ಮಡಿಕೇರಿ, ಮಾ. 16: ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಜಿಲ್ಲೆಯ ಎರಡೂ ಕ್ಷೇತ್ರಗಳಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳನ್ನು ಗೆಲ್ಲಿಸುವಲ್ಲಿ ರಾಹುಲ್ ಗಾಂಧಿ ಬ್ರಿಗೇಡ್ನ ಪಾತ್ರ ಪ್ರಮುಖವಾಗಿದ್ದು, ಯುವ ಕಾರ್ಯಕರ್ತರು ಈ ನಿಟ್ಟಿನಲ್ಲಿ ಕಾರ್ಯೋನ್ಮುಖರಾಗಬೇಕೆಂದು ಬ್ರಿಗೇಡ್ನ ಜಿಲ್ಲಾಧ್ಯಕ್ಷರು ಹಾಗೂ ಮೂಡಾದ ಅಧ್ಯಕ್ಷರಾದ ಚುಮ್ಮಿ ದೇವಯ್ಯ ಕರೆ ನೀಡಿದ್ದಾರೆ.
ನಗರದ ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ನಡೆದ ರಾಹುಲ್ ಗಾಂಧಿ ಬ್ರಿಗೇಡ್ನ ಮಡಿಕೇರಿ ನಗರ ಸಮಿತಿಯ ನೂತನ ಅಧ್ಯಕ್ಷ ಹೆಚ್.ಎಸ್. ಯತೀಶ್ ಕುಮಾರ್ ಅವರ ಅಧಿಕಾರ ಸ್ವೀಕಾರದ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಜಿಲ್ಲಾ ಕಾಂಗ್ರೆಸ್ ವಕ್ತಾರ ಟಿ.ಎಂ. ಅಯ್ಯಪ್ಪ ಮಾತನಾಡಿ, ಬಹಳ ವರ್ಷಗಳ ಹಿಂದೆ ಇಂದಿರಾ ಬ್ರಿಗೇಡ್ ಸದಸ್ಯರಿಗೆ ರಾಜ್ಯ ಮಟ್ಟದಲ್ಲಿ ತರಬೇತಿ ನೀಡಿ ಪಕ್ಷದ ಬೆಳವಣಿಗೆಗೆ ಕ್ರಮ ಕೈಗೊಳ್ಳಲಾಗುತ್ತಿತ್ತು. ಇದೀಗ ರಾಹುಲ್ ಬ್ರಿಗೇಡ್ನ ನೂತನ ಸದಸ್ಯರಿಗೂ ತರಬೇತಿ ನೀಡಿ ಮುಂಬರುವ ವಿಧಾನಸಭಾ ಚುನಾವಣೆಯ ಜವಬ್ದಾರಿಯನ್ನು ನೀಡಬೇಕಾಗಿದೆ ಎಂದರು.
ರಾಜ್ಯದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಜನಪರ ಯೋಜನೆಗಳ ಮೂಲಕ ರಾಷ್ಟ್ರದ ಗಮನ ಸೆಳೆದಿದ್ದು, ರಾಜ್ಯ ಸರಕಾರದ ಸಾಧನೆಗಳನ್ನು ಪ್ರತಿ ಮನೆ, ಮನೆಗಳಿಗೆ ತಿಳಿಸಬೇಕೆಂದರು. ಅಭ್ಯರ್ಥಿಗಳ ಹೆಸರು ಪ್ರಕಟವಾಗುವದನ್ನೇ ಕಾಯುತ್ತಾ ಕಾಲಹರಣ ಮಾಡುವ ಬದಲು ಪಕ್ಷದ ಗೆಲುವಿಗಾಗಿ ಈಗಿನಿಂದಲೇ ಕಾರ್ಯೋನ್ಮುಖ ರಾಗಬೇಕೆಂದರು.
ನಗರಸಭಾ ಸದಸ್ಯ ಹೆಚ್.ಎಂ. ನಂದಕುಮಾರ್ ಮಾತನಾಡಿ, ವಿರೋಧ ಪಕ್ಷದವರ ಟೀಕೆ, ಟಿಪ್ಪಣಿÉಗಳಿಗೆ ತಲೆ ಕೆಡಿಸಿಕೊಳ್ಳದೆ ಧೈರ್ಯವಾಗಿ ಪಕ್ಷದ ಗೆಲುವಿಗೆ ಶ್ರಮಿಸಬೇಕೆಂದರು.
ಮೂಡಾ ಮಾಜಿ ಅಧ್ಯಕ್ಷೆ ಸುರಯ್ಯ ಅಬ್ರಾರ್ ಮಾತನಾಡಿ, ಬ್ರಿಗೇಡ್ಗೆ ಆಯ್ಕೆಗೊಂಡ ಪ್ರತಿಯೊಬ್ಬರೂ ತಮ್ಮ ಜವಬ್ದಾರಿಯನ್ನು ಸಮರ್ಪಕವಾಗಿ ನಿಭಾಯಿಸುವಂತೆ ಕಿವಿ ಮಾತು ಹೇಳಿದರು.
ರಾಹುಲ್ ಗಾಂಧಿ ಬ್ರಿಗೇಡ್ನ ಮಡಿಕೇರಿ ಅಧ್ಯಕ್ಷ ಹೆಚ್.ಎಸ್. ಯತೀಶ್ ಕುಮಾರ್, ಮಡಿಕೇರಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ರವೀಂದ್ರ (ಅಪ್ರು), ನಗರಸಭಾ ಸದಸ್ಯ ಎಂ.ಎ. ಉಸ್ಮಾನ್, ಎಂ.ಇ. ಹನೀಫ್ ಮಾತನಾಡಿದರು.
ನಗರಸಭಾ ಸದಸ್ಯರುಗಳಾದ ಪ್ರಕಾಶ್ ಆಚಾರ್ಯ, ಜುಲೇಕಾಬಿ, ಪಕ್ಷದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ವಿ.ಪಿ. ಸುರೇಶ್ ಹಾಗೂ ಜಾನ್ಸನ್ ಪಿಂಟೋ ಉಪಸ್ಥಿತರಿದ್ದರು.