ಮಡಿಕೇರಿ, ಫೆ. 7 : ನಗರಸಭೆಯ ಆಡಳಿತ ವೈಫಲ್ಯವನ್ನು ಖಂಡಿಸಿ ತಾ. 9 ರಂದು ಬೆಳಿಗ್ಗೆ 10.30 ಗಂಟೆಯಿಂದ ತಾ. 10 ರ ಬೆಳಿಗ್ಗೆ 10.30 ರವರೆಗೆ 24 ಗಂಟೆಗಳ ಕಾಲ ಅಹೋ ರಾತ್ರಿ ಧರಣಿಯನ್ನು ನಡೆಸಲಾಗುವದೆಂದು ಬಿಜೆಪಿ ನಗರಾಧ್ಯಕ್ಷರಾದ ಮಹೇಶ್ ಜೈನಿ ತಿಳಿಸಿದ್ದಾರೆ.ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ನಗರಸಭೆಯ ಆಡಳಿತದಲ್ಲಿ ಪ್ರಮುಖ ಪಾತ್ರ ವಹಿಸಿರುವ ಕಾಂಗ್ರೆಸ್ ಸರ್ಕಾರ ರಾಜ್ಯದಲ್ಲಿದ್ದರೂ ಯಾವುದೇ ಸಮಸ್ಯೆಗಳಿಗೆ ಪರಿಹಾರ ದೊರೆಯುತ್ತಿಲ್ಲವೆಂದು ಆರೋಪಿಸಿದರು.
ಫಾರಂ 3ರ ಅರ್ಜಿ ವಿಲೇವಾರಿ ವಿಳಂಬ, ನಗರದಲ್ಲಿ ಶುಚಿತ್ವದ ಕೊರತೆ, ಯು.ಜಿ.ಡಿ ಕಾಮಗಾರಿಗಳ ಅವ್ಯವಸ್ಥೆ, ನಗರಸಭೆಯನ್ನು ಕಾಡುತ್ತಿರುವ ನೌಕರರ ಕೊರತೆ, ಸ್ಟೋನ್ಹಿಲ್ ಬಳಿ ಅವೈಜ್ಞಾನಿಕ ರೀತಿಯಲ್ಲಿ ಕಸವಿಲೇವಾರಿ ಮಾಡುತ್ತಿರುವದರಿಂದ ಸುಬ್ರಮಣ್ಯ ನಗರದಲ್ಲಿ ಉಂಟಾಗಿರುವ ಅಶುಚಿತ್ವದ ವಾತಾವರಣ, ವಾಸದೃಢೀಕರಣ ಪತ್ರ ಮತ್ತು ಜನನ ಮರಣ ಪತ್ರ ನೀಡುವಲ್ಲಿ ವಿನಾಕಾರಣ ವಿಳಂಬ, ಮನೆ ಮತ್ತು ಕಟ್ಟಡಗಳ ಕಾಮಗಾರಿ ಮುಕ್ತಾಯಗೊಂಡÀ ಬಗ್ಗೆ ಪ್ರಮಾಣ ಪತ್ರ ನೀಡಲು ಅಡಚಣೆ, ನಗರಕ್ಕೆ ಆಗಮಿಸುವ ಪ್ರವಾಸಿಗರಿಗೆ ಮೂಲಭೂತ ಸೌಲಭ್ಯ, ಪಾರ್ಕಿಂಗ್ ವ್ಯವಸ್ಥೆ ಮತ್ತು ಸೂಕ್ತ ಮಾಹಿತಿಯನ್ನು ಒದಗಿಸದೆ ಇರುವುದು, ಗಾಂಧಿ ಮೈದಾನದಲ್ಲಿ ನಿಯಮ ಬಾಹಿರವಾಗಿ
(ಮೊದಲ ಪುಟದಿಂದ) ವ್ಯಾಪಾರ ನಡೆಸಲು ಅವಕಾಶ ನೀಡುತ್ತಿರುವದು, ಮಹದೇವಪೇಟೆ ರಸ್ತೆ ಅವ್ಯವಸ್ಥೆ, ನಗರದಲ್ಲಿ ಎಲ್ಲೆಂದರಲ್ಲಿ ಅನಧಿಕೃತವಾಗಿ ತಲೆ ಎತ್ತುತ್ತಿರುವ ಶೀಟ್ಗಳ ಅಂಗಡಿ ಮಳಿಗೆಗಳು ಮತ್ತು ತೆರಿಗೆ ವಂಚನೆ, ಪಾರ್ಕಿಂಗ್ ವ್ಯವಸ್ಥೆ ಇಲ್ಲದಿದ್ದರೂ ಸುಂಕವಸೂಲಿ ಮಾಡುತ್ತಿರುವದು, ಜಿಲ್ಲಾ ಉಸ್ತುವಾರಿ ಸಚಿವರು ಮತ್ತು ಆಡಳಿತ ವ್ಯವಸ್ಥೆ ನಡುವಿನ ಹೊಂದಾಣಿಕೆಯ ಕೊರತೆ ಸೇರಿದಂತೆ ಅನೇಕ ಅವ್ಯವಸ್ಥೆಗಳ ವಿರುದ್ಧ ಪ್ರತಿಭಟನೆ ನಡೆಸುತ್ತಿರುವದಾಗಿ ಮಹೇಶ್ ಜೈನಿ ವಿವರಿಸಿದರು.
ರಾಜಾಸೀಟು ಉದ್ಯಾನವನ ದಲ್ಲಿರುವ ಸಂಗೀತ ಕಾರಂಜಿ ಅವ್ಯವಸ್ಥೆಯನ್ನು ಸರಿಪಡಿಸದಿದ್ದಲ್ಲಿ ಹೋರಾಟವನ್ನು ತೀವ್ರ ಗೊಳಿಸುವದಾಗಿ ಎಚ್ಚರಿಕೆ ನೀಡಿದರು.
ಸುದ್ದಿಗೋಷ್ಠಿಯಲ್ಲಿ ಉಪಾಧ್ಯಕ್ಷ ಬಿ.ಕೆ.ಜಗದೀಶ್, ಪ್ರಧಾನ ಕಾರ್ಯದರ್ಶಿಗಳಾದ ಉಮೇಶ್ ಸುಬ್ರಮಣಿ, ಬಿ.ಎಂ. ರಾಜೇಶ್, ಮಹಿಳಾ ಮೋರ್ಚಾದ ನಗರಾಧ್ಯಕ್ಷೆ ಅನಿತಾಪೂವಯ್ಯ ಹಾಗೂ ಯುವ ಮೋರ್ಚಾದ ನಗರಾಧ್ಯಕ್ಷ ಡಿಶು ಉಪಸ್ಥಿತರಿದ್ದರು.