ಇಂದು ‘ಕುತ್ತುನಾಡ್ ನೇರ್ಚೆ’ ಪೊನ್ನಂಪೇಟೆ, ಮಾ. 25: ಇಲ್ಲಿ ಕೊಡವರು ಮತ್ತು ಮುಸಲ್ಮಾನರು ಒಟ್ಟು ಸೇರಿದರೆ ಮಾತ್ರ ಉರೂಸ್ ನಡೆಯುತ್ತದೆ. ಇಲ್ಲಿ ಎಲ್ಲಾ ಧಾರ್ಮಿಕ ವಿಧಿ ವಿಧಾನಗಳಿಗೂ ಉಭಯ ಕಡೆಯವರು ಸಮಾನರು. ಬೇಧ ಭಾವಗಳು ನುಸುಳಲು ಅವಕಾಶಗಳೇ ಇಲ್ಲ. ಕೊಡಗಿನಲ್ಲಿ ಕೊಡವರು ಮತ್ತು ಮುಸ್ಲಿಂಮರು ಒಗ್ಗೂಡಿ ಆಚರಿಸುವ ಏಕೈಕ ಉರೂಸ್ ಇದಾಗಿದೆ.ಸದಾ ಜಾತಿ, ಧರ್ಮದ ಹೆಸರಿನಲ್ಲಿ ಸಂಘರ್ಷ ನಡೆಯುವ ಪ್ರಸಕ್ತ ದಿನಗಳಲ್ಲಿ ಈ ಉರೂಸ್ ಭಾವೈಕ್ಯದ ಸಂದೇಶವನ್ನು ಒತ್ತಿ ಹೇಳುತ್ತದೆ. ಹಾಗಾದರೆ ವೈಶಿಷ್ಟ್ಯಪೂರ್ಣವಾದ ಕುತ್ತುನಾಡು ನೇರ್ಚೆಯ ಬಗ್ಗೆ ತಿಳಿಯಬೇಕೆ. ತಾ. 26 ರಂದು (ಇಂದು) ಕುತ್ತುನಾಡಿನ ಕೊಂಗಣಕ್ಕೆ ಬನ್ನಿ.
ಯಾವದೇ ಮತೀಯ ಬಣ್ಣಗಳಿಂದ ನಡೆಯದೆ ವರ್ಷದಿಂದ ವರ್ಷಕ್ಕೆ ತನ್ನ ಜನಪ್ರಿಯತೆಯನ್ನು ಹೆಚ್ಚಿಸಿಕೊಳ್ಳುತ್ತಿರುವ ಕುತ್ತುನಾಡು ವಾರ್ಷಿಕ ಉರೂಸ್ಗೆ 400 ವರ್ಷಗಳ ಇತಿಹಾಸವಿದೆ. ಸಂರಕ್ಷಿಸಲ್ಪಟ್ಟ ಕಾಡಿನೊಳಗೆ ಈ ಉರೂಸ್ ಜರುಗುತ್ತದೆ.
ಉರೂಸ್ ಆಚರಣೆ ಹೀಗೆ: ಪ್ರಸಿದ್ಧ ಧಾರ್ಮಿಕ ಶೃದ್ಧಾ ಕೇಂದ್ರವಾದ ಎಮ್ಮೆಮಾಡಿನಲ್ಲಿ ಸಮಾಧಿಯಾಗಿರುವ ಸೂಫಿ ಶಹೀದ್ರವರ ಹೆಸರಿನಲ್ಲಿ ಕುತ್ತುನಾಡು ಉರೂಸ್ ವರ್ಷಂಪ್ರತಿ ನಡೆಯುತ್ತದೆ. ಎಮ್ಮೆಮಾಡು ಉರೂಸ್ನ ಪ್ರಮುಖ ಸೋಮವಾರದಂದು ಬೇಗೂರು ಕಲ್ಲಾಯಿ ಮಸೀದಿಯ ಆಡಳಿತ ಮಂಡಳಿ, ಮಾಪಿಳೆತೋಡಿನ ತಕ್ಕರು ಕುತ್ತುನಾಡಿಗೆ ತೆರಳಿ ಅಲ್ಲಿ ಕರ್ತುರ ಕುಟುಂಬದ ತಕ್ಕರು ಮತ್ತು ಗ್ರಾಮಸ್ಥರೊಂದಿಗೆ ಸೇರಿ ಕುತ್ತುನಾಡು ಉರೂಸನ್ನು ನಿಶ್ಚಯಿಸುತ್ತಾರೆ. ನಿಶ್ಚಯಿಸಿದ ದಿನದಿಂದ ಸಂಪ್ರದಾಯದಂತೆ ಉರೂಸ್ಗೆ ‘ಕಟ್ಟು’ ಬೀಳುತ್ತದೆ. ಬಿ. ಶೆಟ್ಟಿಗೇರಿ ಸಮೀಪದ ಕೊಂಗಣ ಗ್ರಾಮಕ್ಕೆ ಒಳಪಟ್ಟಿರುವ ‘ನಾಡುಗುಂಡಿ’ ಹೊಳೆದಡದ ಕಾಡಿನಲ್ಲಿ ಸೂಫಿ ಶಹೀದ್ ಅವರ ಸ್ಮಾರಕ ಬಿಡಾರವಿದೆ. ಉರೂಸ್ನ ದಿನದಂದು ಬಿಡಾರದ ಬಳಿ ಬೆಳಿಗ್ಗೆ 8 ಗಂಟೆಗೆ ಆಲೀರ ಮತ್ತು ಕರ್ತುರ ಕುಟುಂಬದ ತಕ್ಕರು ಜಂಟಿಯಾಗಿ ಧ್ವಜಾರೋಹಣ ನೆರವೇರಿಸುವ ಮೂಲಕ ಕುತ್ತುನಾಡು ಉರೂಸ್ಗೆ ಚಾಲನೆ ನೀಡುತ್ತಾರೆÉ. ಬಳಿಕ ಸಾಮೂಹಿಕ ಪ್ರಾರ್ಥನೆ ಜರುಗಿ ಧಾರ್ಮಿಕ ವಿಧಾನಗಳು ಆರಂಭಗೊಳ್ಳುತ್ತದೆ.
ಹಾಲನ್ನ ಪ್ರಸಾದ: ಉರೂಸ್ನಲ್ಲಿ ಹಾಲನ್ನ (ಹಾಲು ಅನ್ನ)ದ ಪ್ರಸಾದಕ್ಕೆ ಹೆಚ್ಚಿನ ಪ್ರಾಶಸ್ತ್ಯವಿದೆ. ಧ್ವಜಾರೋಹಣದ ನಂತರ ಉಭಯ ಸಮುದಾಯದವರು ಜೊತೆಗೂಡಿ ಬಿಡಾರದ ಮುಂಭಾಗದಲ್ಲಿ 3 ಕಲ್ಲು ಸೇರಿಸಿ ಬೆಂಕಿ ಹಚ್ಚಿ ಪಾತ್ರೆಗೆ ಶುದ್ಧವಾದ ಹಾಲನ್ನು ಹಾಕಿ ಕುದಿಸುತ್ತಾರೆ. ಭಕ್ತರು ಹರಕೆ ರೂಪದಲ್ಲಿ ತರುವ ಹಾಲನ್ನೆಲ್ಲ ಇಲ್ಲಿ ಪ್ರಸಾದಕ್ಕೆ ಬಳಸಲಾಗುತ್ತದೆ. ಕುದಿಯುವ ಹಾಲಿಗೆ ಅಕ್ಕಿಯನ್ನು ಹಾಕಿ ಕೇವಲ ಹಾಲು ಮತ್ತು ಅಕ್ಕಿಯಿಂದ ಪ್ರಸಾದವನ್ನು ತಯಾರಿಸಿ ಸ್ಥಳದಲ್ಲೇ ಬಿಸಿ ಬಿಸಿಯಾಗಿ ವಿತರಿಸುತ್ತಾರೆ.
ಭಂಡಾರ ಅಜಮಾಯಿಸುವದು: ಉರೂಸ್ ದಿನದಂದು ಬೆಳಿಗ್ಗೆ ಆದ್ಯವಾಗಿ ಬಿಡಾರದ ಮುಂಭಾಗದಲ್ಲಿರುವ ಹೊಳೆಯಲ್ಲಿ (ನೇರ್ಚೆ ಗುಂಡಿ) ಬಾಳೆ ಗೊನೆಯೊಂದನ್ನು ಮುಳುಗಿಸಿ ಬಿಡಾರದ ದ್ವಾರದ ಮೇಲ್ಬಾಗದಲ್ಲಿ ಕಟ್ಟಲಾಗುತ್ತದೆ. ಈ ವೇಳೆ ಆಲಿರ ಕುಟುಂಬದ ತಕ್ಕರು ಪ್ರಾರ್ಥನೆ ಸಲ್ಲಿಸಿ ದ್ವಾರದ ಎಡಭಾಗದಲ್ಲಿ ಕೂರುತ್ತಾರೆ. ನಂತರ ಕೊಡವ ಜನಾಂಗದ ಕರ್ತುರ ಕುಟುಂಬದ ತಕ್ಕರನ್ನು ಗೌರವಪೂರ್ವಕವಾಗಿ ಆಹ್ವಾನಿಸಿ ದ್ವಾರದ ಬಲಭಾಗದಲ್ಲಿ ಕೂರಿಸಿದ ನಂತರ ಭಂಡಾರ ಇಡುವ ಸಂಪ್ರದಾಯ ಆರಂಭವಾಗುತ್ತದೆ. ಕಾರ್ಯ ಮುಗಿಯುವವರೆಗೂ ಉಭಯ ತಕ್ಕರು ಎಡ ಬಲ ಬದಿಯಾಗಿ ಕುಳಿತು ಭಕ್ತರಿಗೆ ಪ್ರಸಾದ ವಿತರಿಸುತ್ತಾರೆ. ಹುರಿದ ಅಕ್ಕಿ, ಕರಿಮೆಣಸು ಹಾಗೂ ಸಕ್ಕರೆಯಿಂದ ತಯಾರಿಸಿದ ‘ಕಾಪೊಡಿ’ ಮತ್ತು ನೇರ್ಚೆಗುಂಡಿಯಲ್ಲಿ ಮುಳುಗಿಸಿ ತಂದ ಬಾಳೆ ಹಣ್ಣು ಇಲ್ಲಿ ಭಕ್ತರಿಗೆ ನೀಡಲಾಗುವ ಪ್ರಸಾದವಾಗಿದೆ.
ಹರಕೆ ಮತ್ತು ಹರಾಜು: ಭಕ್ತರು ತಮ್ಮ ಇಷ್ಟಾರ್ಥ ಸಿದ್ಧಿಗಾಗಿ ಹೊತ್ತುಕೊಳ್ಳುವ ಹರಕೆಗಳನ್ನು ಉರೂಸ್ನ ದಿನದಂದು ತಂದೊಪ್ಪಿಸುತ್ತಾರೆ. ಮಧ್ಯಾಹ್ನದ ನಂತರ ಹರಕೆ ಬಂದ ವಸ್ತುಗಳನ್ನು ಹರಾಜು ಮಾಡುವ ಪ್ರಕ್ರಿಯೆ ಉರೂಸ್ನ ಭಾಗವಾಗಿ ನಡೆಯುತ್ತದೆ. ಇದಕ್ಕಾಗಿ ಜನ ಬೆಳಿಗ್ಗೆಯಿಂದಲೇ ಕಾದು ಕುಳಿತಿರುತ್ತಾರೆ. ಹಸು, ಕರು, ಕೋಳಿ, ಅಕ್ಕಿ, ತೆಂಗಿನಕಾಯಿ, ಹಾಲು, ತುಪ್ಪ, ಕಾಫಿ, ಕರಿಮೆಣಸು ಮೊದಲಾದವುಗಳನ್ನು ಇಲ್ಲಿ ಹರಾಜು ಹಾಕಲಾಗುತ್ತದೆ. ಹರಕೆ ವಸ್ತುಗಳ ಪೈಕಿ ನಾಟಿಕೋಳಿ ಹೆಚ್ಚು ಸಂಖ್ಯೆಯಲ್ಲಿರುತ್ತದೆ. ನಾಟಿ ಕೋಳಿಗಳನ್ನು ಉರೂಸ್ನ ಹರಾಜಿನಲ್ಲಿ ಪಡೆದು ಮನೆಗೆ ಕೊಂಡೊಯ್ದು ಸಾಕಿದರೆ ಅವುಗಳ ಸಂಖ್ಯೆ ಗಣನೀಯವಾಗಿ ಹೆಚ್ಚುತ್ತದೆ ಎಂದು ಭಕ್ತರು ನಂಬುತ್ತಾರೆ. ಇದರಿಂದ ನಾಟಿ ಕೋಳಿಯೊಂದು ಇಲ್ಲಿ 1500 ರಿಂದ 2000 ದವರೆಗೆ ಹರಾಜಾಗುತ್ತದೆ.
ಅನ್ನ ಪ್ರಸಾದ: ಉರೂಸ್ನ ಕೊನೆಯ ಭಾಗವಾಗಿ ಸಾಮೂಹಿಕ ಅನ್ನ ಸಂತರ್ಪಣೆ ನಡೆಯುತ್ತದೆ. ಉರೂಸ್ನಲ್ಲಿ ಪಾಲ್ಗೊಳ್ಳುವ ಎಲ್ಲರಿಗೂ ಮಾಂಸಾಹಾರಿ ಅನ್ನ ಪ್ರಸಾದವನ್ನು ವಿತರಿಸಲಾಗುತ್ತದೆ. ಕೋಳಿ ಮಾಂಸ ಮತ್ತು ತುಪ್ಪದ ಅನ್ನ ಇಲ್ಲಿನ ಅನ್ನ ಪ್ರಸಾದದ ವಿಶೇಷ. ಅನ್ನ ಪ್ರಸಾದ ತಯಾರಾದ ಕೂಡಲೇ ಉಭಯ ತಕ್ಕರು ಜೊತೆ ಸೇರಿ ಅನ್ನ ಪ್ರಸಾದ ವಿತರಣೆಗೆ ಚಾಲನೆ ನೀಡುತ್ತಾರೆ. ಇದನ್ನು ಭಕ್ತರು ಶೃದ್ಧಾ ಭಕ್ತಿಯಿಂದ ಮನೆಗೆ ಕೊಂಡೊಯ್ದು ಕುಟುಂಬದವರೊಂದಿಗೆ ಊಟ ಮಾಡುತ್ತಾರೆ. ಅನ್ನ ಪ್ರಸಾದ ವಿತರಣೆ ಬಳಿಕ ಉರೂಸ್ಗೆ ತೆರೆ ಬೀಳಲಿದೆ.
ಉರೂಸ್ನ ಹಿನ್ನೆಲೆ: ಎಮ್ಮೆಮಾಡಿನಲ್ಲಿ ಸಮಾಧಿಯಾದ ಸೂಫಿ ಶಹೀದ್ರವರು ಕೊಡಗಿಗೆ ಬಂದ 4 ಶತಮಾನಗಳ ಹಿಂದೆ ತಾವೂರಿಗೆ ತೆರಳುವ ಮಾರ್ಗ ಮಧ್ಯೆ ದಟ್ಟಾರಣ್ಯವಾದ ಕುತ್ತುನಾಡಿನ ಕೊಂಗಣ ಕಾಡಿನಲ್ಲಿ ವಿಶ್ರಾಂತಿ ಪಡೆದಿz್ದÀರು. ಸೂಫಿ ಸಂತರಾಗಿದ್ದ ಅಸಾಧಾರಣ ವ್ಯಕ್ತಿತ್ವದ ಈ ದಾರ್ಶನಿಕರನ್ನು ಅಲ್ಲಿನ ಕರ್ತುರ ಕುಟುಂಬದ ಹಿರಿಯರೊಬ್ಬರು ಕಾಡಿನಲ್ಲಿ ಭೇಟಿಯಾದರು ಎನ್ನಲಾಗಿದೆ. ಕಾಡಿನಲ್ಲಿ ವಿಶ್ರಾಂತಿ ಪಡೆದ ವ್ಯಕ್ತಿ ಮುಸ್ಲಿಂ ಸಮುದಾಯಕ್ಕೆ ಸೇರಿದವರು ಎಂದು ತಿಳಿದ ಇವರು ಸಮೀಪದ ಮಾಪಿಳೆತೋಡುವಿನ ಮುಸ್ಲಿಂ ಜನಾಂಗದವರನ್ನು ಸೇರಿಸಿಕೊಂಡು ಈ ಅಸಾಧಾರಣ ವ್ಯಕ್ತಿ ವಿಶ್ರಾಂತಿ ಪಡೆದ ಸ್ಥಳದಲ್ಲಿ ಅವರ ನೆನಪಿಗಾಗಿ ಬಿಡಾರವೊಂದನ್ನು ನಿರ್ಮಿಸಿ ವಾರ್ಷಿಕ ಉರೂಸ್ ಆಚರಣೆಯನ್ನು ಪ್ರಾರಂಭಿಸಲಾಯಿತು ಎಂಬ ಪ್ರತೀತಿ ಇದೆ.
ನಂಬಿಕೆಯ ಕೇಂದ್ರ: ಕುತ್ತುನಾಡಿಗೆ ಸೇರುವ ಕೊಂಗಣ, ಬಿ. ಶೆಟ್ಟಿಗೇರಿ ಮತ್ತು ಕುಟ್ಟಂದಿ ಗ್ರಾಮದ ಕೊಡವ ಜನಾಂಗದವರಿಗೆ ಈ ಬಗ್ಗೆ ಅಪಾರದವಾದ ನಂಬಿಕೆಯಿದೆ. ದನ-ಕರುಗಳು ನಾಪತ್ತೆಯಾದರೆ ಕುತ್ತುನಾಡಿನ ‘ಶೇಖಮಾರ್’ ಅವರ ಹೆಸರಿನಲ್ಲಿ ಹರಕೆ ಹೊತ್ತರೆ ತಕ್ಷಣ ಪ್ರತಿಫಲಿಸುವ ನಂಬಿಕೆ ಇಂದಿಗೂ ಇದೆ. ದÀನ-ಕರುಗಳಿಗೆ, ಕೋಳಿಗಳಿಗೆ ಕಾಯಿಲೆ ಬಂದಾಗ ಕುತ್ತುನಾಡಿನ ಬಿಡಾರದ ಮುಂಭಾಗದಲ್ಲಿರುವ ನೇರ್ಚೆ ಗುಂಡಿ ಹೊಳೆಯಿಂದ ನೀರು ಮತ್ತು ಬಿಡಾರದೊಳಗೆ ಶಾಶ್ವತವಾಗಿ ದೊರೆಯುವ ಹುತ್ತದ ಮಣ್ಣನ್ನು ತಂದು ಮಿಶ್ರಣ ಮಾಡಿ ದನ-ಕರು ಮತ್ತು ಕೋಳಿಗಳ ಮೇಲೆ ಸಿಂಪಡಿಸಿದರೆ ಕಾಯಿಲೆ ವಾಸಿಯಾಗುತ್ತದೆ ಎಂಬ ನಂಬಿಕೆ ಸ್ಥಳಿಯರದ್ದು. ಬಿಡಾರದ ಹುತ್ತದ ಮಣ್ಣನ್ನು ತೆಗೆದು ಬಟ್ಟೆಯಲ್ಲಿ ಕಟ್ಟಿ ದÀನ-ಕರುಗಳ ಕೊಟ್ಟಿಗೆಯಲ್ಲಿ ಇಡುವ ಪರಿಪಾಠವು ಇಲ್ಲಿದೆ. ಈ ಕಾರಣದಿಂದಲೇ ದÀನ ಕರುಗಳು ಹರಕೆ ರೂಪದಲ್ಲಿ ಇಲ್ಲಿಗೆ ಬರುತ್ತವೆ.
ಎಮ್ಮೆಮಾಡಿನಂತೆಯೇ ಕುತ್ತುನಾಡಿನಲ್ಲೂ ಮಹಿಳೆಯರ ಪ್ರವೇಶಕ್ಕೆ ನಿಷೇಧವಿದೆ. ಮಾಪಿಳೆತೋಡಿನ ಗ್ರಾಮಸ್ಥರು ಮತ್ತು ಕರ್ತುರ ಕುಟುಂಬದ ಉಸ್ತುವಾರಿಯಲ್ಲಿ ಕಡೇಮಾಡ, ಮಾಂಗೆರ, ತೀತಿಮಾಡ ಕುಟುಂಬಸ್ಥರು ಸೇರಿದಂತೆ ಸ್ಥಳೀಯ ಗ್ರಾಮವಾಸಿಗಳ ಸಹಕಾರದಲ್ಲಿ ಪ್ರತಿ ವರ್ಷ ಸಹೋದರತೆಯ ಸಂಕೇತವಾಗಿ ನಡೆಯುವ ಕುತ್ತುನಾಡು ಉರೂಸನ್ನು ವಿವಿಧ ಭಾಗಗಳಿಂದ ಅಪಾರ ಸಂಖ್ಯೆಯಲ್ಲಿ ಬರುವ ಭಕ್ತರು ಸಾಕ್ಷೀಕರಿಸುತ್ತಾರೆ.
- ರಫೀಕ್ ತೂಚಮಕೇರಿ