ಸೋಮವಾರಪೇಟೆ, ಮಾ. 15: ಸಮೀಪದ ಗೌಡಳ್ಳಿ ಹಿಂದೂ ಗೆಳೆಯರ ಬಳಗದ ವತಿಯಿಂದ ತಾ. 17ರಿಂದ (ನಾಳೆಯಿಂದ) ತಾ.18ರವರೆಗೆ ಯುಗಾದಿ ಹಬ್ಬದ ಪ್ರಯುಕ್ತ ರಾಜ್ಯಮಟ್ಟದ ಹಿಂದೂ ಕಪ್ ಮುಕ್ತ ಫುಟ್ಬಾಲ್ ಪಂದ್ಯಾಟ ಆಯೋಜಿಸ ಲಾಗಿದ್ದು, ಸ್ಥಳೀಯ ಆಟಗಾರರು ಸೇರಿದಂತೆ ರಾಷ್ಟ್ರ ಮಟ್ಟದ ಫುಟ್ಬಾಲ್ ಆಟಗಾರರು ಭಾಗವಹಿಸಲಿದ್ದಾರೆ ಎಂದು ಬಳಗದ ಅಧ್ಯಕ್ಷ ಜಿ.ಎಸ್. ನಾಗರಾಜು ತಿಳಿಸಿದರು.

ಗೌಡಳ್ಳಿಯ ಬಿಜಿಎಸ್ ಶಾಲಾ ಮೈದಾನದಲ್ಲಿ ಕ್ರೀಡಾಕೂಟದ ಆಕರ್ಷಕ ಟ್ರೋಫಿಗಳನ್ನು ಅನಾವರಣ ಮಾಡಿ ಮಾತನಾಡಿದ ಅವರು, ತಾ. 17 ಮತ್ತು 18ರಂದು ಪಂದ್ಯಾಟಗಳು ನಡೆಯಲಿದ್ದು, ರಾಷ್ಟ್ರಮಟ್ಟದ ಆಟಗಾರರು ಭಾಗವಹಿಸುತ್ತಿದ್ದಾರೆ. ಫುಟ್ಬಾಲ್ ಪಂದ್ಯದ ಬಗ್ಗೆ ಗ್ರಾಮೀಣ ಭಾಗದಲ್ಲೂ ಆಸಕ್ತಿ ಮೂಡಿಸುವದು ಹಾಗೂ ಪ್ರೋತ್ಸಾಹ ನೀಡುವ ನಿಟ್ಟಿನಲ್ಲಿ 2ನೇ ವರ್ಷದ ಪಂದ್ಯಾವಳಿ ಆಯೋಜಿಸಲಾಗಿದೆ ಎಂದರು.

ಪಂದ್ಯಾವಳಿಯಲ್ಲಿ ಪ್ರಥಮ ಸ್ಥಾನ ಗಳಿಸುವ ತಂಡಕ್ಕೆ ರೂ. 1ಲಕ್ಷ ನಗದು ಹಾಗೂ ಆಕರ್ಷಕ ಟ್ರೋಫಿ, ದ್ವಿತೀಯ ಸ್ಥಾನ ಗಳಿಸುವ ತಂಡಕ್ಕೆ 50 ಸಾವಿರ ನಗದು ಮತ್ತು ಟ್ರೋಫಿ ನೀಡಲಾಗುವದು. ಇದರೊಂದಿಗೆ ವೈಯುಕ್ತಿಕ ವಿಭಾಗದಲ್ಲೂ ಪಾರಿತೋಷಕ ನೀಡಲಾಗುವದು ಎಂದು ನಾಗರಾಜು ಮಾಹಿತಿ ನೀಡಿದರು.

ಪ್ರತಿ ತಂಡದಲ್ಲಿ 11+3 ಆಟಗಾರರಿಗೆ ಅವಕಾಶವಿದ್ದು, ಕಡ್ಡಾಯವಾಗಿ ಕ್ರೀಡಾ ಸಮವಸ್ತ್ರ ಧರಿಸಬೇಕು. ಪಂದ್ಯಾವಳಿಯಲ್ಲಿ 16 ತಂಡಗಳಿಗೆ ಮಾತ್ರ ಅವಕಾಶವಿದ್ದು, ತಾ. 17ರ ಬೆಳಗ್ಗೆ 9 ಗಂಟೆಗೆ ಸೋಮವಾರಪೇಟೆ ಪೊಲೀಸ್ ವೃತ್ತ ನಿರೀಕ್ಷಕ ನಂಜುಂಡೇಗೌಡ, ತಾಲೂಕು ಬಿಜೆಪಿ ಕಾರ್ಯಾಧ್ಯಕ್ಷ ಎಸ್.ಎ. ಸುರೇಶ್, ಗೌಡಳ್ಳಿ ವಿಎಸ್‍ಎಸ್‍ಎನ್ ಅಧ್ಯಕ್ಷ ಎಸ್.ಬಿ. ಭರತ್‍ಕುಮಾರ್ ಅವರುಗಳು ಪಂದ್ಯಾವಳಿಗೆ ಚಾಲನೆ ನೀಡಲಿದ್ದಾರೆ ಎಂದು ಸ್ಥಳದಲ್ಲಿದ್ದ ಬಳಗದ ಕಾರ್ಯದರ್ಶಿ ಅಜ್ಜಳ್ಳಿ ನವೀನ್ ತಿಳಿಸಿದರು.

ಪ್ರಥಮ ಬಹುಮಾನವನ್ನು ಹಿಂದೂ ಗೆಳೆಯರ ಬಳಗದ ವತಿಯಿಂದ ನೀಡಲಾಗುತ್ತಿದ್ದು, ದ್ವಿತೀಯ ನಗದು ಬಹುಮಾನವನ್ನು ಉದ್ಯಮಿಗಳಾದ ಹರಪಳ್ಳಿ ರವೀಂದ್ರ ಪ್ರಾಯೋಜಿಸಿದ್ದಾರೆ. ಇದರೊಂದಿಗೆ ಟ್ರೋಫಿಯನ್ನು ದೀಣೆಕೊಪ್ಪ ಸುಂದರಿ ರೈ ಮತ್ತು ಹೆಗ್ಗುಳದ ಸುಚಿತ್ ಗೌಡ, ಪ್ರದರ್ಶನ ಪಂದ್ಯದ ಬಹುಮಾನವನ್ನು ಗ್ರಾ.ಪಂ. ಸದಸ್ಯ ಪೃಥ್ವಿ, ಉತ್ತಮ ಗೋಲ್ ಕೀಪರ್ ಬಹುಮಾನವನ್ನು ಚನ್ನಾಪುರದ ಸಿ.ಎನ್. ದೀಪಕ್, ಉತ್ತಮ ಫುಲ್ ಬ್ಯಾಕರ್ ಬಹುಮಾನವನ್ನು ಹಿರಿಕರದ ಚಂದನ್, ಉತ್ತಮ ಫಾರ್ವರ್ಡ್ ಆಟಗಾರ ಪ್ರಶಸ್ತಿಯನ್ನು ಕೂಗೇಕೋಡಿಯ ಕೆ.ಈ. ಶಿವನಂಜಪ್ಪ ಅವರುಗಳು ಪ್ರಾಯೋಜಿಸಿದ್ದಾರೆ ಎಂದು ಮಾಹಿತಿ ಒದಗಿಸಿದರು.

ತಾ. 18ರಂದು ಮಧ್ಯಾಹ್ನ 2 ಗಂಟೆಗೆ ಕೂರ್ಗ್ ವುಮೆನ್ಸ್ ಸಾಕರ್ ಕ್ಲಬ್ ವತಿಯಿಂದ ಮಹಿಳಾ ಫುಟ್ಬಾಲ್ ತಂಡಗಳ ನಡುವೆ ಪ್ರದರ್ಶನ ಪಂದ್ಯ ನಡೆಯಲಿದೆ. ಪಂದ್ಯಾಟಕ್ಕೆ ಈಗಾಗಲೆ ಮೈದಾನವನ್ನು ಸಜ್ಜುಗೊಳಿಸಿದ್ದು, ಆಟಗಾರರ ಆರೋಗ್ಯದ ದೃಷ್ಟಿಯಿಂದ ಆಂಬ್ಯುಲೆನ್ಸ್ ಸೌಲಭ್ಯ ಕಲ್ಪಿಸಲಾಗಿದೆ ಎಂದರು.

ತಾ. 18ರ ಸಂಜೆ 5 ಗಂಟೆಗೆ ಸಮಾರೋಪ ಸಮಾರಂಭ ನಡೆಯಲಿದ್ದು, ಶಾಸಕ ಅಪ್ಪಚ್ಚು ರಂಜನ್, ಉದ್ಯಮಿ ಹರಪಳ್ಳಿ ರವೀಂದ್ರ, ಕಾಮನಹಳ್ಳಿ ಬೆಳ್ಳಿಗೌಡ, ದೀಣೇಕೊಪ್ಪ ಸೋಮಶೇಖರ್, ವಿ.ಎಂ. ವಿಜಯ, ಐತಪ್ಪ ರೈ, ಎಂಎಲ್‍ಸಿ ಸುನಿಲ್ ಸುಬ್ರಮಣಿ, ಜಿ.ಪಂ. ಅಧ್ಯಕ್ಷ ಹರೀಶ್, ಉಪಾಧ್ಯಕ್ಷೆ ಲೋಕೇಶ್ವರಿ ಗೋಪಾಲ್, ಸದಸ್ಯ ಬಿ.ಜೆ. ದೀಪಕ್ ಸೇರಿದಂತೆ ಇತರರು ಭಾಗವಹಿಸಲಿದ್ದಾರೆ ಎಂದು ನವೀನ್ ತಿಳಿಸಿದರು.

ಈ ಸಂದರ್ಭ ಹಿಂದೂ ಗೆಳೆಯರ ಬಳಗದ ಖಜಾಂಚಿ ಹೆಚ್.ಎಂ. ಜಿತೇಂದ್ರ, ಜಿ.ಪಿ ಸುನೀಲ್, ಜಿ.ಆರ್. ಕೇಶವ, ಸಿ.ಎಲ್. ವೆಂಕಟೇಶ್ ಸೇರಿದಂತೆ ಸದಸ್ಯರುಗಳು ಉಪಸ್ಥಿತರಿದ್ದರು.