ವೀರಾಜಪೇಟೆ, ಮೇ 26: ವೀರಾಜಪೇಟೆ ತಾಲೂಕು ಸರ್ಕಾರಿ ನೌಕರರ ಸಂಘದ ವತಿಯಿಂದ ತಾಲೂಕಿನ ಸರ್ಕಾರಿ ನೌಕರರ ಮಕ್ಕಳಿಗೆ ಪ್ರತಿಭಾ ಪುರಸ್ಕಾರ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ಸಂಘದ ಅಧ್ಯಕ್ಷ ಬಿ.ಎಸ್. ಗುರುರಾಜ್ ತಿಳಿಸಿದ್ದಾರೆ.

ಇಲ್ಲಿನ ಪ್ರೆಸ್‍ಕ್ಲಬ್‍ನಲ್ಲಿ ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಗುರುರಾಜ್, ಮಕ್ಕಳು 10ನೇ ತರಗತಿಯಲ್ಲಿ ರಾಜ್ಯ ಸಿಲಬಸ್, ಸಿಬಿಎಸ್‍ಸಿ ಐಸಿಎಸ್‍ಸಿಯಲ್ಲಿ ಅಧಿಕ ಅಂಕ ಗಳಿಸಿದವರಿಗೆ ಪ್ರಥಮ, ದ್ವಿತೀಯ, ತೃತೀಯ ಪುರಸ್ಕಾರದ ಬಹುಮಾನಗಳು, ದ್ವಿತೀಯ ಪಿ.ಯು.ಸಿಯಲ್ಲಿ ಕಲಾ, ವಾಣಿಜ್ಯ ಹಾಗೂ ವಿಜ್ಞಾನದಲ್ಲಿ ಅತಿ ಹೆಚ್ಚು ಅಂಕಗಳಿಸಿದ ವಿದ್ಯಾರ್ಥಿಗಳಿಗೆ ಬಹುಮಾನಗಳನ್ನು ವಿತರಿಸಲಾಗುವದು ಎಂದರು. ಸಂಘದ ಕಾರ್ಯದರ್ಶಿ ಪಿ.ಬಿ. ಶರೀನ್ ಮಾತನಾಡಿ, ತಾಲೂಕಿನ ಸರ್ಕಾರಿ ನೌಕರರು ಸೇವಾ ದೃಢೀಕರಣ ಪತ್ರದೊಂದಿಗೆ ಮಕ್ಕಳ ಅಂಕಪಟ್ಟಿಗಳನ್ನು ಲಗತ್ತಿಸಿ ಜೂನ್ 2 ರೊಳಗೆ ಸಂಘಕ್ಕೆ ಕಳುಹಿಸಬಹುದು. ಹೆಚ್ಚಿನ ಮಾಹಿತಿಗಾಗಿ 9449276900 ಮೊಬೈಲ್ ಸಂಪರ್ಕಿಸಬಹುದೆಂದು ತಿಳಿಸಿದರು.

ಗೋಷ್ಠಿಯಲ್ಲಿ ಉಪಾಧ್ಯಕ್ಷ ಪಿ.ಎ. ಪ್ರವೀಣ್, ಕೆ.ಕೆ. ವೇಣುಗೋಪಾಲ್, ಖಜಾಂಚಿ ಎ.ಬಿ. ಲಲಿತ, ಎ.ವಿ. ಮಂಜುನಾಥ್ ಹಾಗೂ ಸಿ.ಕೆ. ಭಾಗ್ಯಲಕ್ಷ್ಮಿ ಉಪಸ್ಥಿತರಿದ್ದರು.