ಶನಿವಾರಸಂತೆ, ಡಿ. 4: ಇಲ್ಲಿಗೆ ಸಮೀಪದ ನಿಲುವಾಗಿಲು ಗ್ರಾಮದಲ್ಲಿ ಶ್ರೀ ಬಾಲತ್ರಿಪುರ ಸುಂದರಿ ಅಮ್ಮನವರ ಕ್ಷೇತ್ರದಲ್ಲಿ ನಿರ್ಮಿಸಿರುವ ಶ್ರೀ ಗಣಪತಿ ಹಾಗೂ ಶ್ರೀ ನಾಗಮುನೇಶ್ವರ ಕ್ಷೇತ್ರದ 4ನೇ ವರ್ಷದ ಮಹೋತ್ಸವ ಶ್ರದ್ಧಾಭಕ್ತಿಯಿಂದ ನೆರವೇರಿತು.

ಶ್ರೀ ಕ್ಷೇತ್ರದ ತಂತ್ರಿಗಳಾದ ಸುನಿಲ್ ಹಾಗೂ ಧರ್ಮದರ್ಶಿ ಶಿವಕುಮಾರ್ ನೇತೃತ್ವದಲ್ಲಿ ನಿರ್ಮಲದರ್ಶನ ಪೂಜೆ, ಗಣಹೋಮ ಸಲ್ಲಿಸಿ ಬಳಿಕ ಗಣಪತಿ ಮತ್ತು ಶ್ರೀ ಬಾಲತ್ರಿಪುರ ಸುಂದರಿ ಅಮ್ಮನವರ ದೇವಾಲಯದಲ್ಲಿ ಪೂಜೆ ಸಲ್ಲಿಸಲಾಯಿತು. ಸಂಜೆ ಶ್ರೀ ಕ್ಷೇತ್ರದಲ್ಲಿ ರಂಗಪೂಜೆ, ಕಾರ್ತಿಕ ಮಾಸದ ಅಂಗವಾಗಿ ಕಾರ್ತಿಕ ದೀಪಾರಾಧನೆಯನ್ನು ನೆರವೇರಿಸಿ, ದೀಪಗಳಿಂದ ಅಲಂಕರಿಸಲಾಯಿತು.

ಕಾರ್ಯಕ್ರಮಕ್ಕೆ ಸುತ್ತಮುತ್ತಲಿನ ಸ್ಥಳಗಳಿಂದ ನೂರಾರು ಭಕ್ತರು ಆಗಮಿಸಿ, ಬಾಲತ್ರಿಪುರ ಸುಂದರಿ ಅಮ್ಮನವರ ದರ್ಶನ ಪಡೆದು, ಪೂಜೆ ಸಲ್ಲಿಸಿದರು. ಭಕ್ತಾದಿಗಳಿಗೆ ಅನ್ನದಾನ ಏರ್ಪಡಿಸಲಾಗಿತ್ತು.

ದೇವಾಲಯ ಸಮಿತಿ ಅಧ್ಯಕ್ಷ ಎಸ್.ಎಸ್. ವರಪ್ರಸಾದ್, ಗೌರವಾಧ್ಯಕ್ಷ ಎನ್.ಎನ್. ಧರ್ಮಪ್ಪ, ಕಾರ್ಯದರ್ಶಿ ಬೆಸೂರು ಶಾಂತೇಶ್, ಎ.ಕೆ. ರಾಜಶೇಖರ್ ಹಾಗೂ ಸಮಿತಿ ಪದಾಧಿಕಾರಿಗಳು ಹಾಜರಿದ್ದರು.