ಕೂಡಿಗೆ, ಮಾ.1: ಮನೆಯ ಸಮೀಪದ ಕೊಟ್ಟಿಗೆಯಲ್ಲಿ ಕಟ್ಟಿದ್ದ 50 ಸಾವಿರ ಬೆಲೆ ಬಾಳುವ ಎರಡು ಸಿಂಧಿ ಎತ್ತುಗಳನ್ನು ಕಳವು ಮಾಡಿ ಬಂಧಿತ ರಾಗಿರುವ ಘಟನೆ ಹೆಬ್ಬಾಲೆ ಗ್ರಾಮ ಪಂಚಾಯ್ತಿ ವ್ಯಾಪ್ತಿಯ ಚಿನ್ನೇನಹಳ್ಳಿ ಗ್ರಾಮದಲ್ಲಿ ನಡೆದಿದೆ. ಚಿನ್ನೇನಹಳ್ಳಿ ನಿವಾಸಿ ಜಗದೀಶ್ ಎಂಬವರಿಗೆ ಸೇರಿದ ಎತ್ತುಗಳನ್ನು ಎಂದಿನಂತೆ ಮನೆಯ ಸಮೀಪದಲ್ಲಿನ ಕೊಟ್ಟಿಗೆಯಲ್ಲಿ ಕಟ್ಟಲಾಗಿತ್ತು. ಮಧ್ಯರಾತ್ರಿಯಲ್ಲಿ ಕೊಟ್ಟಿಗೆಯಿಂದ ಎತ್ತುಗಳನ್ನು ಕಳವು ಮಾಡಿ ಕಾಡು ದಾರಿಯಲ್ಲಿ ತೆರಳುತ್ತಿದ್ದಾಗ, ಗ್ರಾಮಸ್ಥರು ಜಮೀನಿಗೆ ಬೋರ್ವೆಲ್ ಮೂಲಕ ನೀರು ಹಾಯಿಸಿ ಮನೆಗೆ ಹಿಂತಿರುಗುವ ಸಂದರ್ಭ ಜಗದೀಶ್ ಅವರ ಎತ್ತುಗಳನ್ನು ಹೊಡೆದುಕೊಂಡು ಹೋಗುತ್ತಿದ್ದನ್ನು ಗಮನಿಸಿ, ಎತ್ತುಗಳ ಸಮೇತ ಕಳ್ಳರನ್ನು ಹಿಡಿದು ಪೊಲೀಸ್ ಠಾಣೆಗೆ ಒಪ್ಪಿಸಿದ್ದಾರೆ. ಆರೋಪಿಗಳು ಪಿರಿಯಾಪಟ್ಟಣ ತಾಲೂಕಿನ ಮನುಗನ ಹಳ್ಳಿಯ ಮಂಜ ಮತ್ತು ಸ್ವಾಮಿ ಎಂದು ತಿಳಿದುಬಂದಿದ್ದು, ಕುಶಾಲನಗರ ಗ್ರಾಮಾಂತರ ಪೊಲೀಸ್ ಠಾಣೆಯ ಪೊಲೀಸರು ಎತ್ತುಗಳ ವಾರಸುದಾರ ಜಗದೀಶ್ ಅವರನ್ನು ಕರೆಸಿ ಮೊಕದ್ದಮೆ ದಾಖಲಿಸಿ ಆರೋಪಿಗಳನ್ನು ನ್ಯಾಯಾಲಯಕ್ಕೆ ಒಪ್ಪಿಸಿದ್ದಾರೆ.