ಮಡಿಕೇರಿ, ಮೇ 28: ಕುಡಿದ ಅಮಲಿನೊಂದಿಗೆ ನಡೆಯಲಾಗದೆ ಆಯತಪ್ಪಿ ಚರಂಡಿಯೊಳಗೆ ಬಿದ್ದಿರುವ ವ್ಯಕ್ತಿಯೋರ್ವ ಸಾವನ್ನಪ್ಪಿರುವ ದುರ್ಘಟನೆ ಇಲ್ಲಿನ ಕೈಗಾರಿಕಾ ಬಡಾವಣೆಯಲ್ಲಿ ಸಂಭವಿಸಿದೆ.

ಕೂಲಿ ಕಾರ್ಮಿಕ ಇಲ್ಲಿನ ಇಂದಿರಾನಗರ ನಿವಾಸಿ ಬಾಳೆಲೆ ಮೂಲದ ಗಣೇಶ್ ಸಾವಿಗೀಡಾಗಿರುವ ವ್ಯಕ್ತಿ.

ಈತನಿಗೆ ಮೂರ್ಚೆ ರೋಗವು ಇದ್ದು, ಕುಡಿತದ ಚಟಕ್ಕೆ ಒಳಗಾಗಿದ್ದು, ಇಂದು ಬೆಳಿಗ್ಗೆ ಚರಂಡಿಯೊಳಗೆ ಗೋಚರಿಸಿದ ಶವದ ಬಗ್ಗೆ ನಗರ ಪೊಲೀಸರು ಮಹಜರು ನಡೆಸಿ ಆಸ್ಪತ್ರೆಯ ಶವಗಾರಕ್ಕೆ ಸ್ಥಳಾಂತರಿಸಿದರು. ಅಷ್ಟರಲ್ಲಿ ಅಲ್ಲಿ ಸ್ವಚ್ಛತಾ ಕೆಲಸ ನಿರ್ವಹಿಸುತ್ತಿರುವ ಸಿಬ್ಬಂದಿ ಅನು ಮೃತದೇಹ ತನ್ನ ಗಂಡನೆಂದು ಗುರುತಿಸಿದ್ದಾರೆ. ಆ ಮೇರೆಗೆ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಮರಣೋತ್ತರ ಪರೀಕ್ಷೆ ಬಳಿಕ ಶವವನ್ನು ಹಸ್ತಾಂತರಿಸಿ ಕಾನೂನು ಕ್ರಮಕೈಗೊಂಡಿದ್ದಾರೆ.