ಮಡಿಕೇರಿ, ಏ. 7: ಜನರ ಹಾದಿ ತಪ್ಪಿಸುವದಕ್ಕಾಗಿ ಅಲ್ಲಲ್ಲಿ ಭೂಮಿ ಪೂಜೆಯನ್ನು ಶಾಸಕ ಅಪ್ಪಚ್ಚು ರಂಜನ್ ನೆರವೇರಿಸುತ್ತಿದ್ದು, ಕುಶಾಲನಗರದಲ್ಲಿ ಇದಕ್ಕೆ ಅವಕಾಶ ನೀಡುವದಿಲ್ಲವೆಂದು ಕುಶಾಲನಗರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ವಿ.ಪಿ. ಶಶಿಧರ್ ತಿಳಿಸಿದರು.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸೋಮವಾರಪೇಟೆ ಅಥವಾ ಕುಶಾಲನಗರ ಭಾಗಕ್ಕೆ ಶಾಸಕರು ಯಾವದೇ ಗಣನೀಯ ಕೊಡುಗೆ ನೀಡಿಲ್ಲವೆಂದು ಟೀಕಿಸಿದರು. ಚುನಾವಣೆ ಬಂದಾಗ ಮಾತ್ರ ಕಾಣಿಸಿಕೊಳ್ಳುವ ಮಾಜಿ ಸಚಿವ ಬಿ.ಎ. ಜೀವಿಜಯ ಅವರು, ಇದೇ ನನ್ನ ಕೊನೆಯ ಚುನಾವಣೆ ಎಂದು ಪ್ರತಿ ಚುನಾವಣೆಯಲ್ಲಿ ಸುಳ್ಳು ಹೇಳುತ್ತಿದ್ದಾರೆ ಎಂದು ಶಶಿಧರ್ ಆರೋಪಿಸಿದರು.

ಪಕ್ಷದಲ್ಲಿ ಉತ್ತಮ ಸ್ಥಾನ ದೊರೆತಿದ್ದರೂ ಪ್ರತ್ಯೇಕ ಕಾವೇರಿ ತಾಲೂಕು ಹೋರಾಟವನ್ನು ಕೈಬಿಡುವದಿಲ್ಲವೆಂದು ಸ್ಪÀಷ್ಟಪಡಿಸಿದರು.

ಕಾವೇರಿ ತಾಲೂಕು ಹೋರಾಟ ಪಕ್ಷಾತೀತವಾಗಿ ನಡೆಯುತ್ತಿದ್ದು, ಈ ಹೋರಾಟದಲ್ಲಿ ಯಾವದೇ ರಾಜಿ ಇಲ್ಲವೆಂದರು. ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷನಾಗಿ ಡಾ. ಅಂಬೇಡ್ಕರ್ ಜಯಂತಿಯ ದಿನವಾದ ಏಪ್ರಿಲ್ 14 ರಂದು ಅಧಿಕಾರ ಸ್ವೀಕರಿಸುವದಾಗಿ ತಿಳಿಸಿದರು. ಕೆಪಿಸಿಸಿ ವೀಕ್ಷಕರು ಸೇರಿದಂತೆ ಅನೇಕರು ಈ ಕಾರ್ಯಕ್ರಮದಲ್ಲಿ ಉಪಸ್ಥಿತರಿರುವರು ಎಂದು ಮಾಹಿತಿ ನೀಡಿದರು.

ಸುದ್ದಿಗೋಷ್ಠಿಯಲ್ಲಿ ಜಿ.ಪಂ. ಸದಸ್ಯರಾದ ಬಿ.ಎಂ. ಲತೀಫ್, ನಗರಸಭಾ ಸದಸ್ಯರಾದ ಪ್ರಕಾಶ್ ಆಚಾರ್ಯ, ಪ್ರಮುಖರಾದ ನಾಗೇಂದ್ರ ಬಾಬು ಹಾಗೂ ಅಬ್ದುಲ್ ರಜಾಕ್ ಉಪಸ್ಥಿತರಿದ್ದರು.