ಮಡಿಕೇರಿ, ಮಾ. 1 : ಪ್ರವಾಸಿ ತಾಣ ಕಾವೇರಿ ತಟದಲ್ಲಿರುವ ನಂಜರಾಯಪಟ್ಟಣ ಗ್ರಾ.ಪಂ. ವ್ಯಾಪ್ತಿಯ ದುಬಾರೆಯ ಸಾಕಾನೆ ಶಿಬಿರಕ್ಕೆ ಹೊಂದಿಕೊಂಡಂತೆ, ಕಳೆದ ನಾಲ್ಕೈದು ದಿನಗಳಿಂದ ಕಾಡ್ಗಿಚ್ಚು ಕಾಣಿಸಿಕೊಂಡಿದ್ದು, ಇನ್ನು ಕೂಡ ಸಂಪೂರ್ಣ ಹತೋಟಿಗೆ ಬಂದಿಲ್ಲವೆಂದು ಪ್ರತ್ಯಕ್ಷದರ್ಶಿಗಳು ಖಚಿತಪಡಿಸಿದ್ದಾರೆ. ಸಂಜೆಗತ್ತಲೆಯ ನಡುವೆ ನಿಯಂತ್ರಣಕ್ಕೆ ಬರುತ್ತಿರುವ ಬೆಂಕಿ ಹಗಲು ವೇಳೆ ಕಾನನದ ನಡುವೆ ವ್ಯಾಪಕ ಕಾರ್ಮೋಡದ ರೀತಿಯಲ್ಲಿ ದಟ್ಟ ಹೊಗೆ ಇಂದು ಕೂಡ ದುಬಾರೆ ಸುತ್ತಮುತ್ತ ಗೋಚರಿಸಿತು.ಈ ನಡುವೆ ದುಬಾರೆಯ ಅರಣ್ಯ ಸಿಬ್ಬಂದಿ, ಮಾವುತರು, ಕಾವಾಡಿಗಳ ಸಹಿತ ಅಗ್ನಿಶಾಮಕ ಸಿಬ್ಬಂದಿ ಜಂಟಿಯಾಗಿ ಬೆಂಕಿ ನಂದಿಸಲು ಹರಸಾಹಸ ಪಡುತ್ತಿದ್ದಾರೆ ಎಂದು ಗೊತ್ತಾಗಿದೆ. ಆದರೆ ಕಾಡಿನ ನಡುವೆ ಒಣ ಮರಗಳಲ್ಲಿ ಹೊತ್ತಿಕೊಂಡಿರುವ ಕಾಡ್ಗಿಚ್ಚು ಬಿಸಿಲಿನ ತಾಪ ಹೆಚ್ಚ ತೊಡಗಿದಂತೆಯೇ ಮತ್ತೆ ಉರಿಯ ತೊಡಗಿರುವದು ಇನ್ನು ಸಂಪೂರ್ಣ ಹತೋಟಿಗೆ ಬಾರದಿರಲು ಕಾರಣವೆನ್ನಲಾಗುತ್ತಿದೆ.

ಕಾವೇರಿ ಹೊಳೆ ದಂಡೆಯ ಪ್ರವಾಸಿ ತಾಣ ದುಬಾರೆ ಸುತ್ತಮುತ್ತಲಿನ ಬೆಂಕಿಯಿಂದಾಗಿ ಸಾಕಾನೆಗಳು ಕೂಡ ತೊಂದರೆಗೆ ಸಿಲುಕಿರುವದಾಗಿ ತಿಳಿದು ಬಂದಿದೆ.

ತಾ. 25ರಂದು ಪಿರಿಯಾಪಟ್ಟಣ ಸರಹದ್ದು ಪ್ರದೇಶದಿಂದ ಗದ್ದಿಗೆಬೆಟ್ಟ ಕಾಡಿನಲ್ಲಿ ಗೋಚರಿಸಿರುವ ಬೆಂಕಿ ಅನಂತರದಲ್ಲಿ ಸತತವಾಗಿ ಮುಂದುವರಿದಿದ್ದು, ಇಂದು ಕೂಡ ಕುರುಚಲು ಕಾಡನ್ನು ದಹಿಸುತ್ತಿರುವದು ಕಂಡು ಬಂದಿದೆ. ಸಾಧ್ಯವಿರುವಷ್ಟು ಬೆಂಕಿ ನಂದಿಸುವ ಕಾರ್ಯ ಕೂಡ ನಿತ್ಯ ಮುಂದುವರಿದಿದೆ. ಗದ್ದಿಗೆಬೆಟ್ಟದಿಂದ ಹರಡಿದ ಬೆಂಕಿ ಈಗಾಗಲೇ ದೊಡ್ಡ ಅರಿವೆ, ಅಮ್ಮಾಳೆ ಮುಂತಾದ ಕಾಡನ್ನು ಎಕರೆಗಟ್ಟಲೆ ಪಸರಿಸಿದೆ. ಪಕ್ಕದಲ್ಲಿ ನದಿ ಪಾತ್ರವಿರುವದರಿಂದ ಬೆಂಕಿಯ ಜ್ವಾಲೆ ದುಬಾರೆ ದ್ವೀಪದಿಂದ ಈಚೆಗೆ ಹರಡಿಲ್ಲವೆಂದು ಅಲ್ಲಿನ ನಿವಾಸಿಗಳು ‘ಶಕ್ತಿ’ಗೆ ಸುಳಿವು ನೀಡಿದ್ದಾರೆ.

ಸಾಕಾನೆಗಳ ಪರದಾಟ : ದುಬಾರೆ ಸಾಕಾನೆ ಶಿಬಿರ ಸುತ್ತಲಿನ ಬೆಂಕಿಯಿಂದಾಗಿ ಅಲ್ಲಿರುವ ಆನೆಗಳು ಗಾಬರಿಯೊಂದಿಗೆ ಪರಿತಪಿಸು ವಂತಾಗಿದೆಯಲ್ಲದೆ, ನಿತ್ಯ ಹಗಲು ವೇಳೆ ಮೇವಿಗಾಗಿ ಕಾಡಿನೊಳಗೆ ತೆರಳುವದು ಸಾಧ್ಯವಿಲ್ಲದೆ ಶಿಬಿರದೊಳಗೆ ಸಿಗುವ ಒಣ ಹುಲ್ಲು ಇತ್ಯಾದಿ ಆಹಾರ ಸೇವಿಸಿ ದಿನಗಳನ್ನು ಕಳೆಯುವಂತಾಗಿದೆ.

ಪ್ರವಾಸಿಗಳು ಕ್ಷೀಣ : ಇನ್ನು ದುಬಾರೆ ರ್ಯಾಫ್ಟಿಂಗ್ ಹಾಗೂ ಸಾಕಾನೆ ಶಿಬಿರಕ್ಕೆ ಬರುವ ಪ್ರವಾಸಿಗರ ಸಂಖ್ಯೆ ಕ್ಷೀಣಗೊಂಡಿದ್ದು,

(ಮೊದಲ ಪುಟದಿಂದ) ಇದಕ್ಕೆ ಹೊಳೆಯ ನೀರು ಇಳಿಮುಖಗೊಂಡಿರುವದು ಮತ್ತು ಇಂದಿನಿಂದ ರ್ಯಾಫ್ಟಿಂಗ್ ಕೂಡ ನಿಷೇಧಿಸಲ್ಪಟ್ಟಿರುವದು ಸೇರಿದಂತೆ, ಹೆದ್ದಾರಿಯಿಂದ ಸಂಪರ್ಕ ಕಡಿತಗೊಂಡಿದೆ.

ಪ್ರವಾಸೋದ್ಯಮ ಇಲಾಖೆಯಿಂದ ಅಲ್ಲಿನ ಮುಖ್ಯ ರಸ್ತೆಯಿಂದ ದುಬಾರೆಯೊಳಗೆ ಒಂದು ಕಿ.ಮೀ. ಕಾಂಕ್ರಿಟ್ ರಸ್ತೆ ಕಾಮಗಾರಿ ನಡೆಯುತ್ತಿದ್ದು, ಹೀಗಾಗಿ ಸಾಕಾನೆ ಶಿಬಿರದತ್ತ ಆಗಮಿಸುವ ಪ್ರವಾಸಿಗಳು ಮುಖ್ಯ ರಸ್ತೆಯಿಂದಲೇ ಕಾಲ್ನಡಿಗೆಯಲ್ಲಿ ತೆರಳಬೇಕಿದೆ. ಇನ್ನು ಕಾವೇರಿ ನೀರು ಇಳಿಮುಖದಿಂದ ಅರಣ್ಯ ಇಲಾಖೆಯು ತನ್ನ ಮೋಟಾರು ಬೋಟುಗಳ ಸಂಚಾರ ಕೂಡ ಸ್ಥಗಿತಗೊಳಿಸಿದೆ.

ಈ ಎಲ್ಲ ಬೆಳವಣಿಗೆ ನಡುವೆ ನಿನ್ನೆ ಜಿಲ್ಲಾಧಿಕಾರಿಗಳು ಅಧಿಕೃತ ಆದೇಶ ಹೊರಡಿಸುವ ಮುಖಾಂತರ, ದುಬಾರೆ ಸುತ್ತಮುತ್ತಲಿನ ಆರೆಂಟು ಕಡೆಗಳಲ್ಲಿ ನಡೆಯುತ್ತಿರುವ ರ್ಯಾಫ್ಟಿಂಗ್ ಅನ್ನು ಒಂದು ತಿಂಗಳು ನಿಷೇಧಿಸಿದ್ದಾರೆ. ಅಲ್ಲದೆ ರ್ಯಾಫ್ಟಿಂಗ್ ನಡೆಸುವವರು ನಿಯಮಾವಳಿಗಳನ್ನು ಪಾಲಿಸದಿದ್ದರೆ ಕಠಿಣ ಕ್ರಮದ ಎಚ್ಚರಿಕೆ ನೀಡಿದ್ದಾರೆ.

ಕುಶಾಲನಗರ ವರದಿ

ಪಿರಿಯಾಪಟ್ಟಣ ತಾಲೂಕಿನ ಮತ್ತು ಜಿಲ್ಲೆಯ ಗಡಿಭಾಗ ದೊಡ್ಡಹರವೆ ಅರಣ್ಯದಂಚಿನಲ್ಲಿ ಕಾಣಿಸಿಕೊಂಡು ಬೆಂಕಿ ದುಬಾರೆ ಅರಣ್ಯಕ್ಕೂ ವ್ಯಾಪಿಸಿದೆ.

ಬಲವಾದ ಗಾಳಿ ನಡುವೆ ಬೆಂಕಿ ನಿಯಂತ್ರಣಕ್ಕೆ ಬಾರದೆ ದುಬಾರೆ ಮೀಸಲು ಅರಣ್ಯ ವ್ಯಾಪ್ತಿಯಲ್ಲಿ ಎರಡು ದಿನಗಳಿಂದ ಸಿಬ್ಬಂದಿಗಳು ಕಾರ್ಯಾಚರಣೆ ಸಫಲವಾಗುತ್ತಿಲ್ಲ. ಬೆಟ್ಟ ಗುಡ್ಡಗಳ ನಡುವೆ ಬೆಂಕಿ ಕಾಣಿಸಿಕೊಂಡ ಹಿನ್ನೆಲೆಯಲ್ಲಿ ವಾಹನಗಳು ತೆರಳಲು ಕೂಡ ಸಾಧ್ಯವಾಗುತ್ತಿಲ್ಲ ಎಂದು ಉಪ ಅರಣ್ಯ ವಲಯಾಧಿಕಾರಿ ಕನ್ನಂಡ ರಂಜನ್ ಶಕ್ತಿಗೆ ತಿಳಿಸಿದ್ದಾರೆ.