ಸೋಮವಾರಪೇಟೆ, ಮಾ.1 : ಲೋಕೋಪಯೋಗಿ ಇಲಾಖೆ ಮೂಲಕ ಕೈಗೊಳ್ಳಲಾಗುತ್ತಿರುವ ಬೆಟ್ಟದಕೊಪ್ಪ-ಹರಗ ರಸ್ತೆ ಕಾಮಗಾರಿ ಕಳಪೆಯಾಗಿದೆ ಎಂಬ ಗ್ರಾಮಸ್ಥರ ದೂರಿನ ಹಿನ್ನೆಲೆ ಮಡಿಕೇರಿಯ ಗುಣಮಟ್ಟ ನಿಯಂತ್ರಣ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದರು.ಬೆಟ್ಟದಕೊಪ್ಪ-ಹರಗ ರಸ್ತೆ 50 ಲಕ್ಷ ವೆಚ್ಚದಲ್ಲಿ ಕೈಗೊಳ್ಳಲಾಗುತ್ತಿದ್ದು, ರಸ್ತೆ ಅಗಲೀಕರಣ, ಚರಂಡಿ, ಮೋರಿ ನಿರ್ಮಾಣ, ಡಾಂಬರು ಕಾಮಗಾರಿ ಇದರಲ್ಲಿ ಸೇರಿದೆ. ಗುತ್ತಿಗೆದಾರರು ಕಳಪೆ ಗುಣಮಟ್ಟದ ವೆಟ್‍ಮಿಕ್ಸ್ ಹಾಕುತ್ತಿದ್ದು, ನಿಗದಿತ ಪ್ರಮಾಣದಲ್ಲಿ ಸಾಮಗ್ರಿ ಬಳಸುತ್ತಿಲ್ಲ ಎಂದು ಆರೋಪಿಸಿ ಶಾಂತಳ್ಳಿ ಗ್ರಾ.ಪಂ. ಅಧ್ಯಕ್ಷ ಬಗ್ಗನ ಅನಿಲ್ ಅವರು ಇಲಾಖೆಯ ಹಿರಿಯ ಅಧಿಕಾರಿಗಳಿಗೆ ದೂರು ನೀಡಿದ್ದರು.

ರಸ್ತೆ ಕಾಮಗಾರಿ ಪ್ರಾರಂಭದಲ್ಲಿಯೇ ಕಳಪೆಯಾಗುತ್ತಿದ್ದು, ಸರ್ಕಾರದ ಹಣ ದುರುಪಯೋಗವಾಗುವ ಸಂಭವವಿರು ವದರಿಂದ ತಕ್ಷಣ ಸ್ಥಳ ಪರಿಶೀಲನೆ ಮಾಡಬೇಕೆಂದು ಆಗ್ರಹಿಸಲಾಗಿತ್ತು. ಇಲಾಖೆಯಿಂದ ಹಲವು ನೋಟೀಸ್ ನೀಡಿದ್ದರೂ ಸಹ ಸಂಬಂಧಿಸಿದ ಗುತ್ತಿಗೆದಾರ ಸ್ಪಂದಿಸಿಲ್ಲ. ಈ ಹಿನ್ನೆಲೆ ಮಂಗಳೂರಿನ ಅಧೀಕ್ಷಕ ಅಭಿಯಂತರರಿಗೆ ದೂರು ನೀಡಲಾಗಿದೆ. ಈ ಮಧ್ಯೆ ಲೋಕೋಪಯೋಗಿ ಇಲಾಖಾ ಕಚೇರಿ ಎದುರು ಫೆ.14-15ರಂದು

(ಮೊದಲ ಪುಟದಿಂದ) ಅಹೋರಾತ್ರಿ ಧರಣಿ ನಡೆಸಿದ ನಂತರ ಇದೀಗ ಅಧಿಕಾರಿ ಭೇಟಿ ನೀಡಿದ್ದಾರೆ ಎಂದು ಅನಿಲ್ ತಿಳಿಸಿದರು.

ಬೆಟ್ಟದಕೊಪ್ಪ-ಹರಗ ರಸ್ತೆಯನ್ನು ವೀಕ್ಷಿಸಿದ ಗುಣಮಟ್ಟ ನಿಯಂತ್ರಣ ಅಧಿಕಾರಿ ನಟರಾಜ್, ಸಮರ್ಪಕವಾಗಿ ಕಾಮಗಾರಿ ನಿರ್ವಹಿಸಬೇಕು. ಗ್ರೇಡಿಯೇಷನ್ ಸರಿಯಿಲ್ಲದ ಸ್ಥಳಗಳಲ್ಲಿ ಈಗಾಗಲೇ ಹಾಕಿರುವ ಜಲ್ಲಿಕಲ್ಲುಗಳನ್ನು ಕಿತ್ತು ಹೊಸದಾಗಿ ನಿರ್ಮಿಸಬೇಕು ಎಂದು ಗುತ್ತಿಗೆದಾರರಿಗೆ ಸೂಚಿಸಿದರು.

ಮುಂದಿನ ಎರಡು ದಿನಗಳ ಒಳಗೆ ಕಳಪೆ ಕಾಮಗಾರಿಯನ್ನು ಸಮರ್ಪಕಗೊಳಿಸದಿದ್ದಲ್ಲಿ ಗ್ರಾಮಸ್ಥರ ಸಹಕಾರದೊಂದಿಗೆ ಮತ್ತೊಮ್ಮೆ ಪ್ರತಿಭಟನೆ ಸಂಘಟಿಸಲಾಗುವದು ಎಂದು ಬಗ್ಗನ ಅನಿಲ್, ಡಾಲಿ ಪ್ರಕಾಶ್, ಹರೀಶ್, ಶರಣ್, ಗ್ರಾ.ಪಂ. ಸದಸ್ಯ ತ್ರಿಶೂಲ್ ಸೇರಿದಂತೆ ಇತರರು ಎಚ್ಚರಿಕೆ ನೀಡಿದರು.