ಮಡಿಕೇರಿ, ಮಾ. 1: ಪ್ರಸಕ್ತ ಫೆ. 28ರೊಳಗೆ 2018-19ನೇ ಸಾಲಿನ ಮುಂಗಡ ಪತ್ರ ತಯಾರಿಸಿ ಕಳುಹಿಸಿಕೊಡುವಂತೆ ಸರಕಾರದ ನಿರ್ದೇಶನದಂತೆ, ಈಗಾಗಲೇ ಬಜೆಟ್ ತಯಾರಿಸಿ ನಗರಸಭೆಯ ಸಾಮಾನ್ಯ ಸಭೆಯಲ್ಲಿ ಮಂಡಿಸಲಾಗಿದೆ. ಆ ದಿಸೆಯಲ್ಲಿ ಜನತೆಯ ಅಭಿಪ್ರಾಯ ಪಡೆಯಲು ಕಳೆದ ಸಾಲಿನಿಂದ ಸಾರ್ವಜನಿಕ ಸಭೆ ಏರ್ಪಡಿಸ ಲಾಗುತ್ತಿದ್ದು, ನಗರವಾಸಿ ಗಳು ಪಾಲ್ಗೊಂಡು ಅನಿಸಿಕೆಗಳನ್ನು ವ್ಯಕ್ತಪಡಿಸದಿರುವದು ವಿಷಾದನೀಯ ಎಂದು ನಗರಸಭಾ ಅಧ್ಯಕ್ಷೆ ಕಾವೇರಮ್ಮ ಸೋಮಣ್ಣ ಪ್ರತಿಕ್ರಿಯಿಸಿದ್ದಾರೆ.ಮುಂದಿನ ಸಾಲಿನ ಕಾಮಗಾರಿಗಳ ಕ್ರಿಯಾಯೋಜನೆ ಬಜೆಟ್ ಸಂಬಂಧ ಜನಾಭಿಪ್ರಾಯ ಪಡೆಯಲು ಇಂದು ಇಲ್ಲಿನ ಕಾವೇರಿ ಕಲಾಕ್ಷೇತ್ರದಲ್ಲಿ ಏರ್ಪಡಿಸಲಾಗಿದ್ದ ಸಭೆಗೆ ನಗರ ಜನತೆ ಬಾರದಿರುವ ಕುರಿತು ಅವರು ಮೇಲಿ ನಂತೆ ಅಭಿಪ್ರಾಯ ನೀಡಿದರು.

ಈಗಾಗಲೇ ಮುಂಗಡ ಪತ್ರ ತಯಾರಿಸಿ ಸಭೆಯಲ್ಲಿ ಮಂಡಿಸಿದ್ದರೂ, ಜನತೆ ನೀಡುವ ಸಲಹೆಗಳೊಂದಿಗೆ ಅಂಗೀಕರಿಸುವ ಆಶಯ ಹೊಂದಿದ್ದಾಗಿಯೂ ಕಾವೇರಮ್ಮ ಸೋಮಣ್ಣ ವಿವರಿಸಿದರು.

ನಗರಸಭೆಯ ಕಾರ್ಯ ವೈಖರಿಯಿಂದ ಜನತೆ ಬೇಸತ್ತು ಇಂದಿನ ಸಭೆಯಲ್ಲಿ ಭಾಗವಹಿಸಿಲ್ಲವೆ? ಎಂಬ ಪ್ರಶ್ನೆಗೆ, ತಾನು ಪ್ರಾಮಾಣಿಕ ವಾಗಿ ನಿತ್ಯ ಕೆಲಸ ನಿರ್ವಹಿಸುತ್ತಿದ್ದು, ಜನರ ಕೆಲಸಗಳಿಗಾಗಿ ಸಮಯ ನೀಡುತ್ತಿರುವೆ ಎಂದು ಸಮರ್ಥಿಸಿ ಕೊಂಡ ಅವರು, ಯಾವ ಕಾರಣಕ್ಕಾಗಿ ಸಾರ್ವಜನಿಕರು

(ಮೊದಲ ಪುಟದಿಂದ) ಬಂದಿಲ್ಲವೆಂದು ತಿಳಿಯದಾಗಿದೆ ಎಂದರು.

ಶುಭ ಆಶಯ : ಇಂದು ಆಯೋಜಿಸಿದ ಸಭೆಯಲ್ಲಿ ಇಬ್ಬರು ಮಹಿಳೆಯರು ಪಾಲ್ಗೊಂಡು ರಸ್ತೆ ಅವ್ಯವಸ್ಥೆ ಹಾಗೂ ಖಾಲಿ ನಿವೇಶನಗಳ ನಿರ್ವಹಣೆ ಸಂಬಂಧ ಉತ್ತಮ ಸಲಹೆಗಳನ್ನು ನೀಡಿದ್ದು, ಮುಂದೆ ಹೆಚ್ಚಿನ ಜನತೆ ಸ್ಪಂದಿಸುವ ಆಶಯವಿರುವದಾಗಿ ಆಯುಕ್ತೆ ಶುಭ ಪ್ರತಿಕ್ರಿಯಿಸಿದರು. ಒಳಚರಂಡಿ ಕಾಮಗಾರಿಯಿಂದ ಹಾಳಾಗಿರುವ ರಸ್ತೆಗಳನ್ನು ಸರಿಪಡಿಸಲು ನಗರಸಭೆ ಅಗತ್ಯ ಗಮನ ಹರಿಸುವದಾಗಿ ಭರವಸೆ ನೀಡಿದರು.

ಅಲ್ಲದೆ ಕೆಲವೆಡೆ ವಸತಿ ಪ್ರದೇಶದ ನಡುವೆ ಖಾಲಿ ನಿವೇಶನಗಳು ನಿರ್ವಹಣೆಯಿಲ್ಲದೆ, ಅಕ್ಕ ಪಕ್ಕ ನಿವಾಸಿಗಳು ತೊಂದರೆ ಅನುಭವಿಸುತ್ತಿರುವ ಬಗ್ಗೆ ಇಂದಿನ ಸಭೆಯಲ್ಲಿ ಮಹಿಳೆಯೊಬ್ಬರು ಗಮನ ಸೆಳೆದಿದ್ದು, ಅಂಥ ಮಾಲೀಕರಿಗೆ ನೋಟೀಸ್ ಜಾರಿಗೊಳಿಸಿ ಸ್ಪಂದಿಸದಿದ್ದರೆ ಮುಂದೆ ದಂಡ ವಿಧಿಸಲಾಗುವದು ಎಂದು ಎಚ್ಚರಿಸಿದರು. ನಗರಸಭೆಯೊಳಗೆ ಸಾಕಷ್ಟು ಅಧಿಕಾರಿಗಳು ಹಾಗೂ ಸಿಬ್ಬಂದಿಯ ಕೊರತೆ ನಡುವೆಯೂ ಜನರ ಸಮಸ್ಯೆಗಳಿಗೆ ಸಾಧ್ಯವಿರುವಷ್ಟು ಗಮನ ನೀಡಲಾಗುತ್ತಿದೆ ಎಂದು ಆಯುಕ್ತರು ಸ್ಪಷ್ಟಪಡಿಸಿದರು.

ಓರ್ವ ಹೊರಗೆ : ಇಂದಿನ ಸಭೆಯಲ್ಲಿ ಓರ್ವ ಹಿರಿಯ ಮಹಿಳೆ ಹಾಗೂ ಮತ್ತೋರ್ವ ವನಿತೆ ಯೊಂದಿಗೆ ದೇಶಪ್ರೇಮಿ ಯುವಕ ಸಂಘದ ಅರುಣ್ ಶೆಟ್ಟಿ ಕಾಣಿಸಿ ಕೊಂಡರಾದರೂ, ಈಗಾಗಲೇ ಮುಂಗಡ ಪತ್ರ ತಯಾರಿಸಿ ಮಂಡಿಸಿದ ಬಳಿಕ ಸಾರ್ವಜನಿಕ ಅಭಿಪ್ರಾಯ ಕೇಳುವ ಔಚಿತ್ಯ ಪ್ರಶ್ನಿಸಿ ಸಭಾಂಗಣದಿಂದ ಹೊರ ನಡೆದರು. ಆ ಬೆನ್ನಲ್ಲೇ ಮಾಜೀ ಉಪಾಧ್ಯಕ್ಷೆ ಹಾಗೂ ಸದಸ್ಯೆ ಲೀಲಾ ಶೇಷಮ್ಮ ಮೇಲಿನ ಕಾರಣವನ್ನೇ ಪ್ರಸ್ತಾಪಿಸಿ ಸಭಾತ್ಯಾಗ ಮಾಡಿದರು.

ಬಿಜೆಪಿಯ ಏಕಮೇವ ಸದಸ್ಯೆ ಅನಿತಾ ಪೂವಯ್ಯ ಪ್ರಾರಂಭದಲ್ಲಿ ಕಾಣಿಸಿಕೊಂಡರೂ ಬಳಿಕ ಮೌನವಾಗಿ ನಿರ್ಗಮಿಸಿದರು. ಆಡಳಿತಾರೂಢ ಕಾಂಗ್ರೆಸ್‍ನಿಂದ ಮಾಜೀ ಅಧ್ಯಕ್ಷೆ ಜುಲೇಕಾಬಿ, ಅಧ್ಯಕ್ಷೆ ಕಾವೇರಮ್ಮ ಅವರಿಗೆ ಸಾಥ್ ನೀಡಿದರೆ, ಮಿಕ್ಕೆಲ್ಲ ಸದಸ್ಯರು ನಾಪತ್ತೆಯಾಗಿದ್ದರು. ಬದಲಾಗಿ ಎಸ್‍ಡಿಪಿಐನ ಕೆ.ಜೆ. ಪೀಟರ್ ಸಭೆಯಲ್ಲಿದ್ದು, ಕೊನೆ ಹಂತದಲ್ಲಿ ಮನ್ಸೂರ್ ಮತ್ತು ನಾಮನಿರ್ದೇಶನ ಸದಸ್ಯ ಉದಯಕುಮಾರ್ ಕಾಣಿಸಿಕೊಂಡರು. ಒಟ್ಟಿನಲ್ಲಿ ಇಂದಿನ ನಗರಸಭೆಯ ಸಾರ್ವಜನಿಕ ಸಭೆಯು ಒಂದು ರೀತಿ ‘ಯಥಾ ರಾಜ..., ತಥಾ ಪ್ರಜಾ...’ ಎಂಬಂತೆ ಭಾಸವಾಯಿತು.