ಮಡಿಕೇರಿ, ಡಿ. 8: ಹನುಮ ಜಯಂತಿ ಆಚರಣೆಗೆ ಅವಕಾಶ ನೀಡದೆ, ಸಂಸದ ಪ್ರತಾಪ ಸಿಂಹ ಅವರನ್ನು ಬಂಧಿಸಿರುವ ರಾಜ್ಯ ಸರ್ಕಾರದ ಕ್ರಮ ಖಂಡನೀಯವೆಂದು ಸೋಮವಾರಪೇಟೆ ತಾಲೂಕು ಪಂಚಾಯಿತಿ ಸದಸ್ಯ ಬಲ್ಲಾರಂಡ ಮಣಿ ಉತ್ತಪ್ಪ ಹೇಳಿದ್ದಾರೆ.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಜಿಲ್ಲೆಯ ಹೊಸತೋಟದ ಅಲ್ಪಸಂಖ್ಯಾತರ ಪ್ರಾರ್ಥನಾ ಮಂದಿರಕ್ಕೆ ಇಡೀ ವರ್ಷ ಪೊಲೀಸ್ ಭದ್ರತೆ ನೀಡುವ ಸರ್ಕಾರ, ಹನುಮ ಜಯಂತಿ ಆಚರಣೆಗೆ ಅಗತ್ಯ ಬಂದೋಬಸ್ತ್ ಕಲ್ಪಿಸಬಹುದಿತ್ತು. ಇದ್ಯಾವದನ್ನೂ ಮಾಡದೆ, ಸಂಸದರಿಗೆ ಗೌರವವನ್ನು ನೀಡದೆ ಅವರನ್ನು ಬಂಧಿಸಿದ್ದಾರೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಗೋಷ್ಠಿಯಲ್ಲಿ ಚೆಟ್ಟಳ್ಳಿ ಬಿಜೆಪಿ ಸ್ಥಾನೀಯ ಸಮಿತಿ ಉಪಾಧ್ಯಕ್ಷ ಎನ್.ಎಸ್. ರವಿ, ಕಾರ್ಯದರ್ಶಿ ಬಿ.ಆರ್. ಚೇತನ್, ಚೆಟ್ಟಳ್ಳಿ ಯುವ ಮೋರ್ಚಾ ಅಧ್ಯಕ್ಷ ಆರ್.ಎಂ. ಯದು ಕುಮಾರ್, ಕಾರ್ಯದರ್ಶಿಗಳಾದ ಟಿ.ಆರ್. ಅನಿಲ್ ಕುಮಾರ್ ಹಾಗೂ ಬಿ.ಜೆ.ಪಿ. ಪ್ರಮುಖ ಉಲ್ಲಾಸ್ ಉಪಸ್ಥಿತರಿದ್ದರು.