ಮಡಿಕೇರಿ, ಜ. 13: ಭಾರತಕ್ಕೆ ಆಮದಾಗುತ್ತಿರುವ ಕಾಳುಮೆಣಸಿನಲ್ಲಿ ಸಾಕಷ್ಟು ಕಾನೂನು ಬಾಹಿರ ವಹಿವಾಟು ನಡೆಯುತ್ತಿದ್ದು, ಈ ಬಗ್ಗೆ ಕೇಂದ್ರ ವಾಣಿಜ್ಯ ಇಲಾಖೆ ಕಠಿಣ ಕ್ರಮ ಕೈಗೊಳ್ಳುವಂತೆ ಕಾಳುಮೆಣಸು ಬೆಳೆಗಾರ ಸಮನ್ವಯ ಸಮಿತಿ ಕೇಂದ್ರ ವಾಣಿಜ್ಯ ಸಚಿವ ಸುರೇಶ್ ಪ್ರಭು ಅವರನ್ನು ಒತ್ತಾಯಿಸಿದೆ.
ದೆಹಲಿಯಲ್ಲಿ ವಾಣಿಜ್ಯ ಸಚಿವರನ್ನು ಭೇಟಿಯಾದ ಕಾಳುಮೆಣಸು ಬೆಳೆಗಾರ ಸಮನ್ವಯ ಸಮಿತಿಯ ನಿಯೋಗ ಕಾಳುಮೆಣಸಿನ ಆಮದು ಮೇಲೆ ಕೆ.ಜಿ. ಒಂದಕ್ಕೆ ರೂ. 500 ಆಮದು ಬೆಲೆ ಹೇರಿದ್ದರೂ ವ್ಯಾಪಾರಿಗಳು ಹೊಸ ಕಳ್ಳ ದಾರಿಯನ್ನು ಕಂಡು ಹಿಡಿದು ವಿಯೆಟ್ನಾಂ ದೇಶದ ಕಳಪೆ ಕಾಳು ಮೆಣಸನ್ನು ಕೆಜಿ.ಗೆ ರೂ.130 ರ ಆಸುಪಾಸಿನಲ್ಲಿ ಖರೀದಿಸಿ ಶ್ರೀಲಂಕಾಕ್ಕೆ ತಂದು ಅಲ್ಲಿಂದ ಭಾರತಕ್ಕೆ ಆಮದು ಮಾಡಿ ಸರಕಾರಕ್ಕೆ ಕೋಟ್ಯಾಂತರ ರೂಪಾಯಿಗಳ ತೆರಿಗೆ ವಂಚನೆಯೊಂದಿಗೆ ದೇಶದ ದರದಲ್ಲಿ ಮಾರುಕಟ್ಟೆಗೆ ಬಿಡುತ್ತಿರುವದು ಭಾರತದಲ್ಲಿ ದರ ಕುಸಿತಕ್ಕೆ ಕಾರಣವಾಗಿದೆ ಎಂದು ಆತಂಕ ವ್ಯಕ್ತಪಡಿಸಿದೆ.
ಕೇಂದ್ರ ವಾಣಿಜ್ಯ ಸಚಿವ ಸುರೇಶ್ ಪ್ರಭು ಅವರಿಗೆ ಕಾಳುಮೆಣಸು ಬೆಳೆಗಾರರು ಎದುರಿಸುತ್ತಿರುವ ಮತ್ತಷ್ಟು ಸಮಸ್ಯೆ ಗಳನ್ನು ಮನದಟ್ಟು ಮಾಡಲಾಯಿತು. ವಿಯೆಟ್ನಾನಿಂದ ಆಮದಾಗುವ ಕಾಳು ಮೆಣಸಿನಲ್ಲಿ ವಿಷಕಾರಕ ಅಂಶಗಳಿ ರುವದರಿಂದ ಅದನ್ನು ಕಡ್ಡಾಯವಾಗಿ ರಾಸಾಯನಿಕ ಪರೀಕ್ಷೆಗೊಳ ಪಡಿಸಬೇಕು. ಶ್ರೀಲಂಕಾ ದಿಂದ ಆಮದಾಗುವ ಕಾಳುಮೆಣಸು, ಅದು ವಿಯೆಟ್ನಾಂ ಕಾಳುಮೆಣಸು ಆಗಿದ್ದು, ಅದರ ಮೂಲವನ್ನು ಪರಿಶೋಧಿಸಬೇಕು.
(ಮೊದಲ ಪುಟದಿಂದ) ಶ್ರೀಲಂಕಾ ಬೆಳೆಯುವ ಕಾಳು ಮೆಣಸಿಗಿಂತ ಹೆಚ್ಚಿಗೆ ಪ್ರಮಾಣದ ಕಾಳುಮೆಣಸನ್ನು ರಫ್ತು ಮಾಡುತ್ತಿದ್ದು, ಈ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳಬೇಕು. ಬಾಂಗ್ಲಾ ಮತ್ತು ಮಯನ್ಮಾರಿನಿಂದ ಕಾನೂನು ಬಾಹಿರವಾಗಿ ವಿಯೆಟ್ನಾಂ ಕಾಳುಮೆಣಸನ್ನು ಭಾರತಕ್ಕೆ ನುಗ್ಗಿಸುತ್ತಿದ್ದು ಅದನ್ನು ತಡೆಯುವ ಕ್ರಮಕೈಗೊಳ್ಳಬೇಕು. ಶ್ರೀಲಂಕಾದಿಂದ ಆಮದಾಗುವ ಕಾಳುಮೆಣಸು ವ್ಯವಹಾರದಲ್ಲಿ ಕೋಟ್ಯಾಂತರ ರೂಪಾಯಿಯ ತೆರಿಗೆ ವಂಚನೆ ಆಗುತ್ತಿದ್ದು, ಈ ಬಗ್ಗೆ ತಕ್ಷಣ ಕ್ರಮ ಕೈಗೊಳ್ಳಬೇಕು. ಕಾಳುಮೆಣಸನ್ನು ಬೆಳೆಯದೇ ಇರುವ ಜರ್ಮನಿ, ಸ್ಪೈನ್, ಇಟಲಿ ಮೊದಲಾದ ದೇಶಗಳ ಹೆಸರಿನಲ್ಲಿ ಆಮದಾಗುತ್ತಿದ್ದು ಇದರಲ್ಲಿ ಭಾರೀ ಅವ್ಯವಹಾರ ಆಗುತ್ತಿರುವ ಸಂಶಯವಿದೆ. ಈ ಬಗ್ಗೆ ಕ್ರಮ ಕೈಗೊಳ್ಳಬೇಕು ಎಂಬದು ಸೇರಿದಂತೆ ಪ್ರಮುಖ ಬೇಡಿಕೆಗಳನ್ನು ವಾಣಿಜ್ಯ ಸಚಿವರ ಮುಖೇನ ಕೇಂದ್ರ ಸರಕಾರಕ್ಕೆ ಸಲ್ಲಿಸಲಾಯಿತು. ಕಾಳುಮೆಣಸು ಬೆಳೆಗಾರರ ಸಮಸ್ಯೆಗಳ ಬಗ್ಗೆ ಮಾಹಿತಿ ಪಡೆದ ಸಚಿವ ಸುರೇಶ್ ಪ್ರಭು, ಸಂಬಂಧಿತ ಅಧಿಕಾರಿಗಳು ಈ ಬಗ್ಗೆ ವಿಷಯವನ್ನು ಗಂಭೀರವಾಗಿ ಪರಿಗಣಿಸಿ ತಕ್ಷಣ ಕ್ರಮ ಕೈಗೊಳ್ಳುವದಾಗಿ ಭರವಸೆ ನೀಡಿದರು.
ಮುಂದಿನ ಕೆಲವೇ ದಿನಗಳಲ್ಲಿ ಕಾಳುಮೆಣಸಿನ ದರ ಕನಿಷ್ಟ ರೂ. 450 ದಾಟಬಹುದಾಗಿದ್ದು ಬೆಳೆಗಾರರು ಬೆಲೆ ಕುಸಿತದ ಬಗ್ಗೆ ಭಯಪಡುವ ಅಗತ್ಯವಿಲ್ಲ ಎಂದು ಕಾಳುಮೆಣಸು ಸಮನ್ವಯ ಸಮಿತಿಯ ಸಂಚಾಲಕರೂ ಆಗಿರುವ ಅಡಿಕೆ ಮಾರಾಟ ಫೆಡರೇಶನ್ ಅಧ್ಯಕ್ಷ ಕೊಂಕೋಡಿ ಪದ್ಮನಾಭ ಸಚಿವರ ಭೇಟಿ ನಂತರ ಭರವಸೆ ವ್ಯಕ್ತಪಡಿಸಿದ್ದಾರೆ.
ಈ ನಿಯೋಗದಲ್ಲಿ ಕಾಳುಮೆಣಸು ಬೆಳೆಗಾರ ಸಮನ್ವಯ ಸಮಿತಿ ಪ್ರಧಾನ ಸಂಚಾಲಕ ಕೊಂಕೋಡಿ ಪದ್ಮನಾಭ, ಸಮಿತಿಯ ಸಮನ್ವಯ ಸಂಚಾಲಕ ಕೆ.ಕೆ. ವಿಶ್ವನಾಥ್, ಕ್ಯಾಂಪೆÇ್ಕೀ ಪ್ರತಿನಿಧಿಗಳಾದ ಮಂಜುನಾಥ್, ದಯಾನಂದ ಹೆಗ್ಡೆ, ಕೊಡಗು ಪ್ಲಾಂಟರ್ಸ್ ಅಸೊಸಿಯೇಷನ್ ಪ್ರತಿನಿಧಿ ಪ್ರದೀಪ್ ಪೂವಯ್ಯ, ಕರ್ನಾಟಕ ಬೆಳೆಗಾರರ ಒಕ್ಕೂಟದ ಪ್ರತಿನಿಧಿ ಜಯರಾಂ, ಮಲೆನಾಡು ಅಡಿಕೆ ಮಾರಾಟಗಾರರ ಸಹಕಾರ ಸಂಘದ ಪ್ರತಿನಿಧಿ ಎಡಗೆರೆ ಸುಬ್ರಮಣ್ಯ, ಕರ್ನಾಟಕ ಬೆಳೆಗಾರರ ಸಂಘಟನೆಯ ಅಧ್ಯಕ್ಷ ಪ್ರಮೋದ್, ಶಿರಸಿ ತಾಲೂಕು ಕೃಷಿ ಉತ್ಪನ್ನ ಸಹಕಾರ ಮಾರುಕಟ್ಟೆ ಸೊಸೈಟಿ ಪ್ರತಿನಿಧಿಗಳಾದ ಜಿ.ಎಂ. ಹೆಗಡೆ , ಟಿಎಂ.ಎಸ್.ಎಸ್.ನ ಯಂ.ಆರ್. ಹೆಗಡೆ ಮೊದಲಾದವರು ನಿಯೋಗದಲ್ಲಿದ್ದರು.