ಮಡಿಕೇರಿ, ಮಾ. 16: 2017-18ನೇ ಸಾಲಿನ ಪ್ರಥಮ ಪಿ.ಯು.ಸಿ. ವಿದ್ಯಾರ್ಥಿಗಳ ಶುಲ್ಕವನ್ನು ಖಜಾನೆಗೆ ತಡವಾಗಿ ಪಾವತಿಸಿದ್ದಾರೆ ಎನ್ನುವ ಕಾರಣವೊಡ್ಡಿ ಪ್ರತಿ ವಿದ್ಯಾರ್ಥಿಗೆ ರೂ. 504 ರಂತೆ ದಂಡ ಶುಲ್ಕ ಪಾವತಿಸುವಂತೆ ಕಾಲೇಜುಗಳ ಪ್ರಾಂಶುಪಾಲರಿಗೆ ಪದವಿಪೂರ್ವ ಶಿಕ್ಷಣ ಇಲಾಖೆಯಿಂದ ನೋಟೀಸು ನೀಡಿರುವದು ರಾಜ್ಯದಾದ್ಯಂತ ಪದವಿಪೂರ್ವ ಕಾಲೇಜುಗಳ ಪ್ರಾಂಶುಪಾಲರಲ್ಲಿ ಆತಂಕ ಮೂಡಿಸಿದೆ.
ಕಾಲೇಜಿನ ಪ್ರಾಂಶುಪಾಲರುಗಳು ಈ ಹಿಂದಿನ ವರ್ಷಗಳಲ್ಲಿದ್ದಂತೆ ವಿದ್ಯಾರ್ಥಿಗಳಿಂದ ಸಂಗ್ರಹವಾದ ಹಣವನ್ನು ಇಲಾಖೆಯ ಮಾರ್ಗಸೂಚಿಯಲ್ಲಿರುವ ದಿನಾಂಕದೊಳಗೆ ಪಾವತಿಸಿ ಚಲನ್ ಹಾಗೂ ವಿದ್ಯಾರ್ಥಿಗಳ ಪಟ್ಟಿಯನ್ನು ಸಂಬಂಧಿಸಿದ ಜಿಲ್ಲಾ ಉಪನಿರ್ದೇಶಕರಿಗೆ ಸಲ್ಲಿಸಿದ್ದರೂ ಲಕ್ಷಾಂತರ ರೂಪಾಯಿ ದಂಡ ಶುಲ್ಕ ಪಾವತಿಸುವಂತೆ ಕೋರಿರುವದು ಸರಿಯಾದ ಕ್ರಮವಲ್ಲ.
ವಿದ್ಯಾರ್ಥಿಗಳಿಂದ ದಂಡ ರಹಿತವಾಗಿ ಪಡೆದ ಶುಲ್ಕಕ್ಕೂ ತಲಾ ರೂ. 504 ರಂತೆ 500 ವಿದ್ಯಾರ್ಥಿಗಳಿದ್ದಲ್ಲಿ (500 ಘಿ ರೂ. 504 = ರೂ. 2,52,000) ದಂಡವಿಧಿಸಿರುವದು ಅಕ್ರಮ. ಪದವಿಪೂರ್ವ ಶಿಕ್ಷಣ ಇಲಾಖೆ ಶಿಕ್ಷಣ ಸಂಸ್ಥೆಗಳಿಗೆ ಈ ರೀತಿ ಏಕಾಏಕಿ ಭಾರೀ ದಂಡ ಶುಲ್ಕವನ್ನು ವಿಧಿಸುವ ಮೂಲಕ ಕಾಲೇಜುಗಳನ್ನು ಸುಲಿಗೆ ಮಾಡಲು ಹೊರಟಿರುವದನ್ನು ಕೂಡಲೇ ನಿಲ್ಲಿಸಬೇಕು ಹಾಗೂ ಕಾಲೇಜು ಪ್ರಾಂಶುಪಾಲರುಗಳಿಗೆ ಲಕ್ಷಾಂತರ ರೂಪಾಯಿ ದಂಡ ಪಾವತಿಸುವಂತೆ ನೀಡಲಾಗಿರುವ ನೋಟೀಸನ್ನು ಕೂಡಲೇ ಹಿಂತೆಗೆದುಕೊಳ್ಳುವಂತೆ ವಿಧಾನಪರಿಷತ್ ಸದಸ್ಯ ಕ್ಯಾ. ಗಣೇಶ್ ಕಾರ್ಣಿಕ್ ಆಗ್ರಹಿಸಿದ್ದಾರೆ.