ಗೋಣಿಕೊಪ್ಪ ವರದಿ, ಮಾ. 1 : ಭಾರತೀಯ ತೋಟಗಾರಿಕೆ ಸಂಶೋಧನಾ ಸಂಸ್ಥೆ ಮತ್ತು ಬೆಂಗಳೂರು ತೋಟಗಾರಿಕೆ ಅಭಿವೃದ್ದಿ ಸಂಘದ ಸಂಯುಕ್ತ ಆಶ್ರಯದಲ್ಲಿ ಶಿವಮೊಗ್ಗ ಕೃಷಿ ಮತ್ತು ತೋಟಗಾರಿಕೆ ವಿಶ್ವವಿದ್ಯಾಲಯದ ವ್ಯಾಪಿಗೆ ಬರುವ ಕಾಲೇಜುಗಳಿಗೆ ತಾ. 2 ಮತ್ತು 3 ರಂದು ಪಶ್ಚಿಮ ಘಟ್ಟದ ಕಾಡು ಹಣ್ಣುಗಳ ಸಂರಕ್ಷಣೆ ಮತ್ತು ಬಳಕೆ ಕುರಿತಾದ ರಾಷ್ಟ್ರೀಯ ಮಟ್ಟದ ವಿಚಾರಗೋಷ್ಠಿ ಪೊನ್ನಂಪೇಟೆ ಅರಣ್ಯ ಮಹಾವಿದ್ಯಾಲಯದ ಸಭಾಂಗಣದಲ್ಲಿ ನಡೆಯಲಿದೆ.

ಪಶ್ಚಿಮ ಘಟ್ಟಗಳಲ್ಲಿ ಸುಮಾರು 50 ಕ್ಕೂ ಹೆಚ್ಚು ವಿವಿಧ ಬಗೆಯ ಕಾಡು ಹಣ್ಣುಗಳು ಕಾಣಸಿಗುತ್ತದೆ. ಈ ಕಾಡುಹಣ್ಣುಗಳು ಹಲವಾರು ಔಷಧೀಯ ಗುಣಗಳನ್ನು ಹಾಗೂ ಪೋಷಕಾಂಶಗಳನ್ನು ಹೊಂದಿದ್ದು ಇತ್ತೀಚಿನ ದಿನಗಳಲ್ಲಿ ಇವುಗಳು ಅಳಿವಿನ ಅಂಚಿನಲ್ಲಿರುದರಿಂದ ಸಂರಕ್ಷಿಸಿ ಬೇಸಾಯಕ್ಕೆ ತರುವದು ಹೇಗೆ ಎಂಬ ಬಗ್ಗೆ ವಿಚಾರಗೋಷ್ಠಿ ನಡೆಯಲಿದೆ.ಗೋಷ್ಠಿಯಲ್ಲಿ ರಾಷ್ಟ್ರದ ವಿವಿಧ ಭಾಗಗಳಿಂದ ಒಟ್ಟು 30 ವಿಜ್ಞಾನಿಗಳು ಸಂಶೋಧನಾ ಲೇಖನಗಳನ್ನು ಮಂಡಿಸಲಿದ್ದಾರೆ. ಕಾಡು ಹಣ್ಣುಗಳಿಗೆ ಸಂಬಂಧಪಟ್ಟಂತೆ ವಸ್ತು ಪ್ರದರ್ಶನ ಹಾಗೂ ವಿಜ್ಞಾನಿ ಮತ್ತು ಸ್ಥಳೀಯ ರೈತರೊಂದಿಗೆ ಸಂವಾದ ತಾ. 3 ರಂದು ಬೆಳಗ್ಗೆ 11.30 ಕ್ಕೆ ನಡೆಯಲಿದೆ.

ವಿಚಾರಗೋಷ್ಠಿಯು ಬೆಂಗಳೂರು ಕರ್ನಾಟಕ ಜೀವ ವೈವಿದ್ಯ ಮಂಡಳಿ, ಬಾರತೀಯ ತೋಟಗಾರಿಕಾ ಮಿಷನ್, ಹಾಗೂ ಪಾಲಿಬೆಟ್ಟ ಟಾಟಾ ಕಾಫಿ ಲಿ. ಇವರುಗಳ ಪ್ರಾಯೋಜಗತ್ವದಲ್ಲಿ ನಡೆಯಲಿದೆ ಎಂದು ಪೊನ್ನಂಪೇಟೆ ಅರಣ್ಯ ಮಹಾವಿದ್ಯಾಲಯ ಪ್ರಕಟಣೆ ತಿಳಿಸಿದೆ.