ಕಾವೇರಿ ನದಿಯ ವಿವಿಧ ಭಾಗದಲ್ಲಿ ರಿವರ್ ರ್ಯಾಫ್ಟಿಂಗ್ ಅನಧೀಕೃತವಾಗಿ ನಡೆಸುತ್ತಿರುವ ಹಿನ್ನೆಲೆ ಹಾಗೂ ಜನರ ಪ್ರಾಣಹಾನಿ, ಆಸ್ತಿ ಹಾನಿಯಾಗಿ ಸಮಾಜದಲ್ಲಿ ಶಾಂತಿ, ಸುವ್ಯವಸ್ಥೆ ಮತ್ತು ಕಾನೂನು ಭಂಗವಾಗುವ ಸಂಭವ ಇರುವದರಿಂದ ಸಾರ್ವಜನಿಕ ಹಿತ ದೃಷ್ಟಿಯಿಂದ ಸಿ.ಆರ್.ಪಿ.ಸಿ ಕಲಂ 133 ರಡಿಯಲ್ಲಿ ಜಿಲ್ಲೆಯಾದ್ಯಂತ ಕಾವೇರಿ ನದಿ ಪಾತ್ರದಲ್ಲಿ ರಿವರ್ ರ್ಯಾಫ್ಟಿಂಗ್ ಉದ್ದಿಮೆ ನಡೆಸುವದನ್ನು ಫೆಬ್ರವರಿ 28 ರಿಂದ ಒಂದು ತಿಂಗಳ ಅವಧಿಗೆ ಸಂಪೂರ್ಣವಾಗಿ ನಿಷೇಧಿಸಿ ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ದಂಡಾಧಿಕಾರಿ ಪಿ.ಐ. ಶ್ರೀವಿದ್ಯಾ ಆದೇಶ ಹೊರಡಿಸಿದ್ದಾರೆ.
ರಿವರ್ ರ್ಯಾಫ್ಟಿಂಗ್ ನಡೆಸುವವ ರಿಂದಾಗಲೀ ಅಥವಾ ಇನ್ನುಳಿದವ ರಿಂದಾಲೀ ಸೂಕ್ತ ಉತ್ತರ ಸಮಯಕ್ಕೆ ಸರಿಯಾಗಿ ನೀಡದಿದ್ದಲ್ಲಿ; ಸೂಕ್ತ ದಾಖಲಾತಿಗಳನ್ನು ಹಾಜರು ಪಡಿಸಲು ವಿಫಲರಾದಲ್ಲಿ ಕಲಂ 133 ಸಿ.ಆರ್.ಪಿ.ಸಿ. ಅಡಿಯಲ್ಲಿ ಜಿಲ್ಲೆಯಾ ದ್ಯಂತ ಕಾನೂನು ಬಾಹಿರವಾಗಿ ನಡೆಸುತ್ತಿರುವ ರಿವರ್ ರ್ಯಾಫ್ಟಿಂಗ್ನ್ನು ತಾತ್ಕಾಲಿಕವಾಗಿ ನಿಷೇಧಿಸುವ ಷರತ್ತು ಬದ್ಧವಾಗಿ ಹೊರಡಿಸುವ ಈ ಆದೇಶವನ್ನು ಶಾಶ್ವತ ಆದೇಶವೆಂದು ಪರಿಗಣಿಸಿ ರ್ಯಾಫ್ಟಿಂಗ್ನ್ನು ಶಾಶ್ವತವಾಗಿ ಸ್ಥಗಿತಗೊಳಿಸಲಾಗುತ್ತದೆ ಎಂದು ಜಿಲ್ಲಾಧಿಕಾರಿ ಎಚ್ಚರಿಕೆ ನೀಡಿದ್ದಾರೆ.
(ಮೊದಲ ಪುಟದಿಂದ) ಈ ಪ್ರಕರಣ ಸಂಬಂಧ ಮುಂದಿನ ವಿಚಾರಣೆಯನ್ನು ತಾ. 27 ರಂದು ಮಧ್ಯಾಹ್ನ 3 ಗಂಟೆಗೆ ನಿಗದಿಪಡಿಸಿದ್ದು, ಸಂಬಂಧಪಟ್ಟವರು ಜಿಲ್ಲಾ ದಂಡಾಧಿಕಾರಿ ಮತ್ತು ಜಿಲ್ಲಾಧಿಕಾರಿ ಕಚೇರಿಗೆ ಖುದ್ದು ಹಾಜರಾಗಿ ಕಲಂ 133 ಸಿ.ಆರ್.ಪಿ.ಸಿ ರಡಿಯಲ್ಲಿ ಹೊರಡಿಸಿರುವ ಷರತ್ತು ಬದ್ಧ ಆದೇಶವನ್ನು ಯಾಕೆ ಅಂತಿಮ ಆದೇಶವೆಂದು ಪರಿಗಣಿಸಬಾರದು ಎಂಬುದಕ್ಕೆ ಜಿಲ್ಲಾ ದಂಡಾಧಿಕಾರಿ ನ್ಯಾಯಾಲಯಕ್ಕೆ ಲಿಖಿತ ಸಮಜಾಯಿಷಿ ನೀಡಲು ಆದೇಶಿಸಿದೆ. ಇಲ್ಲವಾದ್ದಲ್ಲಿ ಈ ಆದೇಶವನ್ನು ಶಾಶ್ವತ ಆದೇಶವಾಗಿ ಹೊರಡಿಸಲಾಗುತ್ತದೆ. ಆದೇಶ ಉಲ್ಲಂಘನೆಯಾದಲ್ಲಿ ಸಂಬಂಧಪಟ್ಟವರ ವಿರುದ್ಧ ಕಲಂ 188 ಭಾರತ ದಂಡ ಪ್ರಕ್ರಿಯೆಯಡಿಯಲ್ಲಿ ಕಾನೂನು ಕ್ರಮ ಜರುಗಿಸಲು ಆದೇಶಿಸಲಾಗುವದು ಅವರು ಆದೇಶದಲ್ಲಿ ತಿಳಿಸಿದ್ದಾರೆ.
ಜಿಲ್ಲೆಯಲ್ಲಿ ರಿವರ್ ರ್ಯಾಫ್ಟಿಂಗ್ ಉದ್ದಿಮೆಯನ್ನು ನಡೆಸುತ್ತಿರುವವರು ಸರಕಾರದಿಂದ ಯಾವದೇ ಪರವಾನಗಿ ಪಡೆದಿರುವದಿಲ್ಲ ಮತ್ತು ವಿಮೆ ಸೌಲಭ್ಯವಿಲ್ಲ. ಹಾಗೂ ರ್ಯಾಫ್ಟಿಂಗ್ ನಡೆಸುವ ಸಮಯದಲ್ಲಿ ಅಪಘಾತಗಳುಂಟಾಗದಂತೆ ಮುಂಜಾಗ್ರತೆ ಕ್ರಮವಾಗಿ ಯಾವದೇ ಭದ್ರತಾ ಕ್ರಮ ಮತ್ತು ವಸ್ತುಗಳನ್ನು ಉಪಯೋಗಿಸುತ್ತಿಲ್ಲ.
ರಿವರ್ ರ್ಯಾಫ್ಟಿಂಗ್ ನಡೆಸುವವರು ಪ್ರವಾಸಿಗರಿಂದ ಯಾವದೇ ಇತಿಮಿತಿಯಿಲ್ಲದೆ ಮನಸ್ಸಿಗೆ ಬಂದಂತೆ ಹಣ ವಸೂಲು ಮಾಡುತ್ತಿರುವದರಿಂದ, ಜಗಳಗಳು ಆಗುತ್ತದೆ ಮತ್ತು ಇದನ್ನು ನಿಯಂತ್ರಿಸಲು ಸಾಧ್ಯವಾಗದಂತಹ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ಆದೇಶದಲ್ಲಿ ಉಲ್ಲೇಖಿಸಲಾಗಿದೆ.
ರಿವರ್ ರ್ಯಾಫ್ಟಿಂಗ್ ನಡೆಸಲು ಕೈಗೊಳ್ಳಬೇಕಾದ ಸುರಕ್ಷಾ ಕ್ರಮಗಳ ಬಗ್ಗೆ ಸರಕಾರ ಈಗಾಗಲೇ ಸುತ್ತೋಲೆ ಕಳುಹಿಸಿದ್ದು, ಅದರಂತೆ ಸುರಕ್ಷಾ ಕ್ರಮಗಳನ್ನು ಕೈಗೊಳ್ಳುವಂತೆ ನಿರ್ದೇಶನ ನೀಡಿದೆಯಾದರೂ ಸುತ್ತೋಲೆಯಲ್ಲಿರುವ ಷರತ್ತುಗಳನ್ನು ರಿವರ್ ರ್ಯಾಫ್ಟಿಂಗ್ ನಡೆಸುವವರು ಪಾಲಿಸುತ್ತಿಲ್ಲ ಎಂಬುದು ಮೇಲ್ನೋಟಕ್ಕೆ ಸಾಬೀತಾಗಿದೆ ಎಂದು ಜಿಲ್ಲಾಧಿಕಾರಿ ಪ್ರಸ್ತಾಪಿಸಿದ್ದಾರೆ.
ಕೊಡಗು ಜಿಲ್ಲೆಯಲ್ಲಿ ಹಾದು ಹೋಗುತ್ತಿರುವ ಕಾವೇರಿ ನದಿಯ ವಿವಿಧ ಭಾಗದಲ್ಲಿ ರಿವರ್ ರ್ಯಾಫ್ಟಿಂಗ್ ಅನಧಿಕೃತವಾಗಿ, ಕಾನೂನು ಬಾಹಿರವಾಗಿ ನಡೆಸುತ್ತಿರುವ ಬಗ್ಗೆ ಹಲವು ಬಾರಿ ವರದಿಯಾಗಿದೆ. ಗ್ರಾಮಸ್ಥರಿಂದ ಹಲವು ಪುಕಾರು ಬಂದಿರುವದರಿಂದ ಫೆಬ್ರವರಿ 18 ರಂದು ದುಬಾರೆಗೆ ಖುದ್ದಾಗಿ ಭೇಟಿ ನೀಡಿ ಪರಿಶೀಲಿಸಲಾಗಿ, ಕಾನೂನು ಬಾಹಿರವಾಗಿ ಯಾವದೇ ಮಾರ್ಗಸೂಚಿ ಮತ್ತು ಸುರಕ್ಷತಾ ಕ್ರಮಗಳನ್ನು ಕೈಗೊಳ್ಳದೆ, ರ್ಯಾಫ್ಟಿಂಗ್ ನಡೆಸುತ್ತಿರುವದರಿಂದ ಪ್ರವಾಸಿಗರ ಮತ್ತು ಸಾರ್ವಜನಿಕ ಜೀವಕ್ಕೆ ಹಾನಿ ಆಗಬಾರದು ಎಂಬ ದೃಷ್ಟಿಯಿಂದ ರಿವರ್ ರ್ಯಾಫ್ಟಿಂಗ್ ನಿಷೇಧಿಸಬೇಕೆಂದು ಮನವರಿಕೆಯಾಗಿದೆ ಎಂದು ಜಿಲ್ಲಾಧಿಕಾರಿ ತಮ್ಮ ಆದೇಶದಲ್ಲಿ ತಿಳಿಸಿದ್ದಾರೆ.
ಸಂಘದ ಪ್ರತಿಕ್ರಿಯೆ
ರ್ಯಾಫ್ಟಿಂಗ್ ನಿಷೇಧ ಕುರಿತು ದುಬಾರೆ ರ್ಯಾಫ್ಟಿಂಗ್ ಅಸೋಸಿಯೇಷನ್ ಮಾಲೀಕರ ಸಂಘದ ಅಧ್ಯಕ್ಷ ಡಿ.ಎಸ್. ಕೃಷ್ಣಪ್ಪ ಪ್ರತಿಕ್ರಿಯಿಸಿ, ಜಿಲ್ಲಾಧಿಕಾರಿ ಆದೇಶ ಸಂಬಂಧ ಇಂದು ತುರ್ತು ಸಭೆ ನಡೆಸಿ ಚರ್ಚೆ ಮಾಡಲಾಯಿತೆಂದು ತಿಳಿಸಿದ್ದಾರೆ. ಅಲ್ಲದೆ, ನಿನ್ನೆಯಷ್ಟೇ ನಂಜರಾಯಪಟ್ಟಣ ಗ್ರಾ.ಪಂ. ಕಚೇರಿಗೆ ಮನವಿ ಸಲ್ಲಿಸಿ ತಾ. 5 ರಂದು ರ್ಯಾಫ್ಟಿಂಗ್ ಮಾಲೀಕರ ಸಭೆ ನಡೆಸಿ, ಪಂಚಾಯಿತಿಗೆ ಪಾವತಿಸಲು ಬಾಕಿ ಇರುವ ತೆರಿಗೆ ಕಟ್ಟುವದಾಗಿ ತಿಳಿಸಿದ್ದಾಗಿ ವಿವರಿಸಿದ್ದಾರೆ.
ಈ ಬಗ್ಗೆ ಗ್ರಾ.ಪಂ.ನಿಂದ ಅರ್ಜಿ ಸ್ವೀಕೃತಿ ಪಡೆದಿರುವ ಬೆನ್ನಲ್ಲೇ ಜಿಲ್ಲಾಧಿಕಾರಿಗಳು ನಿಷೇಧ ಹೇರಿರುವ ಪರಿಣಾಮ 150ಕ್ಕೂ ಅಧಿಕ ಬಡಕುಟುಂಬಗಳ ಜೀವನ ನಿರ್ವಹಣೆಗೆ ತೊಂದರೆಯಾಗಿದೆ ಎಂದು ಬೊಟ್ಟು ಮಾಡಿದ್ದಾರೆ. ಅಲ್ಲದೆ ಜಿಲ್ಲಾಧಿಕಾರಿಗಳನ್ನು ಶೀಘ್ರವೇ ಭೇಟಿ ಮಾಡಿ ಸಮಸ್ಯೆ ಮನವರಿಕೆ ಮಾಡಿಕೊಡಲು ತೀರ್ಮಾನಿಸಿರುವದಾಗಿ ತಿಳಿಸಿದ್ದಾರೆ.
ಗ್ರಾ.ಪಂ. ಪ್ರತಿಕ್ರಿಯೆ: ಗ್ರಾ.ಪಂ. ಅಭಿವೃದ್ಧಿ ಅಧಿಕಾರಿ ಪ್ರತಿಕ್ರಿಯಿಸಿ, ಕಳೆದ ಎರಡು ವರ್ಷಗಳಿಂದ ರ್ಯಾಫ್ಟಿಂಗ್ ನಡೆಸುವವರು ಗ್ರಾ.ಪಂ.ಗೆ ಯಾವದೇ ಶುಲ್ಕ ಪಾವತಿಸಿಲ್ಲವೆಂದು ಸ್ಪಷ್ಟಪಡಿಸಿದ್ದಾರೆ. ಈ ಬಗ್ಗೆ ಹಲವು ಬಾರಿ ನೋಟೀಸ್ ಜಾರಿಗೊಳಿಸಿದ್ದರೂ ಸ್ಪಂದಿಸಿಲ್ಲವೆಂದು ಪ್ರತಿಕ್ರಿಯಿಸಿದ್ದು, ಕೇವಲ ಒಂದಿಬ್ಬರು ಮಾತ್ರ ಕಳೆದ ವರ್ಷದ ಶುಲ್ಕ ಪಾವತಿಸಿದ್ದಾರೆ ಎಂದು ಮಾಹಿತಿ ನೀಡಿದ್ದಾರೆ.
ಅಲ್ಲದೆ, ಇಂದು ಜಿಲ್ಲಾಧಿಕಾರಿಗಳ ಆದೇಶದಂತೆ ಕುಶಾಲನಗರ ಕಂದಾಯ ಪರಿವೀಕ್ಷಕರು ಹಾಗೂ ಗ್ರಾಮ ಸಹಾಯಕರು ಖುದ್ದು ದುಬಾರೆಗೆ ಧಾವಿಸಿ ರ್ಯಾಫ್ಟಿಂಗ್ ನಡೆಸದಂತೆ ನೋಟೀಸ್ ಜಾರಿಗೊಳಿಸಿದ್ದು, ಕಾರ್ಯಾಚರಣೆ ಸ್ಥಗಿತಗೊಂಡಿದೆ ಎಂದು ಖಚಿತಪಡಿಸಿದ್ದಾರೆ. ಇನ್ನು ಮುಂದಿನ ಬೆಳವಣಿಗೆ ಕಾದು ನೋಡಬೇಕಿದೆ.