ಸೋಮವಾರಪೇಟೆ, ಮೇ 31: ಕೇಂದ್ರ ಸರ್ಕಾರಿ ನೌಕರರಿಗೆ ಕಲ್ಪಿಸಿರುವ 7ನೇ ವೇತನ ಆಯೋಗದ ಸೌಲಭ್ಯವನ್ನು ಗ್ರಾಮೀಣ ಅಂಚೆ ನೌಕರರಿಗೂ ನೀಡಬೇಕೆಂದು ಆಗ್ರಹಿಸಿ ರಾಷ್ಟ್ರೀಯ ಗ್ರಾಮೀಣ ಅಂಚೆ ನೌಕರರ ಸಂಘದ ಸದಸ್ಯರು ಪಟ್ಟಣದ ಅಂಚೆ ಕಚೇರಿ ಎದುರು ಪ್ರತಿಭಟನೆ ನಡೆಸಿದರು.

ಸುಪ್ರೀಂ ಕೋರ್ಟ್‍ನ ನಿವೃತ್ತ ನ್ಯಾಯಾಧೀಶ ಕಮಲೇಶ್ ಚಂದ್ರ ಅವರ ಶಿಫಾರಸ್ಸಿನಂತೆ 7ನೇ ವೇತನ ಆಯೋಗ 2016 ರಿಂದಲೇ ಜಾರಿಯಾಗಿದೆ. ಆದರೆ ಗ್ರಾಮೀಣ ಅಂಚೆ ನೌಕರರಿಗೆ ಇದರ ಸೌಲಭ್ಯ ಸಿಗುತ್ತಿಲ್ಲ. ಕೇಂದ್ರ ಸರ್ಕಾರ ಮಲತಾಯಿ ಧೋರಣೆಯನ್ನು ಬಿಟ್ಟು, ಗ್ರಾಮೀಣ ಅಂಚೆ ನೌಕರರಿಗೆ ಆಯೋಗದ ಸೌಲಭ್ಯಗಳು ಸಿಗುವಂತೆ ಮಾಡಬೇಕು ಎಂದು ಪ್ರತಿಭಟನೆಯ ನೇತೃತ್ವ ವಹಿಸಿದ್ದ ಸಂಘದ ಜಿಲ್ಲಾ ಕಾರ್ಯದರ್ಶಿ ಕೆ.ಎಂ. ಸತೀಶ್ ಆಗ್ರಹಿಸಿದರು.

ಅಂಚೆ ಕಚೇರಿಯಲ್ಲಿ ಕುಳಿತು ಕೆಲಸ ನಿರ್ವಹಿಸುವವರಿಗೆ 7ನೇ ವೇತನ ಆಯೋಗದ ಸಂಬಳ ಆದರೆ ಗ್ರಾಮೀಣ ಭಾಗದಲ್ಲಿ ಕೆಲಸ ನಿರ್ವಹಿಸುವ ನೌಕರರಿಗೆ ಕನಿಷ್ಟ ಸಂಬಳ ಲಭಿಸುತ್ತಿದೆ. ಕೂಡಲೇ ಕೇಂದ್ರ ಸರ್ಕಾರ ತಮ್ಮ ಬೇಡಿಕೆಯನ್ನು ಈಡೇರಿಸಬೇಕು ಎಂದು ಒತ್ತಾಯಿಸಿದರು.

ಕೇಂದ್ರ ಸರ್ಕಾರದ ವಿರುದ್ಧ ಪ್ರತಿಭಟನಾಕಾರರು ಧಿಕ್ಕಾರದ ಘೋಷಣೆ ಕೂಗಿದರು. ನಂತರ ಮನವಿ ಪತ್ರವನ್ನು ಕೇಂದ್ರ ಸರ್ಕಾರಕ್ಕೆ ಆಂಚೆ ಮೂಲಕ ಕಳುಹಿಸಿದರು. ಪ್ರತಿಭಟನೆಯಲ್ಲಿ ವಲಯ ಅಂಚೆ ಸೇವಕರಾದ ಎನ್.ಕೆ. ನಾಗೇಶ್, ಜಿನ್ನಪ್ಪ, ಮುರುಳೀಧರ್, ಮೋಹಿನಿ, ಮಂಜುನಾಥ್, ಮಂಜು, ಜೀವನ್, ಗುರುಪಾದಸ್ವಾಮಿ ಸೇರಿದಂತೆ ಮತ್ತಿತರರು ಭಾಗವಹಿಸಿದ್ದರು.