ಮಡಿಕೇರಿ, ಜ. 9: ನಿನ್ನೆ ರಾತ್ರಿ 8.30 ರ ಸುಮಾರಿಗೆ ನಗರದ ಮುಖ್ಯ ರಸ್ತೆಯ ಕಾಮಧೇನು ಪೆಟ್ರೋಲ್ ಬಂಕ್ ಬಳಿ ಕಾಲ್ನಡಿಗೆಯಲ್ಲಿ ತೆರಳುತ್ತಿದ್ದ ವ್ಯಕ್ತಿಯೊಬ್ಬರಿಗೆ ಕಾರೊಂದು ಡಿಕ್ಕಿಯಾದ ಪರಿಣಾಮ ಸಾವನ್ನಪ್ಪಿರುವ ಘಟನೆ ಸಂಭವಿಸಿದೆ. ಇಲ್ಲಿನ ಮಲ್ಲಿಕಾರ್ಜುನ ನಗರ ನಿವಾಸಿ, ಕೂಲಿ ಕಾರ್ಮಿಕ ಆಂಜನೇಯ (45) ಎಂಬವರೇ ಮೃತ ದುರ್ಧೈವಿ. ರಾತ್ರಿ ಬಿಳಿ ಬಣ್ಣದ್ದೆಂದು ಹೇಳಲಾಗಿರುವ ಕಾರು ಡಿಕ್ಕಿಯಿಂದ ಪಾದಚಾರಿ ಆಂಜನೇಯ ಕುಸಿದು ಬಿದ್ದಿದ್ದಾಗಿ ತಿಳಿದುಬಂದಿದೆ. ಈ ವೇಳೆ ತಲೆ ಭಾಗಕ್ಕೆ ತೀವ್ರ ಪೆಟ್ಟಾಗಿದ್ದ ಗಾಯಾಳುವನ್ನು ಅಪರಿಚಿತರು ಅದೇ ಕಾರಿನಲ್ಲಿ ಕರೆದೊಯ್ದು ಜಿಲ್ಲಾ ಸರಕಾರಿ ಆಸ್ಪತ್ರೆಗೆ ಸೇರಿಸಿ ಅಲ್ಲಿಂದ ತೆರಳಿದ್ದಾರೆ. ರಾತ್ರಿ 11.30 ರ ಸುಮಾರಿಗೆ ಗಾಯಾಳು ಚಿಕಿತ್ಸೆ ಫಲಕಾರಿಯಾಗದೆ ಕೊನೆಯುಸಿ ರೆಳೆದಿದ್ದಾರೆ. ಈ ಬಗ್ಗೆ ನಗರ ಸಂಚಾರಿ ಠಾಣೆ ಪೊಲೀಸರು ಪ್ರಕರಣ ದಾಖಲಿಸಿ ಕೊಂಡು ತನಿಖೆ ನಡೆಸುತ್ತಿದ್ದಾರೆ. ಮೃತ ಆಂಜನೇಯ ಪತ್ನಿ, ಓರ್ವ ಪುತ್ರ ಹಾಗೂ ಪುತ್ರಿಯನ್ನು ಅಗಲಿದ್ದಾರೆ.