ಸಿದ್ದಾಪುರ, ಡಿ.21: ವಿಜಯಪುರದ 9ನೇ ತರಗತಿಯ ಶಾಲಾ ಬಾಲಕಿಯ ಮೇಲೆ ನಡೆದಿರುವ ಸಾಮೂಹಿಕ ಅತ್ಯಾಚಾರ ಮತ್ತು ಕೊಲೆಯನ್ನು ಖಂಡಿಸಿ, ಇಂತಹವುಗಳನ್ನು ತಡೆಯುವಲ್ಲಿ ಸರ್ಕಾರ ಗಂಭೀರ ಕ್ರಮಗಳನ್ನು ಕೈಗೊಳ್ಳಬೇಕೆಂದು ಆಗ್ರಹಿಸಿ ಎಸ್‍ಡಿಪಿಐ ಪಕ್ಷದ ಕಾರ್ಯಕರ್ತರು ಇಲ್ಲಿನ ಬಸ್ ನಿಲ್ದಾಣದಲ್ಲಿ ಪ್ರತಿಭಟನೆ ನಡೆಸಿದರು.

ಈ ಪ್ರಕರಣವು ಕರ್ನಾಟಕದ ನಾಗರಿಕರನ್ನು ಬೆಚ್ಚಿಬೀಳಿಸಿದೆ. ಇತ್ತೀಚೆಗೆ ಮಹಿಳೆಯರು ಮತ್ತು ಮಕ್ಕಳ ಮೇಲೆ ದೌರ್ಜನ್ಯ ಪ್ರಕರಣಗಳು ಹೆಚ್ಚುತ್ತಲೇ ಇವೆ ಎಂದು ಪ್ರತಿಭಟನಾಕಾರರು ಆತಂಕ ವ್ಯಕ್ತಪಡಿಸಿದರು.

ಪಕ್ಷದ ಜಿಲ್ಲಾ ಸಮಿತಿ ಸದಸ್ಯ ಮುಸ್ತಫ ಮಾತನಾಡಿ, ಸಮಾಜವನ್ನು ಸಮಾನತೆಯ, ಸಹಬಾಳ್ವೆಯ ಆಧಾರದಲ್ಲಿ ನಿರ್ಮಿಸಲಾಗದಿರುವ ವೈಫಲ್ಯ ಆಕೆಯ ಪ್ರಾಣತೆಗೆದಿದೆ. ದಿನೇ ದಿನೇ ಇಂತಹ ಘಟನೆಗಳು ಮತ್ತು ಅವುಗಳ ಬರ್ಬರತೆ ಹೆಚ್ಚುತ್ತಲೇ ಇದ್ದರೂ ಯಾವದೇ ರೀತಿಯಲ್ಲಿಯೂ ಗಂಭೀರ ಕ್ರಮಗಳಿಗೆ ಮುಂದಾಗದ ಸರ್ಕಾರ, ಈ ಮಗುವಿನ ಬಲಿಯಿಂದಲಾದರೂ ಎಚ್ಚೆತ್ತು ಕೊಳ್ಳಬೇಕು ಎಂದು ಆಗ್ರಹಿಸಿದರು.