150 ಕ್ಷೇತ್ರಗಳ ಬಿಜೆಪಿ ಟಿಕೆಟ್ ಅಂತಿಮ ಬೆಂಗಳೂರು, ಏ. 7: ಬಿಜೆಪಿ ಸುಮಾರು 150 ಕ್ಷೇತ್ರಗಳ ಟಿಕೆಟ್ ಅಂತಿಮಗೊಳಿಸಿದ್ದು ಸೋಮವಾರ ಪ್ರಕಟಿಸಲಿದೆ. ಭಾನುವಾರ ದೆಹಲಿಯಲ್ಲಿ ನಡೆಯುವ ಸಂಸದಿಯ ಮಂಡಳಿ ಸಭೆಯಲ್ಲಿ ಇದಕ್ಕೆ ಒಪ್ಪಿಗೆ ಪಡೆಯಲಾಗುವದು ಎಂದು ಮೂಲಗಳು ತಿಳಿಸಿವೆ. ಎಲ್ಲ ಹಾಲಿ ಶಾಸಕರಿಗೆ ಟಿಕೆಟ್ ನೀಡಲು ನಿರ್ಧರಿಸಲಾಗಿದೆ. ಕೆಲವು ಕ್ಷೇತ್ರಗಳಲ್ಲಿ ಒಂದಕ್ಕಿಂತ ಹೆಚ್ಚು ಆಕಾಂಕ್ಷಿಗಳು ಇದ್ದರೆ ಪರಸ್ಪರ ಮನವೊಲಿಸುವ ಕೆಲಸ ಮಾಡಲಾಗಿದೆ ಎಂದು ಮೂಲಗಳು ತಿಳಿಸಿವೆ.ನಟ ಸಲ್ಮಾನ್ ಖಾನ್‍ಗೆ ಜಾಮೀನು ಜೋಧ್‍ಪುರ, ಏ. 7: ಎರಡು ಕೃಷ್ಣಮೃಗಗಳನ್ನು ಬೇಟೆಯಾಡಿದ ಪ್ರಕರಣದಲ್ಲಿ ಐದು ವರ್ಷ ಜೈಲು ಶಿಕ್ಷೆಗೆ ಗುರಿಯಾಗಿರುವ ಬಾಲಿವುಡ್ ನಟ ಸಲ್ಮಾನ್ ಖಾನ್ ಶನಿವಾರ ಜಾಮೀನಿನ ಮೇಲೆ ಜೋಧ್‍ಪುರ್ ಸೆಂಟ್ರಲ್ ಜೈಲಿನಿಂದ ಬಿಡುಗಡೆಯಾಗಿದ್ದಾರೆ. ಇಂದು ಮಧ್ಯಾಹ್ನ ಸೆಷನ್ಸ್ ಕೋರ್ಟ್ ನ್ಯಾಯಾಧೀಶ ರವೀಂದ್ರ ಕುಮಾರ್ ಜೋಶಿ, ಬಾಲಿವುಡ್ ನಟನಿಗೆ ಸಿಜೆಎಂ ಕೋರ್ಟ್ ನೀಡಿದ್ದ ಐದು ವರ್ಷ ಜೈಲು ಶಿಕ್ಷೆಯನ್ನು ಅಮಾನತ್ತನಲ್ಲಿಟ್ಟು, ಜಾಮೀನು ಮಂಜೂರು ಮಾಡಿದ್ದರು. ಕಳೆದ ಎರಡು ದಿನಗಳಿಂದ ಜೈಲಿನಲ್ಲಿದ್ದ ಸಲ್ಮಾನ್ ಖಾನ್ ಇಂದು ಸಂಜೆ ಜಾಮೀನಿನ ಮೇಲೆ ಬಿಡುಗಡೆಯಾಗಿದ್ದು, ಪೆÇಲೀಸ್ ಭದ್ರತೆಯಲ್ಲಿ ವಿಮಾನ ನಿಲ್ದಾಣಕ್ಕೆ ತೆರಳಿದರು ಎಂದು ಪೆÇಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.

ಸಂಸತ್ತಿನ 250 ಗಂಟೆ ವ್ಯರ್ಥ

ನವದೆಹಲಿ, ಏ. 7: ಸಂಸತ್ತಿನ ಬಜೆಟ್ ಅಧಿವೇಶನದ ವೇಳೆ ನಿರಂತರ ಗದ್ದಲದಿಂದಾಗಿ ಈ ಅಧಿವೇಶನದಲ್ಲಿ ವ್ಯರ್ಥವಾಗಿದ್ದು 250 ತಾಸು. ಅಧಿವೇಶನದ ಎರಡನೇ ಭಾಗ ಮಾರ್ಚ್ 5 ರಂದು ಆರಂಭವಾಯಿತು. ಆದರೆ ಒಂದು ದಿನವೂ ಕಲಾಪ ಸುಸೂತ್ರವಾಗಿ ನಡೆಯಲಿಲ್ಲ. ವಿವಿಧ ಪಕ್ಷಗಳು ಬೇರೆ ಬೇರೆ ಬೇಡಿಕೆ ಇಟ್ಟುಕೊಂಡು ಪ್ರತಿಭಟನೆ ನಡೆಸಿದ್ದರಿಂದಾಗಿ ಅಧಿವೇಶನವನ್ನು ಶುಕ್ರವಾರ ಅನಿರ್ದಿಷ್ಟಾವಧಿ ಕಾಲಕ್ಕೆ ಮುಂದೂಡಲಾಗಿತ್ತು. ಆಂಧ್ರ ಪ್ರದೇಶಕ್ಕೆ ವಿಶೇಷ ಸ್ಥಾನಮಾನ, ಬ್ಯಾಂಕ್ ಹಗರಣಗಳು, ಕಾವೇರಿ ನೀರು ನಿರ್ವಹಣಾ ಮಂಡಳಿಗಾಗಿ ಬೇಡಿಕೆ, ಪ್ರತಿಮೆ ಭಗ್ನ ಪ್ರಕರಣಗಳು, ಪರಿಶಿಷ್ಟ ಜಾತಿ, ಪಂಗಡಗಳ ಮೇಲಿನ ದೌರ್ಜನ್ಯ ತಡೆ ಕಾಯ್ದೆ ಬಗೆಗಿನ ಸುಪ್ರೀಂ ಕೋರ್ಟ್ ತೀರ್ಪು, ಕಾಸ್ಗಂಜ್ನಲ್ಲಿ ಕಾನೂನು ಸುವ್ಯವಸ್ಥೆ ವಿಚಾರಗಳ ಬಗ್ಗೆ ನಡೆದ ಗದ್ದಲದಿಂದಾಗಿ ಕಲಾಪ ಸುಸೂತ್ರವಾಗಿ ನಡೆಯಲಿಲ್ಲ.

ತಾ. 12 ರಂದು ಎನ್‍ಡಿಎ ಸತ್ಯಾಗ್ರಹ

ಬೆಂಗಳೂರು, ಏ. 7: ತಾ. 12 ರಂದು ಬಿಜೆಪಿ ಮತ್ತು ಎನ್‍ಡಿಎ ಸಂಸದರು ಕಾಂಗ್ರೆಸ್ಸಿನ ಪ್ರಜಾಪ್ರಭುತ್ವ ವಿರೋಧಿ ಧೋರಣೆ ವಿರೋಧಿಸಿ ದೇಶಾದ್ಯಂತ ಒಂದು ದಿನದ ಉಪವಾಸ ಸತ್ಯಾಗ್ರಹ ನಡೆಸುವದಾಗಿ ಕೇಂದ್ರ ಸಂಸದಿಯ ವ್ಯವಹಾರಗಳ ಸಚಿವ ಅನಂತ ಕುಮಾರ ತಿಳಿಸಿದರು. ಮಾಧ್ಯಮಗೋಷ್ಠಿಯಲ್ಲಿ ಈ ವಿಷಯ ತಿಳಿಸಿದ ಅವರು, ಸಂಸತ್ ಅಧಿವೇಶನ ಹಾಳಾಗಲು ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಮತ್ತು ಸೋನಿಯಾ ಗಾಂಧಿ ಅವರ ಅಸಹಿಷ್ಣುತೆ ಕಾರಣ ಎಂದರು. ತಾ. 14 ರಿಂದ ಮೇ 5 ರವರೆಗೆ ಅಂಬೇಡ್ಕರ್ ಜಯಂತಿ ಅಂಗವಾಗಿ ದೇಶದಲ್ಲಿ ಬಿಜೆಪಿಯ ಎಲ್ಲ ಶಾಸಕರು, ಸಂಸದರು ಹಳ್ಳಿಗಳಿಗೆ ಭೇಟಿ ನೀಡಿ ಸರ್ಕಾರದ ಕಾರ್ಯಕ್ರಮಗಳನ್ನು ವಿವರಿಸಲಿದ್ದಾರೆ ಎಂದರು.

ಕಾಮನ್‍ವೆಲ್ತ್‍ನಲ್ಲಿ 4 ಚಿನ್ನ ಗೆದ್ದ ಭಾರತ

ಗೋಲ್ಡ್‍ಕೋಸ್ಟ್, ಏ. 7: ಇಲ್ಲಿ ನಡೆಯುತ್ತಿರುವ ಕಾಮನ್‍ವೆಲ್ತ್ ಕ್ರೀಡಾಕೂಟದಲ್ಲಿ ಭಾರತದ ರಾಗಲ ವೆಂಕಟ್ ರಾಹುಲ್ ಶನಿವಾರ ವೈಟ್‍ಲಿಫ್ಟಿಂಗ್ 85 ಕೆ.ಜಿ. ಪುರುಷರ ವಿಭಾಗದಲ್ಲಿ ಚಿನ್ನದ ಪದಕ ಜಯಿಸಿದ್ದಾರೆ. ರಾಹುಲ್ ಒಟ್ಟು 338 ಕೆ.ಜಿ. ಭಾರ ಎತ್ತುವ ಮೂಲಕ ಈ ಸಾಧನೆ ಮಾಡಿದರು. ಇದರೊಂದಿಗೆ ಭಾರತ ಈವರೆಗೆ ನಾಲ್ಕು ಚಿನ್ನದ ಪದಕ ಗಳಿಸಿದಂತಾಗಿದೆ. 48 ಕೆ.ಜಿ. ಮಹಿಳಾ ವೈಟ್‍ಲಿಫ್ಟಿಂಗ್ ವಿಭಾಗದಲ್ಲಿ ಸಾಯಿಕೋಮ್ ಮೀರಾ ಬಾಯಿ ಚಾನು ಚಿನ್ನದ ಪದಕ ಗಳಿಸಿದ್ದರೆ, ಸಂಜಿತಾ ಚಾನು ಅವರು 53 ಕೆ.ಜಿ. ಮಹಿಳಾ ವೈಟ್‍ಲಿಫ್ಟಿಂಗ್ ವಿಭಾಗದಲ್ಲಿ ಚಿನ್ನ ಗೆದ್ದಿದ್ದಾರೆ. ಈ ಬಾರಿಯ ಕಾಮನ್‍ವೆಲ್ತ್ ಕ್ರೀಡಾಕೂಟದಲ್ಲಿ ಭಾರತದ ಪರ ಮೊದಲ ಪದಕ ಜಯಿಸಿದ ಹೆಗ್ಗಳಿಕೆ ಕನ್ನಡಿಗ, ಕುಂದಾಪುರದ ಗುರುರಾಜ್ ಪೂಜಾರಿ ಅವರದ್ದಾಗಿದೆ. 56 ಕೆ.ಜಿ. ಪುರುಷರ ವಿಭಾಗದ ವೈಟ್‍ಲಿಫ್ಟಿಂಗ್‍ನಲ್ಲಿ ಅವರು ಬೆಳ್ಳಿ ಪದಕ ಜಯಿಸಿದ್ದಾರೆ.