ಕೂಡಿಗೆ, ಡಿ. 11 : ಹಾರಂಗಿ ಹಿನ್ನೀರು ಹಾಗೂ ಬೆಂಡೆಬೆಟ್ಟ ವ್ಯಾಪ್ತಿಗಳಿಂದ ಕಾಡಾನೆಗಳ ಹಿಂಡು ಕಳೆದೆರಡು ದಿನಗಳಿಂದ ಹುದುಗೂರು, ಮದಲಾಪುರ, ಸೀಗೆಹೊಸೂರು ವ್ಯಾಪ್ತಿಗಳಲ್ಲಿ ಧಾಳಿ ಮಾಡಿ ಹಾರಂಗಿ ಅಚ್ಚುಕಟ್ಟು ನೀರಿನಲ್ಲಿ ಬೆಳೆಸಲಾಗಿದ್ದ ರೈತರ ಭತ್ತದ ಗದ್ದೆಗಳನ್ನು ನಾಶಗೊಳಿಸಿವೆ.

ಆನೆಕಾಡಿನಿಂದ ಬೆಂಡೆಬೆಟ್ಟ ಮೂಲಕ ಹಾರಂಗಿ ಜಲಾನಯನ ಮುಖ್ಯದ್ವಾರದ ಸಮೀಪವೇ ಧಾವಿಸಿ ಮೀನುಗಾರಿಕಾ ಕೇಂದ್ರದ ಸಮೀಪವಿರುವ ಹುದುಗೂರಿನ ಶಿವಣ್ಣ, ಪ್ರಭಾಕರ, ಮದಲಾಪುರದ ನಾಗರಾಜು, ರಾಮೇಗೌಡ, ಜವರೇಗೌಡ, ಎಸ್.ವಿ,ಸ್ವಾಮಿ ಎಂಬವರ ಗದ್ದೆಗಳಿಗೆ ನುಗ್ಗಿ ಭತ್ತದ ಬೆಳೆಯನ್ನು ನಾಶಪಡಿಸಿವೆ. ಅಲ್ಲದೆ, ಸೀಗೆಹೊಸೂರು ವ್ಯಾಪ್ತಿಯ ಕೃಷ್ಣ, ಚಂದ್ರಶೇಖರ್, ಜಯಣ್ಣ ಅವರು ಬಾಳೆ, ಕೆಸುವಿನಗೆಡ್ಡೆ ಬೆಳೆಗಳನ್ನು ನಷ್ಟಪಡಿಸಿವೆ. ವಲಯಾರಣ್ಯಾಧಿಕಾರಿ ಲಕ್ಷ್ಮೀಕಾಂತ್ ಮತ್ತು ಸಿಬ್ಬಂದಿ ಸ್ಥಳ ಪರಿಶೀಲಿಸಿ ಪರಿಹಾರ ಒದಗಿಸುವ ಭರವಸೆ ನೀಡಿದರು.