ಸೋಮವಾರಪೇಟೆ,ಮೇ.28: ಕ್ಷುಲ್ಲಕ ವಿಚಾರಕ್ಕೆ ದಾರಿ ತಡೆದು ಹಲ್ಲೆ ಮಾಡಿದ್ದೂ ಅಲ್ಲದೇ ಕೊಲೆ ಬೆದರಿಕೆ ಒಡ್ಡುವದರೊಂದಿಗೆ ಜಾತಿ ನಿಂದನೆ ಮಾಡಿದ ಆರೋಪದ ಮೇರೆ ಐವರ ವಿರುದ್ದ ಸೋಮವಾರಪೇಟೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.

ಐಗೂರು ಗ್ರಾಮದ ಯಡವಾರೆ ನಿವಾಸಿ ಪರಿಶಿಷ್ಟ ಜಾತಿಗೆ ಸೇರಿದ ವಿಜಯ ಅವರ ಮೇಲೆ ಯಡವಾರೆ ಗ್ರಾಮದ ರಾಯ್, ಎಂ.ಎನ್. ಅಶೋಕ್, ಎಂ.ಎನ್. ಯತೀಶ್, ಎಲ್.ಪಿ. ಚಂದ್ರಪಾಲ್ ಮತ್ತು ವಿಶ್ವನಾಥ್ ಅವರುಗಳು ಹಲ್ಲೆ ನಡೆಸಿ, ಜಾತಿ ನಿಂದನೆ ಮಾಡಿ ಕೊಲೆ ಬೆದರಿಕೆ ಒಡ್ಡಿರುವ ಬಗ್ಗೆ ಮೊಕದ್ದಮೆ ದಾಖಲಾಗಿದೆ.

ವಿಜಯ ಅವರು ಅಂಗಡಿಗೆ ತೆರಳಿ ದಿನಸಿ ಸಾಮಗ್ರಿ ಖರೀಸಿದ ನಂತರ ಹಿಂತೆರಳುತ್ತಿದ್ದ ಸಂದರ್ಭ ರಾಯ್ ಮತ್ತು ಇತರರು ಮಾರುತಿ ವ್ಯಾನಿನಲ್ಲಿ ಆಗಮಿಸಿ, ಮುಂದಿನ ದಿನಗಳಲ್ಲಿ ಎಂ.ಎನ್. ಪ್ರಕಾಶ್ ಬೆಳ್ಳಿಯಪ್ಪ ಅವರ ತೋಟಕ್ಕೆ ಕೆಲಸ ಮಾಡಲು ಹೋಗಬಾರದು ಎಂದು ತಾಕೀತು ಮಾಡಿದ್ದಾರೆ. ಇದಕ್ಕೆ ಒಪ್ಪದಿದ್ದಾಗ ಐವರು ಹಲ್ಲೆ ನಡೆಸಿದ್ದಾರೆ ಎಂದು ವಿಜಯ ಅವರು ನೀಡಿರುವ ದೂರಿನಲ್ಲಿ ಉಲ್ಲೇಖಿಸಿದ್ದಾರೆ.