ಮಡಿಕೇರಿ, ಫೆ. 2: ದೇಶವ್ಯಾಪ್ತಿ ಬಿಎಸ್‍ಎನ್‍ಎಲ್‍ನಿಂದ ಮೊಬೈಲ್ ಟವರ್‍ಗಳನ್ನು ಪ್ರತ್ಯೇಕಿಸದಂತೆ ಆಗ್ರಹಿಸಿ ಜ. 30 ರಿಂದ ನಡೆಸುತ್ತಿರುವ ಮುಷ್ಕರ ತಾ. 3 ರಂದು (ಇಂದು) ಕೊನೆಗೊಳ್ಳಲಿದೆ. ಕೇಂದ್ರದ ಗಮನ ಸೆಳೆಯಲು ನೌಕರರ ಒಕ್ಕೂಟದಿಂದ ದೇಶವ್ಯಾಪ್ತಿಯಲ್ಲಿ ಬಿಎಸ್‍ಎನ್‍ಎಲ್ ಜಿಲ್ಲಾ ಕೇಂದ್ರ ಕಚೇರಿಗಳಲ್ಲಿ ಐದು ದಿನಗಳ ಪ್ರತಿಭಟನೆ ಹಮ್ಮಿಕೊಳ್ಳಲಾಗಿತ್ತು.

ಜಿಲ್ಲೆಯಲ್ಲಿ ಪ್ರಥಮ ದಿನ ಮಡಿಕೇರಿ ತಾಲೂಕು ನೌಕರರು ಮುಷ್ಕರ ಹೂಡಿದರೆ, ದ್ವಿತೀಯ ದಿನದಂದು ಸೋಮವಾರಪೇಟೆ ತಾಲೂಕು ನೌಕರರು ಧರಣಿ ನಡೆಸಿದರು. ಬಳಿಕ ಸಿದ್ದಾಪುರ ಹಾಗೂ ವೀರಾಜಪೇಟೆ ವಲಯ ಮತ್ತು ಗೋಣಿಕೊಪ್ಪಲು, ಕುಶಾಲನಗರ ಹೀಗೆ ಸರದಿಯಲ್ಲಿ ನಡೆಯುತ್ತಿರುವ ಮುಷ್ಕರ ಇಂದು ಕೊನೆಗೊಳ್ಳಲಿದೆ ಎಂದು ಮೂಲಗಳು ತಿಳಿಸಿವೆ. ಯಾವದೇ ಕಾರಣಕ್ಕೂ ಕೇಂದ್ರ ಸರಕಾರ ಬಿಎಸ್‍ಎನ್‍ಎಲ್‍ನಿಂದ ಮೊಬೈಲ್ ಟವರ್‍ಗಳನ್ನು ಪ್ರತ್ಯೇಕಿಸಿ ನಿಗಮ ರಚಿಸದಂತೆ ನೌಕರರ ಒಕ್ಕೂಟ ಆಗ್ರಹಿಸಿದೆ.