ಮೂರು ಮಂದಿಗೆ ಸಜೆ

ವೀರಾಜಪೇಟೆ ಏ:2 ಬಿರುನಾಣಿ ಗ್ರಾಮದ ಕೆನರಾ ಬ್ಯಾಂಕ್ ಶಾಖೆಯ ವ್ಯವಸ್ಥಾಪಕ ಪಿ.ಆರ್.ರವಿಕಾಂತ್ ಎಂಬವರ ಮೇಲೆ ಹಲ್ಲೆ ನಡೆಸಿ ಕೊಲೆ ಬೆದರಿಕೆ ಹಾಕಿದ ಅದೇ ಗ್ರಾಮದ ಮುತ್ತಣ್ಣ, ಮೇದಪ್ಪ ಹಾಗೂ ದೇವಯ್ಯ ಎಂಬ ಮೂವರಿಗೆ ಇಲ್ಲಿನ ಅಪರ ಹಾಗೂ ಎರಡನೇ ಸೆಷನ್ಸ್ ನ್ಯಾಯಾಧೀಶ ಮೋಹನ್ ಪ್ರಭು ಅವರು ಶಿಕ್ಷೆ ವಿಧಿಸಿ ತೀರ್ಪು ನೀಡಿದ್ದಾರೆ.

ಕಳೆದ ತಾ. 3.9.2015ರಂದು ಅಪರಾಹ್ನ ಮೂರು ಮಂದಿ ಬಿರುನಾಣಿಯ ಕೆನರಾ ಬ್ಯಾಂಕ್ ಶಾಖೆಗೆ ತೆರಳಿ ಸಾಲದ ಸಂಬಂಧದಲ್ಲಿ ವ್ಯವಸ್ಥಾಪಕರಿಗೆ ಅವಾಚ್ಯ ಶಬ್ದಗಳಿಂದ ನಿಂದಿಸಿದಲ್ಲದೆ ಕೆಲ ಹೊತ್ತು ಗೃಹ ಬಂಧನದಲ್ಲಿಟ್ಟಿದ್ದು ಕೊಲೆ ಬೆದರಿಕೆ ಹಾಕಿದ್ದಾರೆ. ಅದೇ ದಿನ ರವಿಕಾಂತ್ 3ಗಂಟೆಗೆ ಮನೆಗೆ ತೆರಳುತ್ತಿರುವಾಗ ಅಂಗಡಿ ಮುಂದೆ ಇದ್ದ ಮೂವರ ಪೈಕಿ ಒಬ್ಬಾತ ರವಿಕಾಂತ್ ಅವರ ಮರ್ಮಾಂಗಕ್ಕೆ ನಾಲ್ಕೈದು ಬಾರಿ ಒದ್ದು ಗಾಯಗೊಳಿಸಿದ ಆರೋಪದ ಮೇರೆ ಶ್ರೀಮಂಗಲ ಪೊಲೀಸರು ಮೂವರನ್ನು ಬಂಧಿಸಿ ವೀರಾಜಪೇಟೆ ಸೆಷನ್ಸ್ ನ್ಯಾಯಾಲಯಕ್ಕೆ ಆರೋಪ ಪಟ್ಟಿ ಸಲ್ಲಿಸಿದ್ದರು.

ಪ್ರಕರಣದ ವಿಚಾರಣೆ ನಡೆಸಿದ ನ್ಯಾಯಾಧೀಶರು ಮುತ್ತಣ್ಣ ಹಾಗೂ ದೇವಯ್ಯ ಎಂಬಿಬ್ಬರಿಗೆ ತಲಾ ಎರಡೂವರೆ ತಿಂಗಳ ಸಜೆ ವಿಧಿಸಿದ್ದು. ಮೇದಪ್ಪ ಎಂಬಾತನಿಗೆ 6ತಿಂಗಳ ಸಜೆ ವಿಧಿಸಿದ್ದಾರೆ. ಸರಕಾರದ ಪರ ಅಭಿಯೋಜಕ ನಾರಾಯಣ ವಾದಿಸಿದರು.