ಮಡಿಕೇರಿ, ಡಿ. 11: ವೀರಾಜಪೇಟೆ - ಕದನೂರು ಬಳಿ ಟೆಂಪೋ ಟ್ರಾವಲರ್ ಒಂದು ಪಲ್ಟಿಯಾಗಿ, ಕೋಲ್ಕತ್ತಾ ಜಿಂದಾಲ್ ಕುಟುಂಬದ ಎಂಟು ಮಂದಿ ಗಾಯಗೊಂಡಿದ್ದಾರೆ. ಘಟನೆ ಇಂದು ಸಂಜೆ 7ರ ಹೊತ್ತಿಗೆ ನಡೆದಿದ್ದು, ಆ ಮಾರ್ಗವಾಗಿ ಬರುತ್ತಿದ್ದ ಕಡಂಗದ ಬೆಳೆಗಾರ ಶರೂ ಸುಬ್ಬಯ್ಯ ಕೂಡಲೇ ಪೊಲೀಸರಿಗೆ ವಿಷಯ ತಿಳಿಸಿದ್ದಾರೆ.

ಜಾಗೃತರಾದ ಸ್ಥಳೀಯರು, ಸಬ್ ಇನ್ಸ್‍ಪೆಕ್ಟರ್ ಸುರೇಶ್ ಬೋಪಣ್ಣ, ಹೆಡ್ ಕಾನ್ಸ್‍ಟೇಬಲ್ ರವಿಕುಮಾರ್, ಜೋಯಪ್ಪ, ಕಾವೇರಪ್ಪ, ಬೆಳ್ಯಪ್ಪ ಮತ್ತು ವೆಂಕಟೇಶ್ ಸ್ಥಳಕ್ಕೆ ತೆರಳಿ ವಾಹನದೊಳಗೆ ಸಿಲುಕಿದ್ದವರನ್ನು ಹೊರಗೆಳೆದಿದ್ದಾರೆ. ಆಂಬ್ಯುಲೆನ್ಸ್ ತರಿಸಿ ವೀರಾಜಪೇಟೆ ಆಸ್ಪತ್ರೆಗೆ ದಾಖಲಿಸಿದ್ದಾರೆ.

ಬೆಂಗಳೂರಿನ ವಿನಾಯಕ ಏಜೆನ್ಸಿಯ ಟಿ.ಟಿ. ಚಾಲಕ ಕುಡಿದು ವಾಹನ ಚಾಲಿಸಿದ್ದು, ಅಪಘಾತಕ್ಕೆ ಕಾರಣ ಎನ್ನಲಾಗಿದೆ. ಐದು ಮಂದಿಗೆ ಕುತ್ತಿಗೆ, ಕೈ-ಕಾಲುಗಳಿಗೆ ಏಟಾಗಿದ್ದು, ಎಲ್ಲರೂ ಪ್ರಾಣಾಪಾಯದಿಂದ ಪಾರಾಗಿದ್ದಾರೆ.

ವೀರಾಜಪೇಟೆ ಪೊಲೀಸರು ‘100’ ಸಂಖ್ಯೆಗೆ ಕರೆ ಮಾಡಿದ ಕೂಡಲೆ ಸ್ಪಂದಿಸಿರುವದನ್ನು ಶರು ಸುಬ್ಬಯ್ಯ ಶ್ಲಾಘಿಸಿದ್ದಾರೆ.