ಶ್ರೀಮಂಗಲ, ನ. 24: ವೀರಾಜಪೇಟೆ ತಾಲೂಕು ಬಲ್ಯಮುಂಡೂರು ಗ್ರಾಮದ ಶ್ರೀ ಮಾರಮ್ಮ ದೇವಸ್ಥಾನದ ಜೀರ್ಣೋದ್ಧಾರ ಕಾರ್ಯಕ್ರಮದ ಪ್ರಯುಕ್ತ ಡಿ. 7-8 ರಂದು ವಿವಿಧ ಪೂಜಾ ಕಾರ್ಯಕ್ರಮ ನಡೆಯಲಿದೆ. 600 ವರ್ಷಗಳ ಹಿಂದಿನ ದೇವಸ್ಥಾನವಾಗಿರುವ ಇಲ್ಲಿ ಸ್ವರ್ಣ ಪ್ರಶ್ನೆಯಲ್ಲಿ ದೇವಸ್ಥಾನವನ್ನು ಜೀರ್ಣೋದ್ಧಾರ ಮಾಡಬೇಕೆಂದು ತಿಳಿದುಬಂದಿದ್ದು, ಇದಕ್ಕೆ ಸುಮಾರು ರೂ. 50 ಲಕ್ಷ ಖರ್ಚು ತಗಲುತ್ತಿದ್ದು, ಈ ಹಣವನ್ನು ಭಕ್ತಾದಿಗಳಿಂದಲೇ ಸಂಗ್ರಹಿಸಲು ದೇವಸ್ಥಾನ ಆಡಳಿತ ಮಂಡಳಿ ಸಭೆಯಲ್ಲಿ ತೀರ್ಮಾನಿಸಲಾಗಿದೆ.

ಡಿ. 7-8 ರಂದು ಕೇರಳದ ತಳಿಪರಂಬುವಿನ ಪಾಂಡುರಂಗನ್ ತಂತ್ರಿಗಳಿಂದ ದೋಷ ಪರಿಹಾರಕ್ಕಾಗಿ ನವಗ್ರಹ ಪೂಜೆ, ಗಣಪತಿ ಹೋಮ, ಮೃತ್ಯುಂಜಯ ಹೋಮ ಹಾಗೂ ಇತರ ಪೂಜಾ ಕಾರ್ಯಗಳು ನಡೆಯಲಿದೆ ಎಂದು ದೇವತಕ್ಕರು, ದೇವಸ್ಥಾನದ ಆಡಳಿತ ಮಂಡಳಿ ಪ್ರಕಟಣೆಯಲ್ಲಿ ತಿಳಿಸಿದೆ.