ಮಡಿಕೇರಿ, ಮೇ 21: ಮಡಿಕೇರಿಯ ‘ತಿರಿಬೊಳ್ಚ ಕೊಡವ ಸಂಘ ಸಂಘಟನೆ ಇತ್ತೀಚೆಗೆ ಜಿಲ್ಲೆಯ ಹಲವೆಡೆ ನಡೆಸಿದ ‘ಕೊಡವ ಮಂಗಲತ್ ನೀರ್ ಎಡ್ಪಲ್ಲಿ ಮೂಡಿನ ತಡ್ತಿತ್ ಆಡುವೊ’ (ಗಂಗಾ ಪೂಜೆ ಶಾಸ್ತ್ರದ ಸುಧಾರಣೆ) ಕುರಿತ ಜನಜಾಗೃತಿ ಕಾರ್ಯಕ್ರಮ ನಡೆಸಿದ್ದು, ಇದೀಗ ಮತ್ತೊಂದು ಕ್ರಿಯಾಯೋಜನೆಗೆ ಸನ್ನದ್ಧವಾಗಿದ್ದು, ತಾ. 22ರಂದು ಈ ಕಾರ್ಯಕ್ರಮ ನಡೆಯಲಿದೆ. ಐನ್ಮನೆಲ್ ತಿರಿಬೊಳ್ಚ’ ಎಂಬ ನೂತನ ಕಾರ್ಯಯೋಜನೆಯಂತೆ ತಿಂಗಳಿಗೊಮ್ಮೆ ವಿವಿಧ ಕೊಡವ ಐನ್ಮನೆಗಳಲ್ಲಿ ಜಾಗೃತಿ ಕಾರ್ಯ ನಡೆಸಲಾಗುವದು. ಇತ್ತೀಚಿನ ವರ್ಷಗಳಲ್ಲಿ ಕ್ಷೀಣ ಸ್ಥಿತಿಗೆ ಜಾರುತ್ತಿರುವ ಐನ್ಮನೆ ಸಂಸ್ಕøತಿಯನ್ನು ಬಲಪಡಿಸುವದರ ಮೂಲಕ ಹಿಂದಿನ ಸಾಂಸ್ಕøತಿಕ- ಸಾಮಾಜಿಕ ಗತ ವೈಭವವನ್ನು ಪುನರ್ ಸ್ಥಾಪಿಸುವ ನಿಟ್ಟಿನಲ್ಲಿ ಅಗತ್ಯ ಜಾಗೃತಿ ಮೂಡಿಸುವದೇ ಈ ಕಾರ್ಯಯೋಜನೆಯ ಉದ್ದೇಶವಾಗಿದೆ ಎಂದು ಸಂಘದ ಪ್ರಕಟಣೆ ತಿಳಿಸಿದೆ.ಈ ಪ್ರಪ್ರಥಮ ಪ್ರಾಯೋಗಿಕ ಕಾರ್ಯಕ್ರಮ ತಾ. 22ರಂದು (ಇಂದು) ಅಪರಾಹ್ನ 2 ಗಂಟೆಗೆ ಅರೆಕಾಡು ಗ್ರಾಮ ಕುಕ್ಕೇರ ಐನ್ಮನೆಯಲ್ಲಿ ಸಂಘದ ಅಧ್ಯಕ್ಷೆ ಉಳ್ಳಿಯಡ ಡಾಟಿ ಪೂವಯ್ಯ ಅವರ ಅಧ್ಯಕ್ಷತೆಯಲ್ಲಿ ನಡೆಯಲಿದೆ. ಇದರ ಅಂಗವಾಗಿ ಜನಾಂಗದ ಎಳೆಯರಿಗೆ ಐನ್ಮನೆಯ ಮಹತ್ವದ ವಿಚಾರದಲ್ಲಿ ಅರಿವಿಕೆ, ಪ್ರಬಂಧ ಮಂಡನೆ, ಸಂವಾದ, ಪ್ರಶ್ನೋತ್ತರ, ಸ್ಪರ್ಧಾ ಕಾರ್ಯಕ್ರಮಗಳು ನಡೆಯಲಿದೆಯೆಂದು ತಿರಿಬೊಳ್ಚ ಕೊಡವ ಸಂಘದ ಕಾರ್ಯದರ್ಶಿ ಕಾಳೇಂಗಡ ಸಾವಿತ್ರಿ ಮುತ್ತಪ್ಪ ಅವರು ತಿಳಿಸಿದ್ದಾರೆ.