ಮಡಿಕೇರಿ, ನ. 21: ಪಾಲಿಬೆಟ್ಟದ ಸರಕಾರಿ ಪ್ರೌಢಶಾಲೆಯ ಗ್ರಾಹಕರ ಕ್ಲಬ್‍ನ ವರಿಯಿಂದ ವಿದ್ಯಾರ್ಥಿಗಳಿಗೆ ಕಾನೂನಿನ ಕುರಿತು ಮಾಹಿತಿ ಕಾರ್ಯಾಗಾರ ನಡೆಯಿತು. ಶಾಲಾ ಮುಖ್ಯ ಶಿಕ್ಷಕಿ ಬಿ.ಆರ್. ಗಾಯತ್ರಿ ಅಧ್ಯಕ್ಷತೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಮಡಿಕೇರಿಯ ವಕೀಲ ಹಾಗೂ ನೋಟರಿ ಕೆ.ಎಂ. ಕುಂಞÂ ಅಬ್ದುಲ್ಲ ಸಂಪನ್ಮೂಲ ವ್ಯಕ್ತಿಯಾಗಿ ಆಗಮಿಸಿ, ಮಾತನಾಡಿ, ಕಾನೂನು ಎಂದರೇನು? ಸಮಾಜದಲ್ಲಿ ಉದ್ಭವಿಸುವ ಸಮಸ್ಯೆಗಳು ಹಾಗೂ ಕಾನೂನಿನಲ್ಲಿರುವ ಪರಿಹಾರಗಳು ಇತ್ಯಾದಿ ಕುರಿತು ವಿದ್ಯಾರ್ಥಿಗಳ ಮನಮುಟ್ಟುವಂತೆ ವಿವರಣೆ ನೀಡಿದರು. ಪ್ರತಿಯೊಬ್ಬರೂ ದೇಶದ ಕಾನೂನನ್ನು ಗೌರವಿಸಿ ಸತ್ಪ್ರಜೆಯಾಗಿ ಬಾಳಬೇಕೆಂದು ಹೇಳಿದ ಅವರು, ಮಾಜಿ ರಾಷ್ಟ್ರಪತಿ ಅಬ್ದುಲ್ ಕಲಾಂ, ಸಂವಿಧಾನ ಶಿಲ್ಪಿ ಡಾ. ಬಾಬಾ ಸಾಹೇಬ್ ಅಂಬೇಡ್ಕರ್ ಮುಂತಾದ ಮಹನೀಯರುಗಳ ಆದರ್ಶವನ್ನು ಮೈಗೂಡಿಸಿಕೊಳ್ಳುವಂತೆ ಕರೆ ನೀಡಿದರು. ಗ್ರಾಹಕರ ಕ್ಲಬ್ ಕಾರ್ಯದರ್ಶಿ ಸುಮಿತ್ರ ಹಾಗೂ ಶಿಕ್ಷಕರು ಹಾಜರಿದ್ದರು. ಸಹಶಿಕ್ಷಕ ಯು.ಕೆ. ಅಶ್ರಫ್ ಸ್ವಾಗತ ಭಾಷಣ ಮಾಡಿದರು. ಮಮತಾ ಕಾಮತ್ ವಂದಿಸಿದರು.