ಸೋಮವಾರಪೇಟೆ,ಮಾ.19: ಸಮೀಪದ ಗೌಡಳ್ಳಿ ಹಿಂದೂ ಗೆಳೆಯರ ಬಳಗದ ವತಿಯಿಂದ ಗೌಡಳ್ಳಿ ಬಿಜಿಎಸ್ ಶಾಲಾ ಮೈದಾನದಲ್ಲಿ ನಡೆದ ರಾಜ್ಯಮಟ್ಟದ 2ನೇ ವರ್ಷದ ಪ್ರತಿಷ್ಠಿತ ಹಿಂದೂ ಕಪ್ ಫುಟ್ಬಾಲ್ ಪಂದ್ಯಾಟದಲ್ಲಿ ಗೋಲ್ಡನ್ ಗೈಸ್ ಗೌಡಳ್ಳಿ ತಂಡ ಪ್ರಥಮ ಸ್ಥಾನ ಪಡೆದು, ರೂ. 1ಲಕ್ಷ ನಗದಿನೊಂದಿಗೆ ಆಕರ್ಷಕ ಟ್ರೋಫಿಯನ್ನು ಮುಡಿಗೇರಿಸಿಕೊಂಡಿತು.
ಪಂದ್ಯಾವಳಿಯ ಬಲಿಷ್ಠ ತಂಡವೆಂದೇ ಗುರುತಿಸಿಕೊಂಡಿದ್ದ ಹೆಗ್ಗುಳ ಸೋಮು ಫ್ರೆಂಡ್ಸ್ ತಂಡ ದ್ವಿತೀಯ ಸ್ಥಾನಕ್ಕೆ ತೃಪ್ತಿಪಟ್ಟುಕೊಳ್ಳುವ ಮೂಲಕ ಆಕರ್ಷಕ ಟ್ರೋಫಿಯೊಂದಿಗೆ ರೂ. 50 ಸಾವಿರ ನಗದು ಪಡೆಯಿತು.
ಹಿಂದೂ ಗೆಳೆಯರ ಬಳಗದ ಆಶ್ರಯದಲ್ಲಿ ನಿನ್ನೆ ನಡೆದ ಫೈನಲ್ ಪಂದ್ಯದಲ್ಲಿ ಸ್ಥಳೀಯ ಹೆಸರಿನ ತಂಡಗಳಲ್ಲಿ ವಿದೇಶಿ ಆಟಗಾರರೇ ವಿಜೃಂಭಿಸಿದರು. ಸೋಮು ಫ್ರೆಂಡ್ಸ್ ತಂಡದಲ್ಲಿ 10ಮಂದಿ ವಿದೇಶಿ ಆಟಗಾರರು ಆಟವಾಡಿದರೆ, ಗೌಡಳ್ಳಿ ಗೋಲ್ಡನ್ ಗೈಸ್ ತಂಡದಲ್ಲಿ 6 ಮಂದಿ ಆಟವಾಡಿದರು.
ಮಧ್ಯಾಹ್ನ ಸುರಿದ ಭಾರೀ ಮಳೆಯಿಂದ ಒದ್ದೆಯಾದ ಮೈದಾನದಲ್ಲಿಯೇ ಸೆಮಿಫೈನಲ್ ಪಂದ್ಯಗಳು ನಡೆದವು. ಮಳೆಯ ಆರ್ಭಟದ ನಡುವೆಯೂ ಮೈದಾನದಲ್ಲಿ ಚೆಂಡಿಗಾಗಿ ಹೋರಾಟ ನಡೆಯಿತು. ಭಾರೀ ವರ್ಷಾಧಾರೆಯನ್ನು ವಿದೇಶೀ ಆಟಗಾರರು ಮೈದಾನದಲ್ಲಿ ‘ಎಂಜಾಯ್’ ಮಾಡಿದರು. ಪ್ರೇಕ್ಷಕರು ಕುರ್ಚಿಗಳನ್ನು ತಲೆಯ ಮೇಲಿಟ್ಟುಕೊಂಡೇ ಪಂದ್ಯಾಟವನ್ನು ವೀಕ್ಷಿಸಿ, ಆಟಗಾರರಿಗೆ ಹುರುಪು ತುಂಬಿದರು.
ಒದ್ದೆಯಾಗಿದ್ದ ಮೈದಾನದಲ್ಲಿಯೇ ಸಂಜೆ 5.45ಕ್ಕೆ ಪ್ರಾರಂಭವಾದ ಪಂದ್ಯಾಟದಲ್ಲಿ ಗೋಲು ಗಳಿಸಲು ಆಟಗಾರರು ಪರದಾಡಿದರು. ಹಲವರು ಕೆಸರಿನಲ್ಲಿ ಬಿದ್ದೆದ್ದರು. ಪಂದ್ಯದ 25ನೇ ನಿಮಿಷದಲ್ಲಿ ಗೋಲ್ಡ್ನ ಗೈಸ್ ತಂಡದ ಐವರಿಕೋಸ್ಟ್ನ ಅಬ್ದುಲ್ ಗಳಿಸಿದ ಗೋಲು ಗೆಲುವಿನ ಗೋಲಾಯಿತು.
ಆಟ ಮುಗಿಯಲು 10 ನಿಮಿಷವಿರುವಾಗ ಸೋಮು ಫ್ರೆಂಡ್ಸ್ ತಂಡದ ನೈಜಿರಿಯಾದ ಒಡುಲೆ ಗೋಲನ್ನು ಬಾರಿಸಿದರೂ ಅಂಪೈರ್ ಆಫ್ಸೈಡ್ ಎಂದು ತೀರ್ಪಿತ್ತರು. ಇದರಿಂದ ಕೆಲಕಾಲ ಗೊಂದಲವೇರ್ಪಟ್ಟರೂ ಮತ್ತೆ ಆಟ ಮುಂದುವರಿಯಿತು. ಅಂತಿಮವಾಗಿ ಗೋಲ್ಡನ್ ಗೈಸ್ ಗೆಲುವಿನ ನಗೆ ಬೀರಿತು.
ಮೊದಲ ಸೆಮಿಫೈನಲ್ನಲ್ಲಿ ವಿಎಎಸ್ ಬಾಯ್ಸ್ ಶಾಂತವೇರಿ ತಂಡದ ವಿರುದ್ಧ ಗೌಡಳ್ಳಿ ಗೋಲ್ಡನ್ ಗೈಸ್ ತಂಡ ಟೈಬ್ರÉೀಕರ್ನಲ್ಲಿ 3-0 ಗೋಲುಗಳ ಅಂತರದಲ್ಲಿ ಗೆಲವು ಪಡೆದು ಫೈನಲ್ಗೇರಿತು. 2ನೇ ಸೆಮೀಸ್ನಲ್ಲಿ ಹೆಗ್ಗುಳ ಸೋಮು ಫ್ರೆಂಡ್ಸ್ ತಂಡ, ಶುಂಠಿ ಬಜರಂಗದಳ ತಂಡವನ್ನು ಟೈಬ್ರೇಕರ್ನಲ್ಲಿ 4-2 ಗೋಲುಗಳ ಅಂತರದಲ್ಲಿ ಮಣಿಸಿ ಫೈನಲ್ಗೇರಿತು.
ಉತ್ತಮ ಗೋಲ್ಕೀಪರ್ ಪ್ರಶಸ್ತಿಯನ್ನು ಶುಂಠಿ ಭಜರಂಗದಳದ ದೀಪಕ್ ಪಡೆದರು. ಉತ್ತಮ ಫುಲ್ಬ್ಯಾಕ್ ಪ್ರಶಸ್ತಿಯನ್ನು ಸೋಮು ಫ್ರೆಂಡ್ಸ್ನ ಅಬ್ಯುದುನ್, ಉತ್ತಮ ಫಾರ್ವಡ್ ಪ್ರಶಸ್ತಿಯನ್ನು ಗೋಲ್ಡನ್ ಗೈಸ್ನ ಜಾಪ್ ಪಡೆದರು.
ಪ್ರಶಸ್ತಿ ವಿಜೇತ ಗೋಲ್ಡನ್ಗೈಸ್ ತಂಡದಲ್ಲಿ ಐವರಿಕೋಸ್ಟ್ನ ಅ್ಯಡ್ರಿಯಾನ್, ಆಸ್ಟೀನ್, ಜಾಪ್, ಕಬಾನ್, ಘಾನದ ಗೂಡೋ, ಬೆಂಗಳೂರಿನ ಮನೋಜ್, ಶಿವಕುಮಾರ್, ಅರವಿಂದ್, ರಂಜಿತ್ ಕುಮಾರ್, ಮುಕುಲ್, ಲೋಹಿತ್ ಇದ್ದರು.
ಸೋಮು ಫ್ರೆಂಡ್ಸ್ ತಂಡದಲ್ಲಿ ನೈಜೀರಿಯಾದ ಆಟಗಾರರಾದ ಅಯೋಡಿಲೆ ಒಲಕುನ್ಲೆ, ಅಜಾಯಿ ಅಬ್ಯುದುನ್, ಯುಗೊ ಆಂಥೋಣಿ, ನಾಥನಿಲ್ ಅಮೋಸ್, ಕುಡೂಸ್ ಒಲಡಿಲೆ, ಸ್ಟೀಪನ್ ಉಮೆಹ, ಮೈಥಿ ಎಲಿಜಾ, ಉಜೋಚಿಯಾನೊ, ಉಜೋಡಿನ್ಮಾ, ಜಾಬ್ ಜಸ್ಟೀನ್ ಕೆವನ್, ಜಿಯೊ ಒಸಿಲಾಮ್, ನೈಜಿರಿಯಾ ಕೋಚ್, ಒಬೆನ್ ಸಂಡೆ ಆಟವಾಡಿದರು.
ತೀರ್ಪುಗಾರರಾಗಿ ಗೌಡಳ್ಳಿ ಪ್ರವೀಣ್, ನವೀದ್, ಇಬ್ರಾಹಿಂ, ದರ್ಶನ್, ಶಬೀರ್, ಕಾರ್ಯನಿರ್ವಹಿಸಿದರು.
ಸಮಾರೋಪ ಸಮಾರಂಭದಲ್ಲಿ ಹಿಂದೂ ಗೆಳೆಯರ ಬಳಗದ ಅಧ್ಯಕ್ಷ ಜೆ.ಎಸ್.ಪ್ರಸನ್ನ, ಶಾಸಕ ಅಪ್ಪಚ್ಚು ರಂಜನ್, ದಾನಿಗಳಾದ ದೀಣೆಕೊಪ್ಪ ಸೋಮಶೇಖರ್, ವಿ.ಎಂ.ವಿಜಯ್, ಮೂಡಗದ್ದೆ ದಾಮೋದರ್, ಜಿಪಂ ಸದಸ್ಯ ಬಿ.ಜೆ.ದೀಪಕ್, ಪೂರ್ಣಿಮಾ ಗೋಪಾಲ್, ತಾಪಂ ಉಪಾಧ್ಯಕ್ಷ ಎಂ.ಬಿ.ಅಭಿಮನ್ಯು ಕುಮಾರ್, ಪ್ರಮುಖರಾದ ಎಸ್.ಬಿ.ಭರತ್ ಕುಮಾರ್, ಶುಂಠಿ ಸುರೇಶ್, ಎಚ್.ಪಿ.ಮೋಹನ್, ಉಪನ್ಯಾಸಕ ಜಯಕುಮಾರ್ ಮತ್ತಿತರರು ಬಹುಮಾನ ವಿತರಿಸಿದರು.