ಶನಿವಾರಸಂತೆ, ಸೆ. 15: ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ ಸಾಲ ಸಾಲೇತರ ಒಟ್ಟು ವಹಿವಾಟು ರೂ. 108.78 ಕೋಟಿ ವಹಿವಾಟು ನಡೆಸಿದ್ದು, ಪ್ರಸಕ್ತ ಸಾಲಿನಲ್ಲಿ ರೂ. 28.54 ಲಕ್ಷ ನಿವ್ವಳ ಲಾಭಗಳಿಸಿ ‘ಎ ಗ್ರೇಡ್’ ಪಡೆದಿದೆ ಎಂದು ಸಂಘದ ಅಧ್ಯಕ್ಷ ಎಸ್.ಸಿ. ಶರತ್ ಶೇಖರ್ ಹೇಳಿದರು. ಪಟ್ಟಣದ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಸಭಾಂಗಣದಲ್ಲಿ ನಡೆದ ಸಂಘದ 2016-17ನೇ ಸಾಲಿನ ವಾರ್ಷಿಕ ಮಹಾಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಸಂಘದಲ್ಲಿ 2325 ಮಂದಿ ಸದಸ್ಯರಿದ್ದು ರೂ. 96.58 ಲಕ್ಷ ಪಾಲು ಬಂಡವಾಳ ಹೊಂದಿರುತ್ತದೆ. ಸದಸ್ಯರು, ಸದಸ್ಯೇತರರಿಂದ ರೂ. 1109.28 ಲಕ್ಷ ಠೇವಣಿ ಹೊಂದಿದೆ. ಸದಸ್ಯರ ಅನುಕೂಲಕ್ಕಾಗಿ ಕೃಷಿ ಮತ್ತು ಕೃಷಿಯೇತರ ಸಾಲ ಸೌಲಭ್ಯ ಕೊಡುವ ವ್ಯವಸ್ಥೆ ಮಾಡಲಾಗಿದೆ. ಮಾರಾಟ ವಿಭಾಗದಲ್ಲಿ ಗೊಬ್ಬರ ಹಾಗೂ ಕ್ರಮಿನಾಶಕ ರೂ. 200.16 ಲಕ್ಷ ವ್ಯಾಪಾರ ವಹಿವಾಟು ಮಾಡಲಾಗಿ ರೂ. 8.67 ಲಕ್ಷ ವ್ಯಾಪಾರ ಲಾಭಗಳಿಸಿದೆ ಎಂದು ಮಾಹಿತಿ ನೀಡಿದರು.

ರೈತರ ಹಿತದೃಷ್ಟಿಯಿಂದ ಹಲವು ಯೋಜನೆಗಳನ್ನು ರೂಪಿಸಿಕೊಂಡು ಅಭಿವೃದ್ಧಿ ಪಥದಲ್ಲಿ ಸಾಗುತ್ತಿರುವ ಸಂಘದ ಮುಂದಿನ ಎಲ್ಲಾ ವ್ಯವಹಾರಗಳಿಗೂ ನಿರ್ದೇಶಕರ ಹಾಗೂ ಸದಸ್ಯರ ಸಹಕಾರ ಮುಖ್ಯವಾಗಿದೆ ಎಂದು ಹೇಳಿದರು.

ಕಿತ್ತೂರು ರಾಣಿ ಚೆನ್ನಮ್ಮ ವೃತ್ತದಲ್ಲಿರುವ ಸಂಘದ ಶಾಖೆಗೆ ಸ್ವಂತ ಕಟ್ಟಡ ನಿರ್ಮಿಸುವಂತೆ ಸದಸ್ಯ ಚಂದ್ರೇಗೌಡ ಸಲಹೆ ನೀಡಿದರು. ಇತರ ಸದಸ್ಯರಾದ ಮಹಮ್ಮದ್ ಪಾಶ, ಕೊಮಾರಪ್ಪ, ಎಸ್.ಪಿ. ರಾಜ, ಸಿ.ಕೆ. ಕುಮಾರಪ್ಪ, ಎ.ಎಂ. ಆನಂದ್ ಹಾಗೂ ಜಗನ್ ಪಾಲ್ ಮಾತನಾಡಿ, ವಸೂಲಾತಿ ಕ್ರಮಬದ್ಧವಾಗಿ ನಡೆದರೆ ಸಂಘ ಅಭಿವೃದ್ಧಿ ಹೊಂದುತ್ತದೆ. ಅಧಿಕ ಲಾಭ ಬಂದಾಗ ಡಿವಿಡೆಂಡ್ ಜಾಸ್ತಿ ಮಾಡಬೇಕು ಎಂದು ಆಗ್ರಹಿಸಿದರು.

ಶೇ. 14 ರಷ್ಟು ಡಿವಿಡೆಂಡ್ ಜಾಸ್ತಿ ಮಾಡಿರುವದಾಗಿ ತಿಳಿಸಿದ ಅಧ್ಯಕ್ಷರು ಸ್ವಸಹಾಯ ಸಂಘದ ಕಾರ್ಯಚಟುವಟಿಕೆ ಪರಿಶೀಲಿಸಿ ರೂ. 3 ರಿಂದ ರೂ. 5 ಲಕ್ಷಕ್ಕೆ ಸಾಲ ಸೌಲಭ್ಯ ಹೆಚ್ಚಿಸಿರುವದಾಗಿಯೂ ತಿಳಿಸಿದರು. ಸದಸ್ಯ ರಂಗಸ್ವಾಮಿ ಅವರ ಕೋರಿಕೆಯಂತೆ ಕಾಫಿ ತೋಟಗಳಲ್ಲಿ ಶಂಕುಹುಳು ನಿಯಂತ್ರಣಕ್ಕೆ ರೂ. 10 ಸಾವಿರ ಮೌಲ್ಯದ ಕ್ರಿಮಿನಾಶಕ ಔಷಧಿ ಹಾಗೂ ಹಿಂದೂ ರುದ್ರಭೂಮಿ ಸಮಿತಿ ಅಧ್ಯಕ್ಷ ಕೆ.ಪಿ. ಶಿವಪ್ಪ, ಸದಸ್ಯರಾದ ಚಂದ್ರಶೇಖರ್ ಮತ್ತು ರಂಜನ್ ಅವರ ಕೋರಿಕೆಯಂತೆ ರುದ್ರಭೂಮಿ ಅಭಿವೃದ್ಧಿಗೆ ರೂ. 5 ಸಾವಿರ ವಂತಿಗೆ ನೀಡಲು ಸಂಘದ ಆಡಳಿತ ಮಂಡಳಿ ಸಮ್ಮತಿಸಿತು.

ಸಂಘದ ಉಪಾಧ್ಯಕ್ಷ ಎಸ್.ವಿ. ಜಗದೀಶ್, ನಿರ್ದೇಶಕರಾದ ಜೆ.ಸಿ. ಲೋಕೇಶ್, ಟಿ.ಆರ್. ಗಿರೀಶ್, ಆರ್.ಎಂ. ಭುವನ್, ಡಿ. ಅರವಿಂದ್, ಎಸ್.ಎನ್. ರಘು, ಡಿ.ಈ. ಬಸಪ್ಪ, ಕೆ.ಪಿ. ಪುಷ್ಪಾ, ಸವಿತ ಸತೀಶ್ ಹಾಗೂ ಸಹಕಾರ ಸಂಘಗಳ ಮೇಲ್ವಿಚಾರಕ ಎಸ್.ಡಿ. ಶಶಿಕುಮಾರ್ ಉಪಸ್ಥಿತರಿದ್ದರು. ಉಪಾಧ್ಯಕ್ಷ ಎಸ್.ವಿ. ಜಗದೀಶ್ ವಂದಿಸಿದರು.