲಾಖೆಯಿಂದ ಬಾಗಿಲನ್ನು ಮೀಟಿದ್ದಾರೆ.
ಮೀಟಿದ ರಭಸಕ್ಕೆ ಬಾಗಿಲು ಇಬ್ಭಾಗವಾಗಿದೆ. ಆದರೂ ಕೂಡ ಎದುರು ಮನೆಯಲ್ಲಿ ಮಲಗಿದ್ದವರಿಗೆ ಒಂದಿಷ್ಟು ಕೂಡ ಸದ್ದು ಕೇಳಿಲ್ಲವೆಂದು ಹೇಳುತ್ತಾರೆ. ಒಳ ನುಗ್ಗಿದ ಕಳ್ಳರು ಮನೆಯಲ್ಲಿ ಟಿವಿ, ರೇಡಿಯೋಗಳಿದ್ದರೂ ಏನನ್ನು ಕಳವು ಮಾಡದೆ ಹಿಂತೆರಳಿದ್ದಾರೆ.
ಘಟನಾ ಸ್ಥಳಕ್ಕೆ ಇಂದು ನಗರ ಅಪರಾಧ ವಿಭಾಗ ಠಾಣಾಧಿಕಾರಿ ಷಣ್ಮುಖ ಹಾಗೂ ಸಿಬ್ಬಂದಿಗಳು, ಬೆರಳಚ್ಚು ತಜ್ಞರು ಆಗಮಿಸಿ ಪರಿಶೀಲಿಸಿದರು. ಶ್ವಾನದಳ ಬಂದಿತ್ತಾದರೂ ವಸತಿಗೃಹದ ಆವರಣದೊಳಗಡೆ ಅಡ್ಡಾಡಿ ಸುಮ್ಮನಾಗಿದೆ. ಬಾಲನ್ ಅವರು ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಶೋಧ ಕಾರ್ಯದಲ್ಲಿ ತೊಡಗಿದ್ದಾರೆ.
-ಮಾಹಿತಿ : ಟಿ.ಜಿ. ಸತೀಶ್, ಚಿತ್ರ : ಲಕ್ಷ್ಮೀಶ್