ಸೋಮವಾರಪೇಟೆ, ಜ. 28: ಕೊಡಗು ಜಿಲ್ಲಾ ಕ.ಸಾ.ಪ.ದಿಂದ ತಾಲೂಕಿನ ಬಸವನಹಳ್ಳಿ ಮೋರಾರ್ಜಿ ವಸತಿ ಶಾಲಾ ಆವರಣದಲ್ಲಿ ತಾ. 31 ರಂದು ನಡೆಯಲಿರುವ ಜಿಲ್ಲಾ ಮಕ್ಕಳ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿ ಆಯ್ಕೆ ಯಾಗಿರುವ ಪಟ್ಟಣದ ವಿ.ಡಿ. ಸಿಂಚನ ಅವರಿಗೆ ಕಸಾಪದಿಂದ ಅಧಿಕೃತ ಆಹ್ವಾನ ನೀಡಲಾಯಿತು. ಕಸಾಪದಿಂದ ಇದೇ ಪ್ರಥಮ ಬಾರಿಗೆ ಮಕ್ಕಳಿಗಾಗಿಯೇ ಆಯೋಜಿಸಿರುವ ಸಮ್ಮೇಳನವನ್ನು ಯಶಸ್ವಿಗೊಳಿಸಲು ಈಗಾಗಲೇ ವಿವಿಧ ಸಮಿತಿಗಳನ್ನು ರಚಿಸಲಾಗಿದ್ದು, ಜಿಲ್ಲಾ ಹಾಗೂ ತಾಲೂಕು ಕನ್ನಡ ಸಾಹಿತ್ಯ ಪರಿಷತ್‍ನ ಸದಸ್ಯರು ಇಂದು ಸಿಂಚನ ಅವರ ಮನೆಗೆ ತೆರಳಿ ಸನ್ಮಾನಿಸು ವದರೊಂದಿಗೆ ಸಮ್ಮೇಳನಕ್ಕೆ ಆಹ್ವಾನ ನೀಡಿದರು. ಈ ಸಂದರ್ಭ ಜಿಲ್ಲಾ ಕಸಾಪ ಕೋಶಾಧಿಕಾರಿ ಎಸ್.ಎ. ಮುರಳೀಧರ್, ಮಡಿಕೇರಿ ತಾಲೂಕು ಅಧ್ಯಕ್ಷ ಕುಡೆಕಲ್ ಸಂತೋಷ್, ಸೋಮವಾರಪೇಟೆ ತಾಲೂಕು ಅಧ್ಯಕ್ಷ ಎಸ್.ಡಿ. ವಿಜೇತ್, ತಾಲೂಕು ಕಾರ್ಯದರ್ಶಿ ಆದಂ, ಸದಸ್ಯರುಗಳಾದ ನ.ಲ. ವಿಜಯ, ಬಿ.ಈ. ಜಯೇಂದ್ರ, ಸಿಂಚನಾಳ ಪೋಷಕರಾದ ಮಧು ಮತ್ತು ಕಾಂಚನಾ ಸೇರಿದಂತೆ ಇತರರು ಉಪಸ್ಥಿತರಿದ್ದರು.