ಮಡಿಕೇರಿ, ಮಾ.1 : ಕುಶಾಲನಗರ ಸಮೀಪದ ಗೊಂದಿ ಬಸವನಹಳ್ಳಿಯಲ್ಲಿ ಭೋವಿ ಜನಾಂಗಕ್ಕೆ ಕಲ್ಲುಗಣಿಗಾರಿಕೆ ನಡೆಸಲು ಅವಕಾಶ ನೀಡಬೇಕೆಂದು ಒತ್ತಾಯಿಸಿರುವ ಅಖಿಲ ಕರ್ನಾಟಕ ಭೋವಿ ಯುವ ವೇದಿಕೆಯ ಕ್ರಾಂತಿ ಸಂಘಟನೆಯ ಜಿಲ್ಲಾ ಘಟಕ, ಮುಂದಿನ ಹತ್ತು ದಿನಗಳ ಒಳಗೆ ಜಿಲ್ಲಾಡಳಿತ ಈ ಬೇಡಿಕೆಗೆ ಸ್ಪಂದಿಸದಿದ್ದಲ್ಲಿ ಜಿಲ್ಲಾಧಿಕಾರಿ ಗಳ ಕಛೇರಿ ಎದುರು ನಿರಂತರ ಪ್ರತಿಭಟನೆಯನ್ನು ನಡೆಸುವದಾಗಿ ಎಚ್ಚರಿಕೆ ನೀಡಿದೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಂಘಟನೆಯ ಜಿಲ್ಲಾಧ್ಯಕ್ಷ ಡಿ. ಸುಜಿತ್, ಭೋವಿ ಜನಾಂಗಕ್ಕೆ ಗಣಿಗಾರಿಕೆಯಲ್ಲಿ ಶೇ.25 ರಷ್ಟು ಅವಕಾಶ ನೀಡಬೇಕೆನ್ನುವ ನಿಯಮವಿದ್ದರೂ ಕೊಡಗು ಜಿಲ್ಲೆಯಲ್ಲಿ ಇದು ಪಾಲನೆಯಾಗುತ್ತಿಲ್ಲವೆಂದು ಆರೋಪಿಸಿದರು. ಭೋವಿ ಜನಾಂಗ ನಡೆಸುತ್ತಿರುವ ಗೊಂದಿಬಸವನ ಹಳ್ಳಿಯ ಗಣಿಗಾರಿಕೆಗೆ ಮಾತ್ರ ಅರಣ್ಯ ಇಲಾಖೆ ತಡೆಯೊಡ್ಡುತ್ತಿದ್ದು, ರಾಜ್ಯದ ಇತರ ಭಾಗಗಳಲ್ಲಿ ಅರಣ್ಯ ವ್ಯಾಪ್ತಿಯಲ್ಲೆ ಗಣಿಗಾರಿಕೆ ನಡೆಯುತ್ತಿದ್ದರೂ ಯಾವದೇ ಕ್ರಮ ಕೈಗೊಳ್ಳುತ್ತಿಲ್ಲ. ಭೋವಿ ಜನಾಂಗಕ್ಕೆ ಮಾತ್ರ ಯಾಕೆ ಈ ರೀತಿಯ ಅಡೆತಡೆ ಎಂದು ಪ್ರಶ್ನಿಸಿದರು.
ಕೊಡ್ಲಿಪೇಟೆ ವ್ಯಾಪ್ತಿಯ 3 ಕಡೆ ಪರವಾನಗಿ ಇಲ್ಲದೆ ಗಣಿಗಾರಿಕೆ ನಡೆಯುತ್ತಿದ್ದರೂ ಅಧಿಕಾರಿಗಳು ಕ್ರಮ ಕೈಗೊಳ್ಳುತ್ತಿಲ್ಲವೆಂದು ಆರೋಪಿಸಿದ ಅವರು, ಈ ಗಣಿಗಾರಿಕೆಯನ್ನು ಸ್ಥಗಿತಗೊಳಿಸದಿದ್ದಲ್ಲಿ ಭೋವಿ ಜನಾಂಗ ಗೊಂದಿಬಸವನಹಳ್ಳಿಯಲ್ಲಿ ಗಣಿಗಾರಿಕೆಯನ್ನು ಆರಂಭಿಸಲಿದೆ ಎಂದು ಎಚ್ಚರಿಕೆ ನೀಡಿದರು.
ಗಣಿಗಾರಿಕೆಗೆ ಅವಕಾಶ ನೀಡದೆ ಇರುವದರಿಂದ ಭೋವಿ ಜನಾಂಗ ಉದ್ಯೋಗದಿಂದ ವಂಚಿತರಾಗಿ ಜಿಲ್ಲೆÉಯಿಂದ ವಲಸೆ ಹೋಗುತ್ತಿದ್ದಾರೆ. ಈ ಹಿಂದೆ ಜಿಲ್ಲೆಯಲ್ಲಿ ಸುಮಾರು 20 ಸಾವಿರದಷ್ಟು ಜನಸಂಖ್ಯೆ ಹೊಂದಿದ್ದ ಭೋವಿ ಜನಾಂಗ ಇಂದು 7 ರಿಂದ 8 ಸಾವಿರಕ್ಕೆ ಕುಸಿದಿದೆ ಎಂದರು. ಜಿಲ್ಲಾಧಿಕಾರಿಗಳ ಮೂಲಕ ಮುಖ್ಯಮಂತ್ರಿಗಳು, ಅರಣ್ಯ ಸಚಿವರು ಹಾಗೂ ಕಂದಾಯ ಸಚಿವರಿಗೆ ಮನವಿ ಸಲ್ಲಿಸಲಾಗುವದೆಂದರು.
ಭೋವಿ ಸಮುದಾಯ ಭವನಕ್ಕೆ 2 ಏಕರೆ ಭೂಮಿ, 1 ಕೊಟಿ ರೂ. ಅನುದಾನ, ಸ್ಮಶಾನಕ್ಕೆ ಜಾಗ, ಭೋವಿ ನಿಗಮದಿಂದ ಅನುದಾನ, ಜಾತಿ ದೃಢೀಕರಣ ಪತ್ರದಲ್ಲಿ ಭೋವಿ ಎಂದು ನಮೂದಿಸಬೇಕು, ಗೊಂದಿ ಬಸವನ ಹಳ್ಳಿಯ ಭೋವಿ ಜನಾಂಗದ ನಿವಾಸಿಗಳಿಗೆ ಹಕ್ಕುಪತ್ರ ನೀಡಬೇಕು ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗಾಗಿ ಇದೇ ಸಂದರ್ಭ ಒತ್ತಾಯಿಸ ಲಾಗುವದೆಂದರು.
ಜಾತಿ ದೃಢೀಕರಣ ಪತ್ರದಲ್ಲಿ ಭೋವಿ ಬದಲಿಗೆ ನಾಯಕ ಎಂದು ನಮೂದಿಸುತ್ತಿರುವದರಿಂದ ಭೋವಿ ನಿಗಮದ ಮೂಲಕ ಬಿಡುಗಡೆ ಯಾಗುತ್ತಿರುವ ಅನುದಾನ ಸದ್ಬಳಕೆಯಾಗುತ್ತಿಲ್ಲವೆಂದು ಸುಜಿತ್ ಬೇಸರ ವ್ಯಕ್ತಪಡಿಸಿದರು.
ಸುದ್ದಿಗೋಷ್ಠಿಯಲ್ಲಿ ಸಂಘಟನೆಯ ಗೌರವ ಅಧ್ಯಕ್ಷ ಆರ್.ಸಿ.ವಿಜಯ, ಸೋಮವಾರಪೇಟೆ ಉಪಾಧ್ಯಕ್ಷÀ ಎಂ.ಕೆ.ಸುಬ್ರಮಣಿ, ಸಂಘÀಟನಾ ಕಾರ್ಯದರ್ಶಿ ಶಿವ ಕುಮಾರ್, ಪ್ರಧಾನ ಕಾರ್ಯದರ್ಶಿ ವಿನಾಯಕ ಹಾಗೂ ಸಂಚಾಲಕ ಕಾರ್ತಿಕ್ ಉಪಸ್ಥಿತರಿದ್ದರು.