ಪೊನ್ನಂಪೇಟೆ, ಅ. 30 : ಕೊಡಗಿನ ಕೆಲವು ಜನತೆ ಕೋಮುವಾದಿಗಳ ಷಡ್ಯಂತ್ರಕ್ಕೆ ಬಲಿಯಾಗಿ ಆಲೋಚನಾ ಶಕ್ತಿಯನ್ನೇ ಕಳೆದುಕೊಂಡಿದ್ದಾರೆ. ಇದರಿಂದ ಕೆಲವರ ಮೆದುಳನ್ನು ಬೇಡಿ ಹಾಕಿ ಬಂಧಿಸಿದಂತಾಗಿದೆ. ತಮ್ಮ ಮೆದುಳಿಗೆ ಮತಾಂಧರಿಂದ ಜಡಿಯಲ್ಪಟ್ಟ ಬೇಡಿಯನ್ನು ತೆರವುಗೊಳಿಸಿ ಷಡ್ಯಂತ್ರದಿಂದ ಹೊರ ಬರುವಂತೆ ಮಾಜಿ ಶಾಸಕ ಎ. ಕೆ. ಸುಬ್ಬಯ್ಯ ಹೇಳಿದ್ದಾರೆ. ಸುಳ್ಳನ್ನೇ ಸತ್ಯವೆಂದು ನಂಬಿಕೊಂಡಂತ್ತಿರುವ ಕೆಲವು ಕೊಡವರು ಇನ್ನಾದರೂ ಸತ್ಯಶೋಧನೆ ನಡೆಸಲು ಚರಿತ್ರೆಯನ್ನು ಸಮಗ್ರವಾಗಿ ಅಧ್ಯಯನ ಮಾಡಲಿ ಎಂದು ಸಲಹೆ ನೀಡಿದ್ದಾರೆ.

ಟಿಪ್ಪು ಜಯಂತಿ ಸರಕಾರಿ ಕಾರ್ಯಕ್ರಮವಾಗಿದ್ದು, ಅದನ್ನು ತಡೆಯುವ ಅಧಿಕಾರ ಯಾರಿಗೂ ಇಲ್ಲ. ಒಂದು ವೇಳೆ ಟಿಪ್ಪು ಜಯಂತಿ ಆಚರಣೆಗೆ ಸಹಮತವಿಲ್ಲದಿದ್ದರೆ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳದೆ ಇರಬಹುದು. ಅಥವಾ ಅದನ್ನು ಕಾನೂನು ಬದ್ಧವಾಗಿ ಆಕ್ಷೇಪಿಸಲು ಎಲ್ಲರೂ ಸ್ವತಂತ್ರರು. ಆದರೆ ಸರಕಾರಿ ಕಾರ್ಯಕ್ರಮವಾದ ಟಿಪ್ಪು ಜಯಂತಿಗೆ ತಡೆಯೊಡ್ಡುತ್ತೇವೆ ಎಂದು ಬಹಿರಂಗವಾಗಿ ಬೆದರಿಕೆಯೊಡ್ಡುವದು ಸಂವಿಧಾನ ಮತ್ತು ಪ್ರಜಾಪ್ರಭುತ್ವ ವಿರೋಧಿ ಕೆಲಸವಾಗಿದೆ ಎಂದು ಹೇಳಿದ್ದಾರೆ.

ಟಿಪ್ಪು ಸುಲ್ತಾನ್ ಕೊಡವರನ್ನು ಕೊಂದ ಎಂಬ ಸುಳ್ಳನ್ನು ಪದೇ ಪದೇ ಹೇಳಿ ಕೊಡವರ ಭಾವನೆಯನ್ನು ಕೆರಳಿಸಿ ಅವರನ್ನು ಬೀದಿ ಕಾಳಗಕ್ಕೆ ತಳ್ಳಿ ಆ ಮೂಲಕ ಕೊಡವರನ್ನು ಬಲಿಪಶುವನ್ನಾಗಿಸುವ ವ್ಯವಸ್ಥಿತವಾದ ಹುನ್ನಾರವನ್ನು ಸಂಘ ಪರಿವಾರ ಕಳೆದ ಕೆಲವು ಸಮಯದಿಂದ ಮಾಡುತ್ತಾ ಬರುತ್ತಿದೆ. ಇದಕ್ಕೆ ಭಾರತೀಯ ಜನತಾ ಪಕ್ಷದಲ್ಲಿರುವ ಬಹುತೇಕ ಕೊಡವ ಜನಾಂಗದವರು ಬಲಿಯಾಗುತ್ತಿದ್ದು, ಸುಳ್ಳು ಪ್ರಚಾರದ ಪ್ರಭಾವಕ್ಕೆ ಒಳಗಾಗಿ ಟಿಪ್ಪು ವಿರೋಧಿ ನೀತಿಯನ್ನು ರಾಜಕೀಯ ಗಾಳವನ್ನಾಗಿಸಿಕೊಂಡಿದ್ದಾರೆ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಟಿಪ್ಪು ಸುಲ್ತಾನ್ ಕೊಡವರನ್ನು ಕಗ್ಗೊಲೆ ಮಾಡಿದ ಎಂಬದಕ್ಕೆ ಯಾವದೇ ಚಾರಿತ್ರಿಕ ಆಧಾರಗಳಿಲ್ಲ. ಒಂದು ವೇಳೆ ಇದಕ್ಕೆ ಸೂಕ್ತ ಪುರಾವೆ ಒದಗಿಸಿದ್ದಲ್ಲಿ ತಮ್ಮ ನಿಲುವನ್ನು ಬದಲಿಸಲು ಸದಾ ಸಿದ್ಧವಿರುವದಾಗಿ ಹೇಳಿದ್ದಾರೆ.