ಕೂಡಿಗೆ, ಮೇ 24: ಕುಶಾಲನಗರ ಹೋಬಳಿ ವ್ಯಾಪ್ತಿಯಲ್ಲಿ ಉತ್ತಮವಾದ ಮಳೆ ಬಿದ್ದಿರುವದರಿಂದ ಈ ವ್ಯಾಪ್ತಿಯು ಅರೆ ಮಲೆನಾಡು ಪ್ರದೇಶವಾಗಿದ್ದು, ಈ ಪ್ರದೇಶದಲ್ಲಿ ಈಗಾಗಲೇ ರೈತರು ಭೂಮಿಯನ್ನು ಉಳುಮೆ ಮಾಡಿ ಹದಗೊಳಿಸಿ ಜೋಳ ಬಿತ್ತನೆ ಕಾರ್ಯದಲ್ಲಿ ತೊಡಗಿದ್ದಾರೆ.

ಹೆಚ್ಚು ಮೆಕ್ಕೆಜೋಳ ಬೆಳೆಯುವ ಪ್ರದೇಶಗಳಾದ ಕೂಡಿಗೆ, ಕೂಡುಮಂಗಳೂರು, ಸೀಗೆಹೊಸೂರು, ಚಿಕ್ಕತ್ತೂರು-ದೊಡ್ಡತ್ತೂರು, ಹೆಬ್ಬಾಲೆ, ತೊರೆನೂರು, ಅಳುವಾರ ಆರನೇ ಹೊಸಕೋಟೆ, ಸಿದ್ಧಲಿಂಗಪುರ ವ್ಯಾಪ್ತಿಗಳಲ್ಲಿ ಸಾವಿರಾರು ಎಕರೆ ಪ್ರದೇಶದಲ್ಲಿ ರೈತರು ಜೋಳ ಬಿತ್ತನೆ ಮಾಡುತ್ತಿದ್ದು, ರಾಸಯನಿಕ ಗೊಬ್ಬರನ್ನು ಸಾಲಿನಲ್ಲಿ ಹಾಕಿ ನಂತರ ಬಿತ್ತನೆ ಬೀಜವನ್ನು ಹಾಕುವದರಲ್ಲಿ ಮಹಿಳಾ ರೈತರುಗಳು ಕಾರ್ಯೋನ್ಮುಖರಾಗಿದ್ದಾರೆ.

ಈ ಸಾಲಿನಲ್ಲಿ ಮುಂಗಾರು ಮಳೆಯು ಏಪ್ರಿಲ್ ತಿಂಗಳಲ್ಲಿ ಹೆಚ್ಚು ಬಿದ್ದ ಪರಿಣಾಮ ರೈತರ ಟ್ರ್ಯಾಕ್ಟರ್ ಮೂಲಕ ಭೂಮಿಯನ್ನು ಉಳುಮೆ ಮಾಡಿ ಒಂದು ತಿಂಗಳ ಕಾಲ ಬಿಟ್ಟು ಇದೀಗ ಜೋಳ ಬಿತ್ತನೆ ಮಾಡಲು ಹದಗೊಳಿಸಿ, ಈಗಾಗಲೇ ಸಹಕಾರ ಸಂಘಗಳಲ್ಲಿ ಸಾಕಷ್ಟು ದಾಸ್ತಾನಿರುವ ಜೋಳದ ಬಿತ್ತನೆಗಳಾದ ಗಂಗಾ ಕಾವೇರಿ, ವಿವಿಧ ಹೈಬ್ರಿಡ್ ತಳಿಗಳನ್ನು ಖರೀದಿಸಿ ರೈತರು ತಮ್ಮ ಜಮೀನುಗಳಲ್ಲಿ ಬಿತ್ತನೆ ಮಾಡಲು ಆರಂಭಿಸಿದ್ದಾರೆ.

ಇದಕ್ಕೆ ಪೂರಕವಾಗಿ ಕೃಷಿ ಇಲಾಖೆಯಿಂದ ರೈತರಿಗೆ ಅನುಕೂಲವಾಗುವಂತೆ ತಾಲೂಕಿನ ವಿವಿಧ ಕೃಷಿ ಪತ್ತಿನ ಸಹಕಾರ ಸಂಘಗಳಲ್ಲಿ ಕೃಷಿ ಇಲಾಖೆಯಿಂದ ಪರೀಕ್ಷಿಸಲ್ಪಟ್ಟ ಉತ್ತಮ ಬಿತ್ತನೆ ಬೀಜದ ತಳಿಗಳನ್ನು ರಿಯಾಯಿತಿ ದರದಲ್ಲಿ ನೀಡಲಾಗುತ್ತಿದೆ.

ಈ ಬಗ್ಗೆ ತಾಲೂಕು ಕೃಷಿ ಸಹಾಯಕ ನಿರ್ದೇಶಕ ಹೆಚ್.ಎಸ್. ರಾಜಶೇಖರ್ ರೈತರೊಂದಿಗೆ ಮಾತನಾಡಿ, ರೈತರು ತಮ್ಮ ಜಮೀನಿನ ಮಣ್ಣನ್ನು ಕೂಡಿಗೆಯಲ್ಲಿರುವ ಜಿಲ್ಲೆಯ ಏಕೈಕ ಆಧುನೀಕ ಯಾಂತ್ರೀಕೃತ ಮಣ್ಣು ಪರೀಕ್ಷಾ ಕೇಂದ್ರದಲ್ಲಿ ಪರೀಕ್ಷಿಸಿ ಮಣ್ಣಿನ ಅನುಗುಣವಾಗಿ ಸಾವಯವ ಮತ್ತು ಎರೆಹುಳು ಗೊಬ್ಬರಕ್ಕೆ ಹೆಚ್ಚಿನ ಆದ್ಯತೆ ನೀಡಿ ನಂತರ ಮಣ್ಣಿನ ಪೋಷಕಾಂಶದ ಅನುಗುಣಕ್ಕೆ ಹೆಚ್ಚುವರಿಯಾಗಿ ರಾಸಯನಿಕ ಗೊಬ್ಬರವನ್ನು ಜಮೀನಿಗೆ ಬಳಸಿ ಉತ್ತಮವಾದ ಬೆಳೆ ಬೆಳೆಯಬೇಕು ಎಂದು ರೈತರಿಗೆ ಸಲಹೆ ನೀಡಿದರು.