ಕೂಡಿಗೆ, ಜೂ. 3: ಕೂಡಿಗೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕೂಡಿಗೆ ಕೊಪ್ಪಲು, ಹೆಗ್ಡಳ್ಳಿ, ಕೋಟೆ ವ್ಯಾಪ್ತಿಯ ಶ್ರೀ ದಂಡಿನಮ್ಮ, ಶ್ರೀ ಬಸವೇಶ್ವರ ಹಾಗೂ ಶ್ರೀ ಮತ್ತತ್‍ರಾಯ ಮತ್ತು ಗ್ರಾಮಗಳ ಸೇವಾ ಸಮಿತಿಗಳಿಂದ ಗ್ರಾಮ ದೇವತೆ ದಂಡಿನಮ್ಮ ತಾಯಿಯ ವಾರ್ಷಿಕ ಹಬ್ಬ ಶ್ರದ್ಧಾಭಕ್ತಿಯಿಂದ ನಡೆಯಿತು.

ಪೂಜೋತ್ಸವದ ಅಂಗವಾಗಿ ಗಣಪತಿ ಹೋಮ, ನವಗ್ರಹ ಶಾಂತಿ ಹೋಮ, ದುರ್ಗಿ ಶಾಂತಿ ಹೋಮ ನಡೆದವು. ಗ್ರಾಮಸ್ಥರುಗಳು ಬೆಳಿಗ್ಗಿನಿಂದ ಉಪವಾಸ ವ್ರತ ಆಚರಿಸಿದ ಮಕ್ಕಳಗಳನ್ನೊಳ ಗೊಂಡಂತೆ ಹೊಸದಾಗಿ ಮದುವೆ ಯಾದ ದಂಪತಿಗಳು, ಸಮೀಪದಲ್ಲೆ ಹರಿಯುವ ಕಾವೇರಿ ನದಿಗೆ ತೆರಳಿ ಸಮಿತಿಯ ವತಿಯಿಂದ ನೀಡಲಾದ ಬಾಳೆಹಣ್ಣಿನ ಕುಕ್ಕೆ ಹಾಗೂ ಮಹಿಳೆಯರು ದೂಪದ ಆರತಿಯನ್ನು ಹಿಡಿದು ಕಾವೇರಿ ನದಿಗೆ ಪೂಜೆ ಸಲ್ಲಿಸಿದರು.

ನಂತರ ಮಾರ್ಗದಲ್ಲೆ ಇರುವ ಮತ್ತತ್‍ರಾಯರಿಗೆ ಮೊದಲು ಪೂಜೆ ಸಲ್ಲಿಸಿ, ಗ್ರಾಮದ ಪ್ರಮುಖ ಬೀದಿಯಲ್ಲಿ ಸರತಿ ಸಾಲಿನಲ್ಲಿ ಮಂಗಳವಾಧ್ಯ ಗಳೊಂದಿಗೆ ಮಧ್ಯರಾತ್ರಿ 12 ಗಂಟೆವರೆಗೆ ಮೆರವಣಿಗೆಯಲ್ಲಿ ಸಾಗಿದರು.

ಆನಂತರ ಕೋಟೆ ಗ್ರಾಮ ದಲ್ಲಿರುವ ದಂಡಿನಮ್ಮ ದೇವಾಲಯದ ಆವರಣಕ್ಕೆ ಬಂದು ದೇವಾಲಯ ಎದುರಿನಲ್ಲಿ ಹಾಕಿದ್ದ ಬೆಂಕಿ ಕೊಂಡವನ್ನು ಹಾಯುವುದರ ಮೂಲಕ ಸಾಂಪ್ರದಾಯಿಕವಾಗಿ ನಡೆದುಕೊಂಡು ಬಂದ ಕೊಂಡೋತ್ಸ ವವನ್ನು ಹಾಯ್ದು ದೇವಾಲಯದ ಒಳಗಡೆಗೆ ಸರತಿಯಲ್ಲಿದ್ದವರು ಸಾಗಿ ತಮ್ಮ ಭಕ್ತಿ ಸಮರ್ಪಿಸಿದರು.

ಈ ಸಂದರ್ಭ ಗ್ರಾಮಸ್ಥರುಗಳು ಬೆಂಕಿಕೊಂಡವನ್ನು ಹಾಯ್ದು ನಂತರ ಗ್ರಾಮದ ಪದ್ಧತಿಯಂತೆ ರಾತ್ರಿ ರಾಮಬಾಣ ಬಿರುಸುಗಳನ್ನು ಹತ್ತಿಸಿ ನಂತರ ದೇವಾಲಯದ ಬಾಗಿಲು ಗಳನ್ನು ತೆರೆದು ಎಲ್ಲರು ಹಿಂದಿರುಗಿದರು.

ಮರುದಿನ ಜಾತ್ರೋತ್ಸವದ ಅಂಗವಾಗಿ ಬೆಳಗಿನಿಂದ ಪೂಜೆಗಳು ನಡೆದವು. ಇದರ ಅಂಗವಾಗಿ ಭಕ್ತಾದಿಗಳಿಗೆ ಸೇವಾರ್ಥದಾರರಿಂದ ಲೋಕಕಲ್ಯಾಣಾರ್ಥವಾಗಿ ಅನ್ನಸಂತರ್ಪಣೆ ನಡೆಯಿತು.

ಪೂಜಾ ಕೈಂಕರ್ಯಗಳನ್ನು ದೇವಾಲಯದ ಅರ್ಚಕ ಚಂದ್ರಮೌಳಿ ಹಾಗು ಕಣಿವೆ ರಾಮಲಿಂಗೇಶ್ವರ ದೇವಾಲಯದ ಅರ್ಚಕ ರಾಘವೇಂದ್ರಾಚಾರ್ ನೆರವೇರಿಸಿದರು. ಪೂಜೋತ್ಸವದ ಅಂಗವಾಗಿ ಗ್ರಾಮವು ವಿದ್ಯುತ್ ದೀಪಗಳಿಂದ ಹಾಗೂ ತಳಿರು ತೋರಣಗಳಿಂದ ಸಿಂಗಾರ ಗೊಂಡಿತ್ತು.

ದೇವಾಲಯ ಸಮಿತಿಯ ಕೆ.ಟಿ. ಕೃಷ್ಣ, ಕಾರ್ಯದರ್ಶಿ ಕೆ.ಎನ್. ಮಂಜುನಾಥ್, ಉಪಾಧ್ಯಕ್ಷ ಮಲ್ಲೇಶ್, ಸಹ ಕಾರ್ಯದರ್ಶಿ ಕೆ.ಎಂ. ಹರೀಶ್, ಸಲಹೆಗಾರರಾದ ಕೆ.ಎಸ್. ಚಂದ್ರಶೇಖರ್, ಸೋಮಶೇಖರ್ ಕೆ.ಕೆ ಸೇರಿದಂತೆ ಸಮಿತಿಯ ನಿರ್ದೇಶಕರು ಗಳು ಹಾಗೂ ಗ್ರಾಮದ ಹಿರಿಯ ಮುಖಂಡರು, ಸುತ್ತಮುತ್ತಲ ಸಾವಿ ರಾರು ಭಕ್ತಾದಿಗಳು ಪೂಜೋತ್ಸವದಲ್ಲಿ ಪಾಲ್ಗೊಂಡಿದ್ದರು.