ಮಡಿಕೇರಿ, ಜೂ. 2: ತಾ. 8 ರಂದು ನಡೆಯುವ ನೈಋತ್ಯ ಶಿಕ್ಷಕರ ಮತ್ತು ಪದವೀಧರರ ಕ್ಷೇತ್ರದ ಚುನಾವಣೆಯ ಮತದಾನಕ್ಕೆ ಜಿಲ್ಲಾಡಳಿತ ಅಗತ್ಯ ಸಿದ್ಧತೆ ಮಾಡಿಕೊಂಡಿದೆ ಎಂದು ಜಿಲ್ಲಾಧಿಕಾರಿ ಪಿ.ಐ. ಶ್ರೀವಿದ್ಯಾ ತಿಳಿಸಿದ್ದಾರೆ.
ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ವಿಧಾನ ಪರಿಷತ್ ಚುನಾವಣೆ ಸಿದ್ಧತೆ ಬಗ್ಗೆ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದ ಜಿಲ್ಲಾಧಿಕಾರಿ ಅವರು, ನೈಋತ್ಯ ಶಿಕ್ಷಕರ ಮತ್ತು ಪದವೀಧರರ ಕ್ಷೇತ್ರದ ಚುನಾವಣೆಯ ಮತದಾನ ತಾ. 8 ರಂದು ಬೆಳಿಗ್ಗೆ 7 ಗಂಟೆಯಿಂದ ಸಂಜೆ 5 ಗಂಟೆವರೆಗೆ ನಡೆಯಲಿದೆ.
ಜಿಲ್ಲೆಯ ಸೋಮವಾರಪೇಟೆ ಪಟ್ಟಣ ಪಂಚಾಯಿತಿ (ಸೋಮವಾರಪೇಟೆ ತಾಲೂಕಿನ ಸೋಮವಾರಪೇಟೆ, ಶನಿವಾರಸಂತೆ, ಕೊಡ್ಲಿಪೇಟೆ ಮತ್ತು ಶಾಂತಳ್ಳಿ ಹೋಬಳಿ), ಕುಶಾಲನಗರದ ಸರ್ಕಾರಿ ಮಾದರಿ ಪ್ರಾಥಮಿಕ ಶಾಲೆ (ಸೋಮವಾರಪೇಟೆ ತಾಲೂಕಿನ ಕುಶಾಲನಗರ ಮತ್ತು ಸುಂಟಿಕೊಪ್ಪ ಹೋಬಳಿ), ಮಡಿಕೇರಿ ನಗರಸಭೆ ಕಾವೇರಿ ಕಲಾಕ್ಷೇತ್ರ, ವೀರಾಜಪೇಟೆಯ ಪಟ್ಟಣ ಪಂಚಾಯಿತಿಗಳಲ್ಲಿ ತಲಾ ಎರಡು (ನೈಋತ್ಯ ಶಿಕ್ಷಕರ ಮತಗಟ್ಟೆ ಎಡಭಾಗ) ಮತ್ತು ಪದವೀಧರರ ಮತಗಟ್ಟೆ ಬಲಭಾಗ) ಮತಗಟ್ಟೆ ಸ್ಥಾಪಿಸಲಾಗಿದ್ದು, ಈ ಮತಗಟ್ಟೆ ಕೇಂದ್ರಗಳಲ್ಲಿ ಮತದಾನ ಮಾಡಬಹುದಾಗಿದೆ ಎಂದು ಅವರು ಹೇಳಿದರು.
ಮತ ಎಣಿಕೆಯು ಮೈಸೂರಿನ ಮಹಾರಾಣಿ ಮಹಿಳಾ ವಾಣಿಜ್ಯ ಮತ್ತು ನಿರ್ವಹಣಾ ಕಾಲೇಜಿನಲ್ಲಿ ತಾ. 12 ರಂದು ಬೆಳಿಗ್ಗೆ 8 ಗಂಟೆಗೆ ನಡೆಯಲಿದೆ. ನೈಋತ್ಯ ಶಿಕ್ಷಕರ ಮತ್ತು ಪದವೀಧರ ಕೇತ್ರದ ವ್ಯಾಪ್ತಿಲ್ಲಿ ಕೊಡಗು ಸೇರಿದಂತೆ ದಕ್ಷಿಣ ಕನ್ನಡ, ಉಡುಪಿ, ಚಿಕ್ಕಮಗಳೂರು, ಶಿವಮೊಗ್ಗ, ದಾವಣಗೆರೆ ಜಿಲ್ಲೆಯ ಹೊನ್ನಾಳಿ ಮತ್ತು ಚನ್ನಗಿರಿ ತಾಲೂಕುಗಳು ಒಳಪಟ್ಟಿದ್ದು, ಮತದಾರರು ತಮ್ಮ ಮತಗಟ್ಟೆಗಳ ಬಗ್ಗೆ ತಿತಿತಿ.ಞoಜಚಿgu.ಟಿiಛಿ.iಟಿ ರಲ್ಲಿ ಮಾಹಿತಿ ಪಡೆಯಬಹುದಾಗಿದೆ ಎಂದು ಅವರು ತಿಳಿಸಿದರು.
ನೈಋತ್ಯ ಪದವೀಧರರ ಕ್ಷೇತ್ರದಲ್ಲಿ ಕೊಡಗು ಜಿಲ್ಲೆಯಲ್ಲಿ ಒಟ್ಟು 1633 ಮತದಾರರಿದ್ದಾರೆ. ಇವರಲ್ಲಿ 947 ಪುರುಷರು ಮತ್ತು 686 ಮಹಿಳಾ ಮತದಾರರಿದ್ದಾರೆ. ಹಾಗೆಯೇ ನೈಋತ್ಯ ಶಿಕ್ಷಕರ ಕ್ಷೇತ್ರದಲ್ಲಿ ಒಟ್ಟು 1250 ಮತದಾರರಿದ್ದು, 583 ಪುರುಷರು ಮತ್ತು 667 ಮಹಿಳಾ ಮತದಾರರು ಇದ್ದಾರೆ ಎಂದು ಎಂದು ಪಿ.ಐ. ಶ್ರೀವಿದ್ಯಾ ವಿವರಿಸಿದರು.
ಜಿಲ್ಲೆಯ 8 ಮತಗಟ್ಟೆಗಳಲ್ಲಿ ಪ್ರತಿ ಮತಗಟ್ಟೆಗೆ 4 ರಂತೆ ಮತಗಟ್ಟೆ ಸಿಬ್ಬಂಧಿಗಳನ್ನು ಮತ್ತು ಪ್ರತಿ ಮತಗಟ್ಟೆಗೆ ಒಬ್ಬರಂತೆ ಮೈಕ್ರೋ ವೀಕ್ಷಕರ ಹಾಗೂ ಪ್ರತಿ ಮತಗಟ್ಟೆಗೆ ಒಬ್ಬರು ವಿಡಿಯೋ ಗ್ರಾಫರ್ನ್ನು ನೇಮಕ ಮಾಡಲಾಗಿದೆ ಎಂದರು.
ನೈಋತ್ಯ ಪದವೀಧರರ ಕ್ಷೇತ್ರಕ್ಕೆ ಒಟ್ಟು 8 ಜನ ಅಭ್ಯರ್ಥಿಗಳು ಹಾಗೂ ಶಿಕ್ಷಕರ ಕ್ಷೇತ್ರದಿಂದ ಒಟ್ಟು 12 ಜನ ಅಭ್ಯರ್ಥಿಗಳು ಕಣದಲ್ಲಿದ್ದಾರೆ. ಮತದಾನದ ದಿನದಂದು ಮತಗಟ್ಟೆಯ 100 ಮೀಟರ್ ಅಂತರದಲ್ಲಿ ಯಾವದೇ ಚುನಾವಣಾ ಪ್ರಚಾರ ಮಾಡುವಂತಿಲ್ಲ. ರಾಜಕೀಯ ಪಕ್ಷಗಳ ಚುನಾವಣಾ ಬೂತ್ನ್ನು ಮತಗಟ್ಟೆಯ 200 ಮೀಟರ್ ದೂರದಲ್ಲಿ ಸ್ಥಾಪಿಸಬೇಕು. ಚುನಾವಣಾ ಆಯೋಗದ ನಿರ್ದೇಶನದಂತೆ ನೈಋತ್ಯ ಶಿಕ್ಷಕರ ಕ್ಷೇತ್ರಕ್ಕೆ ಮತದಾರರ ಬಲಗೈನ ಮಧ್ಯದ ಬೆರಳಿಗೆ ಹಾಗೂ ಪದವೀಧರರ ಕ್ಷೇತ್ರಕ್ಕೆ ಬಲಗೈನ ತೋರುಬೆರಳಿಗೆ ಶಾಯಿ ಹಾಕಲಾಗುತ್ತದೆ ಎಂದು ಜಿಲ್ಲಾಧಿಕಾರಿ ಹೇಳಿದರು.
ಮತದಾರರು ಚುನಾವಣಾಧಿಕಾರಿಗಳು ನೀಡುವ ನೇರಳೆ ಬಣ್ಣ ಸ್ಕೆಚ್ ಪೆನ್ನು ಮೂಲಕ ಪ್ರಾಶಸ್ತ್ಯ ಮತ 1,2,3 ಎಂದು ನಮೂದಿಸಬೇಕಿದೆ ಎಂದು ಅವರು ತಿಳಿಸಿದರು.
ಮತದಾರರ ಪಟ್ಟಿಯಲ್ಲಿ ಹೆಸರು ನೋಂದಾಯಿಸಿರುವ ಬಗ್ಗೆ ಮತ್ತು ಭಾಗ ಸಂಖ್ಯೆ, ಕ್ರಮ ಸಂಖ್ಯೆಯ ಮಾಹಿತಿಯನ್ನು ಪಡೆದುಕೊಳ್ಳಲು ತಾಲೂಕು ಕಚೇರಿಗಳಲ್ಲಿ ಮತದಾರರ ಮಾಹಿತಿ ಕೇಂದ್ರ ತೆರೆಯಲಾಗಿದೆ ದೂರವಾಣಿ ಮೂಲಕ ಮಾಹಿತಿ ಪಡೆಯಬಹುದಾಗಿದೆ ಎಂದರು.
ದೂರವಾಣಿ ವಿವರ ಇಂತಿದೆ: ಮಡಿಕೇರಿ ತಾಲೂಕು ಕಚೇರಿ 08272-228396, ಸೋಮವಾರಪೇಟೆ ತಾಲೂಕು ಕಚೇರಿ 08276-284044 ಮತ್ತು ವೀರಾಜಪೇಟೆ ತಾಲೂಕು ಕಚೇರಿ 08274-257328 ಸಂಪರ್ಕಿಸಬಹುದಾಗಿದೆ ಎಂದರು.
ನೈಋತ್ಯ ಶಿಕ್ಷಕರ ಮತ್ತು ಪದವೀಧರರ ಕ್ಷೇತ್ರದ ಚುನಾವಣೆ ಸಂಬಂಧ ಸರ್ಕಾರಿ ನೌಕರರು ಚುನಾವಣಾ ಪ್ರಚಾರದಲ್ಲಿ ತೊಡಗುವದು ನಿಯಮಬಾಹಿರವಾಗಿದೆ. ಆದ್ದರಿಂದ ಪದವಿಪೂರ್ವ ಶಿಕ್ಷಣ ಹಾಗೂ ಸಾರ್ವಜನಿಕ ಶಿಕ್ಷಣ ಇಲಾಖೆಯ ಸರ್ಕಾರಿ, ಅನುದಾನಿತ ಕಾಲೇಜು ಉಪನ್ಯಾಸಕರು ಮತ್ತು ಶಾಲೆಗಳ ಶಿಕ್ಷಕರು ಯಾವದೇ ಪ್ರತಿಸ್ಪರ್ಧಿ ಅಥವಾ ರಾಜಕೀಯ ಪಕ್ಷಗಳ ಪರವಾಗಿ ಚುನಾವಣಾ ಪ್ರಚಾರದಲ್ಲಿ ತೊಡಗಿದರೆ ಅಂತವರ ವಿರುದ್ಧ ಶಿಸ್ತು ಕ್ರಮ ಜರುಗಿಸಲಾಗುವದು ಎಂದು ಜಿಲ್ಲಾಧಿಕಾರಿ ಇದೇ ಸಂದರ್ಭ ತಿಳಿಸಿದರು.
ನೈಋತ್ಯ ಶಿಕ್ಷಕರ ಮತ್ತು ಪದವೀಧರರ ಕ್ಷೇತ್ರದ ಚುನಾವಣೆ ಸಂಬಂಧ ಪ್ಲೈಯಿಂಗ್ ಸ್ಕ್ವಾಡ್ ತಂಡವನ್ನು ನಿಯೋಜಿಸಲಾಗಿದ್ದು, ಟಿ.ಎನ್. ಜೀವನ್ ಕುಮಾರ್ (ಮಡಿಕೇರಿ ತಾಲೂಕು ಗ್ರಾಮಾಂತರ), ಪಿ.ಲಕ್ಷ್ಮಿ (ಮಡಿಕೇರಿ ನಗರ), ಸುನಿಲ್ ಕುಮಾರ್ (ಸೋಮವಾರಪೇಟೆ ತಾಲೂಕು ಗ್ರಾಮಾಂತರ), ಧರ್ಮರಾಜು (ಕುಶಾಲನಗರ ಪಟ್ಟಣ), ಜಯಣ್ಣ (ವೀರಾಜಪೇಟೆ ತಾಲೂಕು ಗ್ರಾಮಾಂತರ), ಲಕ್ಷ್ಮಿಕಾಂತ್ (ವೀರಾಜಪೇಟೆ ನಗರ) ಇವರನ್ನು ನಿಯೋಜಿಸಲಾಗಿದೆ.
ಚುನಾವಣೆ ಸಂಬಂಧ 4 ಜೀಪು, ತಲಾ ಒಂದು ಮ್ಯಾಕ್ಸಿಕ್ಯಾಬ್ ಸೇರಿದಂತೆ ಒಟ್ಟು 6 ವಾಹನ ನಿಯೋಜಿಸಲಾಗಿದೆ ಎಂದು ಜಿಲ್ಲಾಧಿಕಾರಿ ತಿಳಿಸಿದರು.